ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದಲ್ಲಿ ಇದೀಗ ಭಾರೀ ಚರ್ಚೆಯೊಂದು ಶುರುವಾಗಿದೆ. ಮುಂಬರುವ 2027ರ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ, ಟಿ20 ಮಾದರಿಯಲ್ಲಿ ಅಬ್ಬರಿಸುತ್ತಿರುವ ಯುವ ತಾರೆಗಳಾದ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಏಕದಿನ ತಂಡಕ್ಕೂ ಪರಿಗಣಿಸಬೇಕೆಂಬ ಕೂಗು ಬಲವಾಗುತ್ತಿದೆ.
ಇದು ಸಹಜವಾಗಿಯೇ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತದ ಖಾಯಂ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳ ವಲಯದಲ್ಲಿ ಈ ವಿಚಾರ ಈಗ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಟಿ20 ವಿಶ್ವಕಪ್ನಲ್ಲಿ ಮಿಂಚಿದ ತಾರೆಗಳಿಗೆ ಒಲಿಯಲಿದೆಯಾ ಏಕದಿನ ಅವಕಾಶ?
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ಬಹುತೇಕ ಮರೆಯಾಗಿದ್ದ ಹೆಸರಾಗಿದ್ದ ಎಡಗೈ ಬ್ಯಾಟರ್ ಇಶಾನ್ ಕಿಶನ್, ಕೋಚ್ಗಳು ಹಾಗೂ ಆಯ್ಕೆದಾರರ ಬೆಂಬಲದೊಂದಿಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಬರೋಬ್ಬರಿ 319 ರನ್ ಸಿಡಿಸುವ ಮೂಲಕ ಟೂರ್ನಿಯ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಲ್ಲದೆ, ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರಿ ಮಿಂಚಿದ್ದಾರೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ‘ಪ್ಲೇಯರ್ ಆಫ್ ದ ಸೀರೀಸ್’ ಪ್ರಶಸ್ತಿಗೆ ಭಾಜನರಾಗುವ ಮೂಲಕ ತಾವೆಷ್ಟು ಪ್ರಭಾವಿ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಇಬ್ಬರು ಆಟಗಾರರ ಅಮೋಘ ಫಾರ್ಮ್ ಇದೀಗ ಅವರನ್ನು ಏಕದಿನ ತಂಡದ ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಡವನ್ನು ಹೆಚ್ಚಿಸಿದೆ.
ಕೆ.ಎಲ್. ರಾಹುಲ್ ಭವಿಷ್ಯವೇನು? ಶುರುವಾಯ್ತು ಪರ-ವಿರೋಧದ ಚರ್ಚೆಗಳು
ಏಕದಿನ ಮಾದರಿಯಲ್ಲಿ ಭಾರತವು ಪ್ರಸ್ತುತ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಪ್ರಮುಖ ವಿಕೆಟ್ ಕೀಪರ್ ಆಯ್ಕೆಗಳಾಗಿ ಉಳಿಸಿಕೊಂಡಿದೆ. ಆದರೆ, 2024ರ ಶ್ರೀಲಂಕಾ ಸರಣಿಯ ನಂತರ ಪಂತ್ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಕೆ.ಎಲ್. ರಾಹುಲ್ ಅವರೇ ಕೀಪಿಂಗ್ ಜವಾಬ್ದಾರಿ ಹೊತ್ತುಕೊಂಡಿದ್ದು, ಕೆಳ-ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಾಯಕ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಗೈರಿನಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಯೂ ರಾಹುಲ್ ಅವರದ್ದಾಗಿದೆ. ಆದರೆ, ಪತ್ರಕರ್ತ ಅಭಿಷೇಕ್ ತ್ರಿಪಾಠಿ ಅವರಂತಹ ತಜ್ಞರು, ರಾಹುಲ್ ಬದಲಿಗೆ ಕಿಶನ್ ಅಥವಾ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ವಿರುದ್ಧವಾಗಿ, ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಸಿಡಿಸಿದ ದಾಖಲೆ ಹೊಂದಿದ್ದರೂ ಕಿಶನ್ಗಿಂತ ರಾಹುಲ್ ಅವರಂತಹ ದೀರ್ಘಾವಧಿಯ ಅನುಭವಿ ಆಟಗಾರನ ಅಗತ್ಯ ತಂಡಕ್ಕೆ ಹೆಚ್ಚಾಗಿದೆ ಎಂಬುದು ಮತ್ತೋರ್ವ ಕ್ರೀಡಾ ಪತ್ರಕರ್ತ ಕುಶಾನ್ ಸರ್ಕಾರ್ ಅವರ ವಾದವಾಗಿದೆ.
ವದಂತಿಗಳನ್ನು ತಳ್ಳಿಹಾಕಿದ ಮಾಜಿ ವೇಗಿ ದೊಡ್ಡ ಗಣೇಶ್
.ಎಲ್. ರಾಹುಲ್ ಅವರನ್ನು ಕೈಬಿಟ್ಟು ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ಅವರನ್ನು ಕರೆತರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ನೂರಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಭಾರತದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಈ ವರದಿಗಳನ್ನು ನೋಡಿ ನಕ್ಕಿದ್ದಾರೆ. ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಅವರನ್ನು ಬದಲಾಯಿಸುವ ಮಾತುಗಳು ಹಾಸ್ಯಾಸ್ಪದ ಎಂದಿದ್ದಾರೆ. ದ್ವಿಪಕ್ಷೀಯ ಸರಣಿಗಳಲ್ಲಿ ರಾಹುಲ್ ಉತ್ತಮ ಫಾರ್ಮ್ನಲ್ಲಿದ್ದರೂ, ಐಸಿಸಿ ಟೂರ್ನಿಗಳಲ್ಲಿ ಅವರ ಪ್ರದರ್ಶನ ಮಂಕಾಗುತ್ತಿದೆ ಎಂಬ ಟೀಕೆಗಳ ನಡುವೆಯೂ, ಏಕದಿನ ಕ್ರಿಕೆಟ್ಗೆ ರಾಹುಲ್ ಅವರೇ ಅತ್ಯುತ್ತಮ ವಿಕೆಟ್ ಕೀಪಿಂಗ್ ಆಯ್ಕೆ ಎಂಬುದು ಗಣೇಶ್ ಅವರ ನಿಲುವಾಗಿದೆ. ಇಶಾನ್ ಕಿಶನ್ ಅವರನ್ನು ಕೇವಲ ಬ್ಯಾಕ್-ಅಪ್ ಕೀಪರ್ ಆಗಿ ಪರಿಗಣಿಸಬಹುದೇ ಹೊರತು, ರಾಹುಲ್ ಅವರನ್ನು ನೇರವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೂ, ಮುಂಬರುವ 2027ರ ವಿಶ್ವಕಪ್ ದೃಷ್ಟಿಯಿಂದ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ರಾಹುಲ್ ಮತ್ತಷ್ಟು ಸ್ಥಿರ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ ಎಂಬುದಂತೂ ಸತ್ಯ.
ಹಳೆಯ ತಪ್ಪನ್ನು ಮರುಕಳಿಸದಿರಲಿ ಕೋಚ್ ಗೌತಮ್ ಗಂಭೀರ್
ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಶುಭ್ಮನ್ ಗಿಲ್ ತೋರಿದ ಭರ್ಜರಿ ಫಾರ್ಮ್ ಅನ್ನು ಆಧರಿಸಿ, ಕೋಚ್ ಗೌತಮ್ ಗಂಭೀರ್ ಅವರನ್ನು ಟಿ20 ಮಾದರಿಗೂ ಆಯ್ಕೆ ಮಾಡಿದ್ದರು. ಆದರೆ, 15 ಪಂದ್ಯಗಳಲ್ಲಿ ಒಂದೂ ಅರ್ಧಶತಕವಿಲ್ಲದೆ ಕೇವಲ 291 ರನ್ ಗಳಿಸಿದ ಗಿಲ್, ಅಂತಿಮವಾಗಿ ಟಿ20 ವಿಶ್ವಕಪ್ ತಂಡದಿಂದಲೇ ಹೊರಬೀಳಬೇಕಾಯಿತು. ಒಂದು ಮಾದರಿಯ ಕ್ರಿಕೆಟ್ನ ಫಾರ್ಮ್ ಅನ್ನು ಮತ್ತೊಂದು ಮಾದರಿಗೆ ಅನ್ವಯಿಸುವುದು ಯಾವಾಗಲೂ ಯಶಸ್ವಿಯಾಗುವುದಿಲ್ಲ ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಇದೀಗ ಟಿ20ಯಲ್ಲಿ ಅಬ್ಬರಿಸುತ್ತಿರುವ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಏಕದಿನ ತಂಡಕ್ಕೆ ಸೇರಿಸುವಾಗ ಗಂಭೀರ್ ಅದೇ ಎಚ್ಚರಿಕೆ ವಹಿಸಬೇಕಿದೆ. ಏಕದಿನ ಪಂದ್ಯಗಳಲ್ಲಿ ಪವರ್ಪ್ಲೇ ಲಾಭವಿರುವುದಿಲ್ಲ ಮತ್ತು ಟಾಪ್ ಆರ್ಡರ್ ಬದಲು ಕೆಳ ಕ್ರಮಾಂಕದಲ್ಲಿ ವಿಭಿನ್ನ ಪಾತ್ರವನ್ನು ನಿಭಾಯಿಸಬೇಕಾದ ಸವಾಲು ಈ ಆಟಗಾರರ ಮುಂದಿದೆ. ಹೀಗಾಗಿ, ಯಾವುದೇ ದಿಢೀರ್ ಪ್ರಯೋಗಗಳನ್ನು ಮಾಡುವ ಬದಲು, ಅನುಭವಿ ಕೆ.ಎಲ್. ರಾಹುಲ್ ಅವರನ್ನೇ ನೆಚ್ಚಿಕೊಂಡು, ಕಿಶನ್ ಮತ್ತು ಸ್ಯಾಮ್ಸನ್ ಅವರನ್ನು ಉತ್ತಮ ಬ್ಯಾಕ್-ಅಪ್ ಆಟಗಾರರನ್ನಾಗಿ ಬೆಳೆಸುವುದು ಭಾರತೀಯ ಕ್ರಿಕೆಟ್ನ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನವಾಗಲಿದೆ.
ಇದನ್ನೂ ಓದಿ : ಪಾಕ್ ಆಟಗಾರನ ವಿಚಿತ್ರ ರನ್ ಔಟ್ : ‘ಸ್ಪಿರಿಟ್ ಆಫ್ ಕ್ರಿಕೆಟ್’ ಬಗ್ಗೆ ಮತ್ತೆ ಭುಗಿಲೆದ್ದ ಚರ್ಚೆ



















