ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ದಾಳಿಗೆ 26 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ದೇಶಾದ್ಯಂತ ಆಗ್ರಹಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಪಾಕಿಸ್ತಾನಕ್ಕೆ ವ್ಯಾಪಾರ ಸ್ಥಗಿತದ ಪೆಟ್ಟು ನೀಡಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದೆ.
ಮಾಂಸ ಕೆ.ಜಿಗೆ 798 ರೂ., ಅಕ್ಕಿ ಕೆ.ಜಿಗೆ 339 ರೂಪಾಯಿ ಇದೆ. ಇನ್ನು ಒಂದು ಡಜನ್ ಮೊಟ್ಟೆಗೆ 332 ರೂ., ಒಂದು ಕೆಜಿ ಸೇಬಿಗೆ 288 ರೂ. ಆಗಿದೆ. ಒಂದು ಲೀಟರ್ ಹಾಲಿಗೆ 224 ರೂ. ಇದ್ದರೆ, ಅರ್ಧ ಕೆ.ಜಿ ಬ್ರೆಡ್ಡಿಗೆ 161 ರೂ. ಆಗಿದೆ. ಒಂದು ಕೆ.ಜಿ ಬಾಳೆ ಹಣ್ಣಿಗೆ 176 ರೂ. ತೆರಬೇಕಾಗಿದ್ದರೆ, ಒಂದು ಕೆ.ಜಿ ಟೊಮ್ಯಾಟೋಗೆ 150 ರೂ. ಆಗಿದೆ.
ಕೇಂದ್ರ ಸರ್ಕಾರವು ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಿದೆ. ಭಾರತ-ಪಾಕಿಸ್ತಾನ ನಡುವೆ ವರ್ಷಕ್ಕೆ 3,800 ಕೋಟಿ ರೂ.ಗಿಂತ ಹೆಚ್ಚು ದ್ವಿಪಕ್ಷೀಯ ವಹಿವಾಟು ನಡೆಯುತ್ತದೆ. ಹಾಗಾಗಿ, ಪಾಕಿಸ್ತಾನಕ್ಕೆ ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಾಗಿದೆ.
ಇವುಗಳ ಜತೆಗೆ ಔಷಧ, ರಸಗೊಬ್ಬರ, ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳನ್ನೂ ಭಾರತವೇ ಪೂರೈಸುತ್ತದೆ. ಇದು ಕೂಡ ಸ್ಥಗಿತಗೊಂಡಿರುವ ಕಾರಣ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.