ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದು, ಕೋರ್ಟ್ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಆರೋಪಿಗಳು ಇಂದು 57ನೇ ಸಿಸಿಎಚ್ ಕೋರ್ಟ್ ಗೆ ಆರೋಪಿಗಳು ಹಾಜರಾಗಿದ್ದರು. ಪವಿತ್ರಾಗೌಡ ಅವರು ಕೋರ್ಟ್ ಒಳಗೆ ಹಾಜರಾಗಿದ್ದಾರೆ. ಕೋರ್ಟ್ ಹಾಲ್ ಹೊರಗಡೆ ದರ್ಶನ್ ನಿಂತಿದ್ದರು. ನಟ ದರ್ಶನ್ ಕೋರ್ಟ್ ಗೆ ಆಗಮಿಸುತ್ತಿದ್ದಂತೆ ಇನ್ನಿತರ ಆರೋಪಿಗಳ ಜೊತೆಗೆ ಮಾತನಾಡಿದ್ದಾರೆ. ಇಂದು ಬಹುತೇಕ ಎಲ್ಲ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಿಂದ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು, ಎಫ್ ಎಸ್ ಎಲ್ ವರದಿ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಕೆಲವೊಂದು ಸಾಕ್ಷ್ಯಗಳನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನಗಳ ರಿಲೀಸ್ ಪ್ರಕ್ರಿಯೆ ದಾಖಲೆಗಳನ್ನು ಒಳಗೊಂಡ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪವಿತ್ರಾಗೌಡ ಹಾಗೂ ದರ್ಶನ್ ಸೇರಿದಂತೆ ಆರೋಪಿಗಳು ನ್ಯಾಯಾಧೀಶರ ಎದುರು ಹಾಜರಾಗಿದ್ದರು. A3 ಪವನ್ ಕೋರ್ಟ್ ಗೆ ಗೈರಾಗಿದ್ದರು.
ಕೋರ್ಟ್ ಜುಲೈ 10ಕ್ಕೆ ವಿಚಾರಣೆ ಮುಂದೂಡಿತು. ಈ ವೇಳೆ ಕೋರ್ಟ್, A11 ಅರೋಪಿ ನಾಗರಾಜ್ ಹೊಸಪೇಟೆಗೆ ಹೋಗಲು ಅನುಮತಿ ನೀಡಿತು. ಕ್ರಾಂತಿ ಚಿತ್ರದ ಚಿತ್ರೀಕರಣ ವೇಳೆ ಕೇಸ್ ದಾಖಲಾಗಿದ್ದರಿಂದಾಗಿ ವಿಚಾರಣೆಗೆ ಹಾಜರಾಗಲು ಆರೋಪಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಕೇಸ್ ಸಂಬಂಧ ಹೊಸಪೇಟೆಗೆ ಹೋಗಲು ಕೋರ್ಟ್ ಅನುಮತಿ ನೀಡಿದೆ.