ಕೊಪ್ಪಳ: ವಿದೇಶಿ ಹಾಗೂ ದೇಶಿ ಪ್ರವಾಸಿಗರ ಮೇಲೆ ಅತ್ಯಾಚಾರ ನಡೆಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳನ್ನು ಗಂಗಾವತಿಯ (Gangavathi) ಸಾಯಿನಗರದ ಮಲ್ಲೇಶ, ಚೇತನಸಾಯಿ ಎಂದು ಗುರುತಿಸಲಾಗಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪೂರ ಕೆರೆ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ಕುಳಿತಿದ್ದ 5 ಜನ ಪ್ರವಾಸಿಗರ ಮೇಲೆ ಗುರುವಾರ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮೂವರು ಪುರುಷರನ್ನು ಕೆರೆಗೆ ತಳ್ಳಿ, ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಆತ್ಯಾಚಾರ ನಡೆಸಿದ್ದರು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಇಬ್ಬರು ಬಲೆಗೆ ಬಿದ್ದಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಘಟನೆ ಏನು?
ಆನೆಗೊಂದಿಯ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದ 5 ಜನ ಪ್ರವಾಸಿಗರು ಮಾ.6 ರಂದು ರಾತ್ರಿ ಊಟ ಮುಗಿಸಿಕೊಂಡು ಸುತ್ತಾಡಲು ತೆರಳಿದ್ದರು. ಸಣಾಪೂರ ಕೆರೆಯ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ಸಂಗೀತ ಆಲಿಸುತ್ತಾ ಕುಳಿತಾಗ ಮೂವರು ದುಷ್ಕರ್ಮಿಗಳು ಹಣ ಕಳ್ಳತನ ಮಾಡಲು ಬಂದು ಗಲಾಟೆ ನಡೆಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ದುಷ್ಕರ್ಮಿಗಳು, ಮೂವರು ಪುರುಷರ ಮೇಲೆ ಹಲ್ಲೆ ನಡೆಸಿ, ಅವರನ್ನು ಕೆರೆಗೆ ತಳ್ಳಿ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕೆರೆಗೆ ಬಿದ್ದ ಮೂವರ ಪೈಕಿ ಇಬ್ಬರು ದಡಕ್ಕೆ ಸೇರಿದ್ದು, ಇನ್ನೋರ್ವನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ದಡಕ್ಕೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತದೇಹ 24 ಗಂಟೆಗಳ ನಂತರ ಪತ್ತೆಯಾಗಿದೆ. ಅತ್ಯಾಚಾರಕ್ಕೊಳಗಾದವರನ್ನು ಇಸ್ರೇಲ್ ಮಹಿಳೆ ಹಾಗೂ ದೇಶಿ ಮಹಿಳೆ ಎಂದು ತಿಳಿಯಲಾಗಿದ್ದು, ಕೊಲೆಯಾಗಿರುವ ಪ್ರವಾಸಿಯನ್ನು ಓರಿಸ್ಸಾ ಮೂಲದ ಬೀಬಾಷಾ ಎನ್ನಲಾಗಿದೆ. ಜರ್ಮನ್ ದೇಶದ ಡೇನೈಲ್ ಹಾಗೂ ಮಹಾರಾಷ್ಟ್ರ ಮೂಲದ ಪಂಕಜ್ ಎಂಬುವವರು ಗಾಯಗೊಂಡಿದ್ದಾರೆ.