ಆಪರೇಷನ್ ಸಿಂಧೂರ್ ಕುರಿತಾಗಿ ಲೋಕಸಭೆ ಮುಂಗಾರು ಅಧಿವೇಶನದಲ್ಲಿ ಎನ್ಡಿಎ ಸರ್ಕಾರಕ್ಕೆ ಪ್ರಶ್ನೆಗಳ ಚಾಟಿ ಬೀಸಿದ್ದ ವಿಪಕ್ಷಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ತಿರುಗೇಟು ನೀಡಿದ್ದಾರೆ.
ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಏನು ಸಂಬಂಧ? ಎಂದು ಕೇಳಿದ್ದ ಕಾಂಗ್ರೆಸ್ ಸಂಸದ ಪಿ. ಚಿದಂಬರಂ ವಿರುದ್ಧ ಅಮಿತ್ ಶಾ ಹರಿಹಾಯ್ದಿದ್ದಾರೆ. “ಕಾಂಗ್ರೆಸ್ ನಾಯಕರು ಭಯೋತ್ಪಾದಕರು ಎಲ್ಲಿಂದ ಬಂದರು ಮತ್ತು ಅದಕ್ಕೆ ಯಾರು ಹೊಣೆ ಎಂದು ನಮ್ಮನ್ನು ಕೇಳುತ್ತಿದ್ದರು. ಖಂಡಿತ, ನಾವು ಅಧಿಕಾರದಲ್ಲಿರುವುದರಿಂದ ಅದಕ್ಕೆ ಉತ್ತರ ನೀಡುರುವುದು ನಮ್ಮ ಜವಾಬ್ದಾರಿ. ನಿನ್ನೆ, ಮಾಜಿ ಗೃಹ ಸಚಿವ ಚಿದಂಬರಂ ಪ್ರಶ್ನೆಯನ್ನು ಎತ್ತಿದರು.
ಭಯೋತ್ಪಾದಕರು ಪಾಕಿಸ್ತಾನದಿಂದ ಬಂದರು ಎಂಬುದಕ್ಕೆ ಪುರಾವೆ ಏನು? ಎಂದು ಪ್ರಶ್ನಿಸಿದ್ದರು. ಪಾಕಿಸ್ತಾನವನ್ನು ಉಳಿಸುವುದರಿಂದ ಅವರಿಗೆ ಏನು ಸಿಗುತ್ತದೆ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ನಾವು ಸಾಕ್ಷಿಗಳನ್ನು ಇಟ್ಟುಕೊಂಡೇ ಮಾತನಾಡುತ್ತಿದ್ದೇವೆ. ನಿನ್ನೆ ಎನ್ಕೌಂಟರ್ನಲ್ಲಿ ಮೃತರಾದ ಮೂವರು ಉಗ್ರರು ಪಾಕಿಸ್ತಾನದ ನಂಟು ಹೊಂದಿದವರು ಎಂಬುದಕ್ಕೆ ಅವರ ಬಳಿ ಸಿಕ್ಕ ಐಡಿಗಳೇ ಸಾಕ್ಷಿ” ಎಂದು ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆಪರೇಷನ್ ಸಿಂಧೂರ್ ಪಾಕಿಸ್ತಾನದಲ್ಲಿ ನಡೆದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಬಯಲು ಮಾಡಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಭದ್ರತಾ ಪಡೆಗಳು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಿವೆ. ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಗಳನ್ನು ದುರ್ಬಲಗೊಳಿಸಿದವು. ದಾಳಿಗಳನ್ನು ನಿಲ್ಲಿಸುವಂತೆ ಭಾರತವನ್ನು ವಿನಂತಿಸುವುದನ್ನು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ” ಎಂದು ಹೇಳಿದ್ದಾರೆ.
ನೆಹರೂ ಬಗ್ಗೆ ಹಿಗ್ಗಾಮುಗ್ಗಾ ಟೀಕೆ:
1948ರಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಿಒಕೆಯನ್ನು ವಾಪಾಸ್ ಪಡೆಯಲು ನಿರ್ಣಾಯಕ ಸ್ಥಾನದಲ್ಲಿದ್ದವು. ಆದರೆ, ಆಗಿನ ಪ್ರಧಾನಿ ನೆಹರೂ ಏಕಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿದರು ಎಂದು ಅಮಿತ್ ಶಾ ಟೀಕಿಸಿದ್ದಾರೆ. “ಕಾಂಗ್ರೆಸ್ ನಾಯಕರು ನಮ್ಮ ಬಳಿ ಪಾಕಿಸ್ತಾನದ ಜೊತೆ ಯಾಕೆ ಯುದ್ಧ ಮಾಡಲಿಲ್ಲ? ಕದನವಿರಾಮ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆ ಕೇಳಿದರು. ಇಡೀ ದೇಶಕ್ಕೆ ಗೊತ್ತಿರುವ ಸಂಗತಿಯೇನೆಂದರೆ ಇಂದು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವದಲ್ಲಿರುವುದಕ್ಕೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಕಾರಣ.
1960ರಲ್ಲಿ ಅವರು ಸಿಂಧೂ ನೀರಿನ ಶೇ.80ರಷ್ಟು ಪಾಕಿಸ್ತಾನಕ್ಕೆ ನೀಡಿದರು. 1971ರಲ್ಲಿ ಶಿಮ್ಲಾ ಒಪ್ಪಂದದ ಸಮಯದಲ್ಲಿ ಅವರು ಪಿಒಕೆಯನ್ನು ಮರೆತರು. ಆಗ ಅವರು ಪಿಒಕೆಯನ್ನು ವಶಪಡಿಸಿಕೊಂಡಿದ್ದರೆ ಈಗ ನಾವು ಅಲ್ಲಿನ ಶಿಬಿರಗಳ ಮೇಲೆ ದಾಳಿ ಮಾಡಬೇಕಾಗಿರಲಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಅಸ್ತಿತ್ವಕ್ಕೆ ಬರಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ನೇರ ಹೊಣೆಗಾರರು. ಇಂದು ಪಿಒಕೆ ಅಸ್ತಿತ್ವದಲ್ಲಿದ್ದರೆ, ಅದು ಜವಾಹರಲಾಲ್ ನೆಹರೂ ಅವರ ಕದನ ವಿರಾಮದಿಂದಾಗಿ ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ” ಎಂದು ಅಮಿತ್ ಶಾ ಹೇಳಿದ್ದಾರೆ. 1949ರಲ್ಲಿ ಮೊದಲ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಉಲ್ಲೇಖಿಸಿದ ಅಮಿತ್ ಶಾ, “ಇದು ಪಾಕಿಸ್ತಾನಕ್ಕೆ ಕಾಶ್ಮೀರದ ಒಂದು ಭಾಗದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ. 1960ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಕ್ರಮವನ್ನು ವಿರೋಧಿಸಿದ್ದರು. ಆದರೆ, ನೆಹರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಈಗಲೂ ಪಿಒಕೆ ಅಸ್ತಿತ್ವದಲ್ಲಿದೆ” ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.