ಬೇಕೇ, ಬೇಕು ಮೊಬೈಲ್ ನಂಬರ್ ಬೇಕೇ ಬೇಕು.. ಕೋರ್ಟ್ ನಲ್ಲೇ ಹೀಗೆ ರಚ್ಚೆ ಹಿಡಿದದ್ದು ಪವಿತ್ರಾ ಗೌಡ.
ಹೌದು, ಇವತ್ತು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಪವಿತ್ರಾಗೌಡ ಇಬ್ಬರೂ ಕೋರ್ಟ್ ಗೆ ಬಂದಿದ್ದರು. ಬೆಂಗಳೂರಿನ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ಮುಗಿಯುತ್ತಿದ್ದಂತೆ ಇಬ್ಬರೂ ಒಂದೇ ಲಿಫ್ಟ್ ಹತ್ತಿದ್ದಾರೆ. ಅಷ್ಟೇ, ಲಿಫ್ಟ್ ಬಾಗಿಲು ಬಂದ್ ಆಗುತ್ತಿದ್ದಂತೆ ಪವಿತ್ರಾ, ದರ್ಶನ್ ಬಳಿ ಮೊಬೈಲ್ ನಂಬರ್ ನೀಡುವಂತೆ ದುಂಬಾಲು ಬಿದ್ದಿದ್ದಾಳೆ. ಕೈ ಹಿಡಿದು ಎಳೆದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ.
ಒಂದು ಹಂತದಲ್ಲಿ ಗರಂ ಆದ ದರ್ಶನ್ ಪವಿತ್ರಾ ಕೈಯಿಂದ ಮೊಬೈಲ್ ಕಸಿದುಕೊಂಡು ತಮ್ಮ ನಂಬರ್ ಡಯಲ್ ಮಾಡಿ ವಾಪಸ್ ನೀಡಿದ್ದಾರೆ. ಹಾಗೆ ನೋಡಿದರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದ ಮೇಲೆ ಪವಿತ್ರಾ ಮತ್ತು ದರ್ಶನ್ ಪರಸ್ಪರ ದೂರ ಆಗಿದ್ದರು. ಇಬ್ಬರ ಸಂಬಂಧ ಹಳಸಿ ಹೋಗಿತ್ತು. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಪವಿತ್ರಾ ಕಣ್ಣುತಪ್ಪಿಸಿ ದರ್ಶನ್ ದೂರವೇ ಓಡಾಡುತ್ತಿದ್ದರು. ಸಾಲದ್ದಕ್ಕೆ ಮೊಬೈಲ್ ನಂಬರ್ ಕೂಡಾ ಬದಲಿಸಿದ್ದರು. ಈ ನಂಬರ್ ಪವಿತ್ರಾ ಎಷ್ಟೇ ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ.
ಆದರೆ, ಇವತ್ತು ಅಂತಿಮವಾಗಿ ಕೋರ್ಟ್ ನಲ್ಲಿ ಸಿಕ್ಕ ದರ್ಶನ್ ರನ್ನು ಲಾಕ್ ಮಾಡಿಕೊಂಡ ಪವಿತ್ರಾ, ಕಡೆಗೂ ನಂಬರ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಘಟನೆ ನಡೆದಾಗ ಜೊತೆಗಿದ್ದವರು ಪವಿತ್ರಾಳ ಹಠ ನೋಡಿ ದಂಗಾಗಿದ್ದಾರೆ.