ನವದೆಹಲಿ: ಭಾರತ ಯಾವ ಸಂದರ್ಭದಲ್ಲಾದರೂ ಯುದ್ಧ ಮುಗಿಬೀಳಬಹುದು ಎಂಬ ಆತಂಕ ಪಾಕಿಸ್ತಾನಕ್ಕಿದ್ದು, ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಮತ್ತು ನಿರೀಕ್ಷೆಯಿದೆ. ಇದರಿಂದಾಗಿ ಪಾಕ್ ಗೆ ಭಯ ಶುರುವಾಗಿದೆ. ಅಲ್ಲದೇ, 6 ದಿನಗಳಲ್ಲಿ ನಿಯಂತ್ರಣ ರೇಖೆ (LoC) ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದು ಕೂಡ ಇದೇ ಕಾರಣಕ್ಕೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ಅವರು, ಈಗಾಗಲೇ ಭಾರತೀಯ ಸಶಸ್ತ್ರ ಪಡೆಗಳಿಗೆ “ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ” ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಭಾರತೀಯ ಸಂಘರ್ಷ ಎದುರಿಸಲು ಸಾಧ್ಯವಾಗುವಂತೆ ಪಾಕಿಸ್ತಾನಿ ಸೇನೆಯು ತನ್ನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಸೇರಿದಂತೆ ನೌಕಾಪಡೆಯ ಹಡಗುಗಳನ್ನು ಸಮುದ್ರದಲ್ಲಿನ ಆಯಾ ಬಂದರುಗಳಲ್ಲಿ ಇರಿಸಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಹೇಳಿದೆ.