ಚಂಡೀಗಢ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಸೇನಾಧಿಕಾರಿ ವಿನಯ್ ನರ್ವಾಲ್ ಅವರ ಕುಟುಂಬಸ್ಥರಿಗೆ ಹರಿಯಾಣ ಸರ್ಕಾರವು 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಹಾಗೆಯೇ, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಮಾಹಿತಿ ನೀಡಿದ್ದಾರೆ.
ವಿನಯ್ ನರ್ವಾಲ್ ಅವರಿಗೆ ಗೌರವ ಸಲ್ಲಿಸಲು ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಹೇಡಿತನದ ದಾಳಿ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿನಯ್ ನರ್ವಾಲ್ ಒಬ್ಬ ಧೈರ್ಯಶಾಲಿ ಸೈನಿಕರಾಗಿದ್ದರು. ಹರಿಯಾಣ ಸರ್ಕಾರ ವಿನಯ್ ನರ್ವಾಲ್ ಅವರ ಕುಟುಂಬದ ಜತೆಗಿದೆ ಎಂದು ಅಂತ್ಯಸಂಸ್ಕಾರದ ಬಳಿಕ ನಾಯಬ್ ಸಿಂಗ್ ಸೈನಿ ತಿಳಿಸಿದ್ದರು. ಈಗ ಪರಿಹಾರ ಘೋಷಣೆ ಮಾಡಿದ್ದಾರೆ.
ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯೊಂದಿಗೆ ಜಮ್ಮು-ಕಾಶ್ಮೀರಕ್ಕೆ ಹೋದಾಗ ಈ ಹತ್ಯೆ ನಡೆದಿದೆ. ಅವರ ಅಂತ್ಯಕ್ರಿಯೆಯನ್ನು ಏಪ್ರಿಲ್ 23 ರಂದು ನಡೆಸಲಾಯಿತು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಕೂಡ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ದಾಳಿಗೂ ಮೊದಲು ಒಂದು ವಾರದ ಹಿಂದೆ ಮದುವೆಯಾಗಿದ್ದ ಲೆಫ್ಟಿನೆಂಟ್ ಅಧಿಕಾರಿ ವಿನಯ್ ನರ್ವಾಲ್ ತಮ್ಮ ಪತ್ನಿಯೊಂದಿಗೆ ಹನಿಮೂನ್ಗೆಂದು ಹೋಗಿದ್ದರು. 26 ವರ್ಷದ ವಿನಯ್ ನರ್ವಾಲ್ ಆರು ದಿನಗಳ ಹಿಂದೆ ಗುರುಗ್ರಾಮದ ಹಿಮಾಂಶಿ ಎಂಬ ಯುವತಿಯನ್ನು ಏಪ್ರಿಲ್ 16 ರಂದು ವಿವಾಹವಾಗಿದ್ದರು. ಮುಖ್ಯವಾಗಿ, ಏಪ್ರಿಲ್ 19 ರಂದು ನಡೆದ ವಿವಾಹ ಆರತಕ್ಷತೆಯ ನಂತರ, ವಿನಯ್ ಏಪ್ರಿಲ್ 21 ರಂದು ಹಿಮಾಂಶಿ ಜೊತೆ ಕಾಶ್ಮೀರಕ್ಕೆ ಹೋಗಿದ್ದರು. ಆದರೆ, ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಯಲ್ಲಿ ವಿನಯ್ ನರ್ವಾಲ್ ಮೃತಪಟ್ಟಿದ್ದರು.