ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆ ದೇಶಕ್ಕಾಗಿ ಹೋರಾಡಿದೆ. ಆದರೆ ಅದರ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ. ಪಹಲ್ಗಾಮ್ ದಾಳಿ ಹೇಗೆ ಮತ್ತು ಏಕೆ ಆಯಿತು? ಈ ಪ್ರಶ್ನೆ ನನ್ನನ್ನ ಇನ್ನೂ ಕಾಡುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕ್, ನೀವು 11 ವರ್ಷದಿಂದ ಅಧಿಕಾರದಲ್ಲಿದ್ದೀರಿ, ನಿನ್ನೆ ಗೌರವ್ ಗೊಗೊಯ್ ಅವರು ಜವಾಬ್ದಾರಿ ಬಗ್ಗೆ ಮಾತನಾಡುತ್ತಿದ್ದಾಗ ರಾಜನಾಥ್ ಸಿಂಗ್ ತಲೆಯಾಡಿಸುತ್ತಿದ್ದರು, ಗೃಹ ಸಚಿವರು ನಗುತ್ತಿದ್ದರು. ಮುಂಬೈ ದಾಳಿ ನಡೆದಾಗ ಮನಮೋಹನ್ ಸಿಂಗ್ ಸರ್ಕಾರ ಏನೂ ಮಾಡಲಿಲ್ಲವೆಂದು ಹೇಳಿದ್ದರು. ಆದರೆ ಅವರಿಗೆ ನೆನಪಿಲ್ಲ ಅನ್ನಿಸುತ್ತದೆ. ದಾಳಿ ನಡೆಯುತ್ತಿದ್ದಾಗಲೇ ಮೂವರು ಉಗ್ರರು ಹತರಾದರು, ಬದುಕುಳಿದ ಒಬ್ಬನನ್ನು ಹಿಡಿದು ಗಲ್ಲಿಗೇರಿಸಲಾಯಿತು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಸಿಎಂ, ದೇಶದ ಗೃಹ ಸಚಿವರಾಗಿದ್ದವರು ರಾಜೀನಾಮೆ ಕೊಟ್ಟರು. ಆದರೆ ಉರಿ-ಪುಲ್ವಾಮಾ ದಾಳಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು, ಈಗ ರಕ್ಷಣಾ ಸಚಿವರಾಗಿದ್ದಾರೆ. ಅಮಿತ್ ಶಾ ಅವರ ಅಧಿಕಾರವಧಿಯಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಗಲಭೆಗಳು ನಡೆಯುತ್ತಿವೆ. ಅದೇ ಹಾದಿಯಾಗಿ ಪಹಲ್ಗಾಮ್ ದಾಳಿಯೂ ನಡೆಯಿತು. ರಾಜೀನಾಮೆ ಕೊಡದೇ ಈಗಲೂ ಗೃಹಸಚಿವರಾಗಿಯೇ ಇದ್ದಾರೆ ಎಂದು ಕುಟುಕಿದ್ದಾರೆ.
ಪಹಲ್ಗಾಮ್ ದಾಳಿಯನ್ನು ಖಂಡಿಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿತ್ತು. ದೇಶದ ಮೇಲೆ ದಾಳಿ ನಡೆದರೆ ನಾವೆಲ್ಲರೂ ಸರ್ಕಾರದ ಜೊತೆ ಒಟ್ಟಾಗಿ ನಿಲ್ಲುತ್ತೇವೆ ಎನ್ನುವುದನ್ನು ತೋರಿಸಿಕೊಟ್ಟಿತು. ಅದರಂತೆ ಆಪರೇಷನ್ ಸಿಂಧೂರದಲ್ಲಿ ಸೇನೆ ಧೈರ್ಯದಿಂದ ಹೋರಾಡಿತು. ಆದರೆ ಅದರ ಕ್ರೆಡಿಟ್ ಮೋದಿ ಬಯಸುತ್ತಿದ್ದಾರೆ ಎಂದು ಅಮಾಧಾನ ಹೊರಹಾಕಿದ್ದಾರೆ.


















