ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿರುವುದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೇನೆಯ ಪರಾಕ್ರಮವನ್ನು ಜನ ಕೊಂಡಾಡುತ್ತಿದ್ದಾರೆ. ಅಮೆರಿಕ ಸೇರಿ ಹಲವು ರಾಷ್ಟ್ರಗಳು ಕೂಡ ಭಾರತದ ಪರವಾಗಿ ನಿಂತಿದೆ. ಇನ್ನು, ರಾತ್ರೋರಾತ್ರಿ ನಡೆದ ಕಾರ್ಯಾಚರಣೆಯ ಮಾಹಿತಿ ಲಭ್ಯವಾಗುತ್ತಿದ್ದು, ಒಂದೊಂದು ಮಾಹಿತಿಯೂ ರೋಮಾಂಚನಕಾರಿಯಾಗಿದೆ.
ಹೌದು, ಉಗ್ರರ ನೆಲೆಗಳ ಕುರಿತು ಸ್ಪಷ್ಟ ಮಾಹಿತಿ ಪಡೆದಿದ್ದ ಸೇನೆಯು ಲಷ್ಕರೆ ತಯ್ಬಾ ಸೇರಿ ಹಲವು ಉಗ್ರ ಸಂಘಟನೆಗಳ 9 ನೆಲೆಗಳನ್ನು ಧ್ವಂಸಗೊಳಿಸಿದೆ. ತಡರಾತ್ರಿಯು 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 25 ನಿಮಿಷ ಕಾರ್ಯಾಚರಣೆ ನಡೆಸಲಾಗಿದೆ. ವಾಯುಪಡೆಯು ಒಟ್ಟು 24 ಕ್ಷಿಪಣಿಗಳ ಮೂಲಕ ನಿಖರವಾಗಿ ದಾಳಿ ನಡೆಸಿದ ಕಾರಣ 80ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಜಫ್ಫರಾಬಾದ್, ಕೊಟ್ಲಿ, ಬರ್ನಾಲಾ, ಮುರಿಡ್ಕೆ, ಸಿಯಾಲ್ ಕೋಟ್, ಬಹವಾಲ್ಪುರ, ಸರ್ಜಾಲ್ ಸೇರಿ ಒಂಬತ್ತು ಉಗ್ರರ ನೆಲೆಗಳನ್ನು ಕ್ಷಿಪಣಿ ಮೂಲಕ ಧ್ವಂಸಗೊಳಿಸಲಾಗಿದೆ. ಆದಾಗ್ಯೂ, ಭಾರತದ ದಾಳಿಯಿಂದ ಹತ್ಯೆಗೀಡಾದ ಉಗ್ರರ ಸಂಖ್ಯೆಯ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಭಾರತೀಯ ಸೇನೆಯು ಮಾಹಿತಿ ಕಲೆಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ಕುರಿತು ಭಾರತೀಯ ಸೇನೆಯು ಸ್ಪಷ್ಟನೆ ನೀಡಿದೆ. “ಪಹಲ್ಗಾಮ್ ನಲ್ಲಿ ನಡೆಸಿದ ದಾಳಿಗೆ ಈಗ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆ ಮೂಲಕ ಪತಿಯರನ್ನು ಕಳೆದುಕೊಂಡ ಭಾರತದ ನಾರಿಯರಿಗೆ ನ್ಯಾಯ ದೊರಕಿಸಿಕೊಡಲಾಗಿದೆ. ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡಿಲ್ಲ. ನಮ್ಮ ಗುರಿಯೇನಿದ್ದರೂ ಉಗ್ರರ ನೆಲೆಗಳಾಗಿದ್ದವು” ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಹಿರಿಯ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖರೇಷಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.