ನವದೆಹಲಿ: ಈಶಾನ್ಯ ಭಾರತದಲ್ಲಿ ರಣ ಮಳೆ ಮುಂದುವರಿದಿದ್ದು, ಹಲವು ರಾಜ್ಯಗಳಲ್ಲಿ ಅವಾಂತರ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಈಶಾನ್ಯ ರಾಜ್ಯಗಳಲ್ಲಿ ಉಂಟಾದ ಭೂಕುಸಿತ, ಮಳೆ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 36ಕ್ಕೇರಿಕೆಯಾಗಿದೆ. ಸುಮಾರು 5.5 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಮಳೆಯಿಂದ ಭಾರೀ ತೊಂದರೆ ಉಂಟಾಗಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದ 22 ಜಿಲ್ಲೆಗಳ ಸುಮಾರು 5.35 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ. ಬ್ರಹ್ಮಪುತ್ರ, ಬರಾಕ್, ಸುಬಾನ್ಸಿರಿ ಸೇರಿದಂತೆ 15 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇಲ್ಲಿನ ಸುಮಾರು 31 ಸಾವಿರ ಮಂದಿ 165 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಧಾರಾಕಾರ ಮಳೆಯಿಂದಾಗಿ 12,610 ಹೆಕ್ಟೇರ್ ಬೆಳೆ ಹಾನಿಯಾಗಿದೆ. 94 ಜಾನುವಾರುಗಳು ಕೇವಲ 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಮಳೆಯಿಂದ ಸಾವಿಗೀಡಾದವರ ಸಂಖ್ಯೆ 10ಕ್ಕೇರಿಕೆಯಾಗಿದೆ. 23 ಜಿಲ್ಲೆಗಳ ಸುಮಾರು 900 ಜನರು ಪ್ರವಾಹ, ಭೂಕುಸಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ. ವೆಸ್ಟ್ ಕಮೇಂಗ್, ದಿಬಾಂಗ್ ವ್ಯಾಲಿ, ಪಾಪುಮ್ ಪಾರೆ ಮತ್ತಿತರ ಜಿಲ್ಲೆಗಳಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ಸಿಕ್ಕಿಂನ ಮಂಗಾನ್ ಜಿಲ್ಲೆಯ ಸೇನಾ ಕ್ಯಾಂಪ್ ವೊಂದರಲ್ಲಿ ಭೂಕುಸಿತ ಉಂಟಾದ ಪರಿಣಾಮ 3 ಮಂದಿ ಮೃತಪಟ್ಟಿದ್ದು, 6 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. ಮೃತರನ್ನು ಹವಾಲ್ದಾರ್ ಲಖ್ವೀಂದರ್ ಸಿಂಗ್, ಲ್ಯಾನ್ಸ್ ನಾಯ್ಕ್ ಮುನೀಶ್ ಠಾಕೂರ್, ಪೋರ್ಟರ್ ಅಭಿಷೇಖ್ ಲಖಾನಾ ಎಂದು ಗುರುತಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈಶಾನ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಮತ್ತು ಮಣಿಪುರ ಗವರ್ನರ್ ಅಜಯ್ ಭಲ್ಲಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ.