ಮುಂದಿನ ಚುನಾವಣೆಗೆ ನನಗೆ 78 ವರ್ಷ ತುಂಬಿರುತ್ತೆ. ಹೀಗಾಗಿ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸಚಿವ ಕೆ.ಎನ್. ರಾಜಣ್ಣ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರಿ ಸಚಿವರಾಗಿರುವ ರಾಜಣ್ಣ, ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಚುನಾವಣಾ ರಾಜಕೀಯದಿಂದ ದೂರವಿರುತ್ತೇನೆ. ಮುಂದಿನ ಎಲೆಕ್ಷನ್ ನಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ, ಸಹಕಾರ ರಂಗದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಗಮನಹರಿಸ್ತೀನಿ ಎಂದಿದ್ದಾರೆ.
ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಮುಸುಕಿನ ಗುದ್ದಾಟ ತಾರಕ್ಕೇರತ್ತು, ಇದರ ಮಧ್ಯೆಯೇ ರಾಜಣ್ಣರ ಈ ನಿವೃತ್ತಿ ಮಾತು ತೀವ್ರ ಕುತೂಹಲ ಮೂಡಿಸಿದೆ. ಸಿಡಿ ಹೆಸರಲ್ಲಿ ರಾಜಣ್ಣ ಮತ್ತು ಡಿಕೆಶಿ ನಡುವೆ ಯುದ್ಧವೇ ನಡೆದಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ, ಆರೋಗ್ಯದ ದೃಷ್ಟಿಯಿಂದ ಚುನಾವಣೆ ಸ್ಪರ್ಧಾ ರಾಜಕೀಯ ಮಾಡದಿರಲು ನಿರ್ಧರಿಸಿದ್ದೇನೆ ಅಂತಾ ರಾಜಣ್ಣ ಘೋಷಿಸಿದ್ದಾರೆ.
ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮಳೆಯಾಗುತ್ತಿದ್ದು, ಈ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವ ಮೂಲಕ ರಾಜಣ್ಣ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ, ಈ ನಿಲುವು ಮುಂದೆ ಇನ್ಯಾವ ರಾಜಕೀಯ ತಿರುವು ಪಡೆಯುತ್ತೆ ಅನ್ನೋದು ಈಗಿರುವ ಪ್ರಶ್ನೆಯಾಗಿದೆ.