ಢಾಕಾ : 2026ರ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆಯ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಅಲ್ಲಿನ ನಾಯಕ ಲಿಟನ್ ದಾಸ್ ಅವರ ಹೇಳಿಕೆ ಮತ್ತಷ್ಟು ತುಪ್ಪ ಸುರಿದಿದೆ. ಮಂಗಳವಾರ (ಜನವರಿ 20) ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಪಂದ್ಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ಟಿ20 ವಿಶ್ವಕಪ್ ಮತ್ತು ಭಾರತ-ಬಾಂಗ್ಲಾ ಸಂಬಂಧದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ಮಾತನಾಡುವುದು “ನನಗೆ ಸುರಕ್ಷಿತವಲ್ಲ” ಎಂದು ಪದೇ ಪದೇ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪಂದ್ಯದ ನಂತರ ಪತ್ರಕರ್ತರು, ಬಿಪಿಎಲ್ ಟೂರ್ನಿಯ ಪಿಚ್ಗಳು ಮುಂಬರುವ ಐಸಿಸಿ ಟೂರ್ನಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿವೆ ಎಂದು ಕೇಳಿದ ಪ್ರಶ್ನೆಗೆ ಲಿಟನ್ ದಾಸ್ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದರು. “ನಾವು ವಿಶ್ವಕಪ್ ಆಡಲಿದ್ದೇವೆ ಎಂಬ ಖಚಿತತೆ ನಿಮಗಿದೆಯೇ? ನನ್ನ ಕಡೆಯಿಂದ ಹೇಳುವುದಾದರೆ ನನಗಂತೂ ಖಚಿತವಿಲ್ಲ, ಎಲ್ಲರಲ್ಲೂ ಅನಿಶ್ಚಿತತೆ ಇದೆ. ಇಡೀ ಬಾಂಗ್ಲಾದೇಶವೇ ಈ ಬಗ್ಗೆ ಗೊಂದಲದಲ್ಲಿದೆ ಎಂದು ನನಗನಿಸುತ್ತಿದೆ. ನೀವು ಯಾವ ಪ್ರಶ್ನೆ ಕೇಳಲು ಬರುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿದೆ. ಆದರೆ ಅದಕ್ಕೆ ಉತ್ತರಿಸುವುದು ನನಗೆ ಸುರಕ್ಷಿತವಲ್ಲ. ಉತ್ತರವಿಲ್ಲ,” ಎಂದು ಲಿಟನ್ ಹೇಳಿದ್ದಾರೆ.
ನನಗೆ ಸೇಫ್ ಅಲ್ಲ ಸೇಫ್ ಅಲ್ಲ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಸ್ತುತ ರಾಜಕೀಯ ಉದ್ವಿಗ್ನತೆಯ ಬಗ್ಗೆ ಕೇಳಿದಾಗಲೂ, “ಇದು ಸೇಫ್ ಅಲ್ಲ, ಸೇಫ್ ಅಲ್ಲ.. ದಯವಿಟ್ಟು ನನ್ನ ಉತ್ತರದಿಂದ ಬೇಸರ ಮಾಡಿಕೊಳ್ಳಬೇಡಿ,” ಎಂದು ಹೇಳಿ ನುಣಚಿಕೊಂಡರು. ಅವರ ಈ ಹೇಳಿಕೆಯು ಬಾಂಗ್ಲಾದೇಶದ ಕ್ರಿಕೆಟಿಗರಲ್ಲಿ ಆವರಿಸಿರುವ ಅಭದ್ರತೆಯ ಭಾವನೆಯನ್ನು ಎತ್ತಿ ತೋರಿಸುವಂತಿದೆ.
ಇದಕ್ಕೆ ಪೂರಕವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕೂಡ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ತಮ್ಮ ಪಂದ್ಯಗಳ ಸ್ಥಳವನ್ನು ಬದಲಾಯಿಸುವಂತೆ ಐಸಿಸಿಗೆ ಮನವಿ ಮಾಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ ಒಪ್ಪಂದದಿಂದ ಬಿಡುಗಡೆ ಮಾಡಿದ ನಂತರ ಈ ಬೆಳವಣಿಗೆಗಳು ತೀವ್ರಗೊಂಡಿವೆ. ಸದ್ಯ ಬಾಂಗ್ಲಾದೇಶವನ್ನು ‘ಸಿ’ ಗುಂಪಿನಲ್ಲಿ ಇರಿಸಲಾಗಿದ್ದು, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆಯಬೇಕಿದೆ. ಆದರೆ ಸ್ಥಳ ಬದಲಾವಣೆಗೆ ಐಸಿಸಿ ಒಪ್ಪದಿದ್ದರೆ ಮತ್ತು ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದರೆ, ಸ್ಕಾಟ್ಲೆಂಡ್ ತಂಡಕ್ಕೆ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಬಾಂಗ್ಲಾ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರು ಐಸಿಸಿ ಅಥವಾ ಬಿಸಿಸಿಐ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನಾಯಕ ಲಿಟನ್ ದಾಸ್ ಅವರ ಈ ಮೌನ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ ; ಕಳಪೆ ಫಾರ್ಮ್ ಬಗ್ಗೆ ಟೀಕಾಕಾರರಿಗೆ ಸೂರ್ಯಕುಮಾರ್ ಖಡಕ್ ಉತ್ತರ



















