ಬೆಂಗಳೂರು : ಭಾರತ ಕ್ರಿಕೆಟ್ ತಂಡವು ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವಾಗಲೇ, ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ವಿಶ್ವಕಪ್ ಟ್ರೋಫಿಯನ್ನು ದೇವಾಲಯಕ್ಕೆ ಕೊಂಡೊಯ್ದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ವಿವಾದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ ಅತ್ಯಂತ ಜಾಣ್ಮೆಯಿಂದ ಉತ್ತರಿಸುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ. ವಿಶ್ವಕಪ್ ಗೆದ್ದ ಬಳಿಕ ತಮ್ಮ ತವರೂರಾದ ಪಾಟ್ನಾಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಅನಗತ್ಯ ವಿವಾದಗಳಿಗಿಂತ ತಂಡದ ಐತಿಹಾಸಿಕ ಸಾಧನೆಯತ್ತ ಗಮನಹರಿಸುವಂತೆ ಪತ್ರಕರ್ತರಿಗೆ ಸಲಹೆ ನೀಡಿದ್ದಾರೆ.
ವಿವಾದದಿಂದ ಅಂತರ ಕಾಯ್ದುಕೊಂಡ ಇಶಾನ್ ಕಿಶನ್
ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿ ಮಂಗಳವಾರ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಶಾನ್ ಕಿಶನ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ಸಂಭ್ರಮಾಚರಣೆಯ ನಡುವೆ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಪತ್ರಕರ್ತರೊಬ್ಬರು ಕೀರ್ತಿ ಆಜಾದ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಕಿರಿಕಿರಿಗೊಳ್ಳದೆ ಅತ್ಯಂತ ಶಾಂತವಾಗಿ ಪ್ರತಿಕ್ರಿಯಿಸಿದ ಕಿಶನ್, ವಿವಾದಾತ್ಮಕ ವಿಚಾರಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. “ನಾವು ಅತ್ಯಂತ ಅದ್ಭುತವಾದ ವಿಶ್ವಕಪ್ ಗೆದ್ದುಕೊಂಡು ಬಂದಿದ್ದೇವೆ. ದಯವಿಟ್ಟು ಅದಕ್ಕೆ ಸಂಬಂಧಿಸಿದಂತೆ ಉತ್ತಮ ಪ್ರಶ್ನೆಗಳನ್ನು ಕೇಳಿ. ಕೀರ್ತಿ ಆಜಾದ್ ಅವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ನಾನೇನು ಹೇಳಲಿ? ವಿಶ್ವಕಪ್ ಗೆದ್ದಾಗ ನಮಗೆ ಹೇಗನ್ನಿಸಿತು, ನಾವು ಎಷ್ಟು ಖುಷಿ ಪಟ್ಟೆವು ಎಂಬಂತಹ ಸಕಾರಾತ್ಮಕ ವಿಚಾರಗಳನ್ನು ಕೇಳಿ” ಎಂದು ಹೇಳುವ ಮೂಲಕ ಚರ್ಚೆಯ ದಿಕ್ಕನ್ನು ಬದಲಾಯಿಸಿದರು.
ಕೀರ್ತಿ ಆಜಾದ್ ಹೇಳಿಕೆಯ ಹಿಂದಿನ ವಿವಾದವೇನು?
ಭಾರತ ತಂಡವು ಟಿ20 ವಿಶ್ವಕಪ್ ಗೆದ್ದ ನಂತರ, ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಹಮದಾಬಾದ್ನ ಹನುಮಾನ್ ದೇವಾಲಯಕ್ಕೆ ಟ್ರೋಫಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ನಡೆಯನ್ನು ಟೀಕಿಸಿದ್ದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದರು. “ವಿಶ್ವಕಪ್ ಗೆಲುವು ಕೇವಲ ಒಂದು ಧರ್ಮಕ್ಕೆ ಸೀಮಿತವಾದದ್ದಲ್ಲ. ಇದು ಎಲ್ಲಾ ಧರ್ಮಗಳ 1.4 ಶತಕೋಟಿ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ. ಕ್ರೀಡೆಯು ಇಡೀ ದೇಶವನ್ನು ಪ್ರತಿನಿಧಿಸುತ್ತದೆಯೇ ಹೊರತು ಯಾವುದೇ ನಿರ್ದಿಷ್ಟ ಧರ್ಮವನ್ನಲ್ಲ” ಎಂದು ಬರೆದುಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು.
ಟಿ20 ವಿಶ್ವಕಪ್ನಲ್ಲಿ ಕಿಶನ್ ಭರ್ಜರಿ ಪ್ರದರ್ಶನ
ಇನ್ನು ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಇಶಾನ್ ಕಿಶನ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದು ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಒತ್ತಡದ ಪಂದ್ಯಗಳಲ್ಲಿ ಅವರು ನೀಡಿದ ಪ್ರದರ್ಶನ ತಂಡಕ್ಕೆ ಆಧಾರವಾಗಿತ್ತು. ಟೂರ್ನಿಯಲ್ಲಿ ಆಡಿದ ಒಟ್ಟು ಒಂಬತ್ತು ಪಂದ್ಯಗಳಲ್ಲಿ 193.29ರ ಭಾರಿ ಸ್ಟ್ರೈಕ್ ರೇಟ್ ಹಾಗೂ 35.22ರ ಸರಾಸರಿಯಲ್ಲಿ 317 ರನ್ ಕಲೆಹಾಕಿದ್ದರು. ಇದರಲ್ಲಿ ಮೂರು ಆಕರ್ಷಕ ಅರ್ಧಶತಕಗಳು ಸೇರಿವೆ. ಅದರಲ್ಲೂ ಕೊಲಂಬೊದಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 77 ರನ್ ಸಿಡಿಸಿ ಭಾರತದ 61 ರನ್ಗಳ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು.
ಅಲ್ಲದೆ, ನ್ಯೂಜಿಲೆಂಡ್ ವಿರುದ್ಧದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 54 ರನ್ ಚಚ್ಚುವ ಮೂಲಕ ಭಾರತ ತಂಡವು 255 ರನ್ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದರು. ಪುರುಷರ ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಇದೊಂದು ದಾಖಲೆಯ ಮೊತ್ತವಾಗಿದೆ. ಅಂತಿಮವಾಗಿ ಭಾರತ ತಂಡವು ನ್ಯೂಜಿಲೆಂಡ್ ಅನ್ನು 96 ರನ್ಗಳಿಂದ ಮಣಿಸಿ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೊದಲ ತಂಡ ಎಂಬ ವಿಶ್ವದಾಖಲೆ ಬರೆದಿತ್ತು.
ಇದನ್ನೂ ಓದಿ : ಇರಾನ್ ಮೇಲೆ ಅಮೆರಿಕಾಗಿದೆ 100 ವರ್ಷಗಳ ಸೇಡು! ದೊಡ್ಡಣ್ಣನ ‘ಕಣ್ಣು’… ಮೇಲೆ!


















