ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು (Indus Waters Treaty) ಅಮಾನತು ಮಾಡಿದ ಬಳಿಕ ಪಾಕಿಸ್ತಾನಕ್ಕೆ ‘ಮಾಡಿದ್ದುಣ್ಣೋ ಮಹಾರಾಯ’ ಎಂಬ ಸ್ಥಿತಿ ಬಂದಿದೆ. ಭಾರತದಿಂದ ಹರಿಯುವ ಜೀವನದಿಗಳು ಬತ್ತಿದ ಪರಿಣಾಮವಾಗಿ, ಪಾಕಿಸ್ತಾನವು ಈಗ ಗಂಭೀರ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದರ ಕೃಷಿ ಕ್ಷೇತ್ರ ಮತ್ತು ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.
ನೀರಿನ ಆಸರೆಗೆ ದೊಡ್ಡ ಹೊಡೆತ
ಭಾರತವು ಸಿಂಧೂ ನದಿ ಒಪ್ಪಂದದ ಅಡಿಯಲ್ಲಿ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿದ ನಂತರ, ಪಾಕಿಸ್ತಾನಕ್ಕೆ ಹರಿಯುವ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ (IRSA) ಬಿಡುಗಡೆ ಮಾಡಿರುವ ವರದಿಗಳು ಈ ಭೀಕರ ವಾಸ್ತವವನ್ನು ಬಹಿರಂಗಪಡಿಸಿದೆ. ದೇಶದ ಪ್ರಮುಖ ಕೃಷಿ ಪ್ರಾಂತ್ಯಗಳಾದ ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್ಖ್ವಾಗಳಲ್ಲಿನ ನದಿಗಳು ಮತ್ತು ಕಾಲುವೆಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ. ನೀರಿಲ್ಲದೆ ನದಿಗಳು ಬರಿದಾಗಿದ್ದು, ಲಕ್ಷಾಂತರ ಎಕರೆ ಕೃಷಿ ಭೂಮಿ ಬರಡು ಭೂಮಿಯಾಗಿ ಮಾರ್ಪಟ್ಟಿದೆ ಎಂದು ಐಆರ್ಎಸ್ಎ ವರದಿಗಳು ಕಳವಳ ವ್ಯಕ್ತಪಡಿಸಿವೆ.
ಒಣಗಿದ ಜಮೀನುಗಳು, ಹಸಿವಿನ ಭೀತಿ
ಕಳೆದ ಹಲವಾರು ದಶಕಗಳಿಂದ ಭಾರತದ ನೀರಿನ ಮೇಲೆ ಅವಲಂಬಿತವಾಗಿದ್ದ ಪಾಕಿಸ್ತಾನಕ್ಕೆ ಇದು ದೊಡ್ಡ ಹೊಡೆತವೇ ಸರಿ. ನೀರಾವರಿ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಗೋಧಿ, ಹತ್ತಿ, ಅಕ್ಕಿ ಮತ್ತು ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದೆ. “ನಮ್ಮ ಜಮೀನುಗಳು ಒಣಗಿ ಹೋಗುತ್ತಿವೆ, ಕೈಯಲ್ಲಿ ಕೆಲಸವಿಲ್ಲ, ಬದುಕು ನಡೆಸುವುದು ಹೇಗೆಂದು ತಿಳಿಯುತ್ತಿಲ್ಲ” ಎಂದು ಪಾಕಿಸ್ತಾನದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಿಕ್ಕಟ್ಟು ಆಹಾರ ಭದ್ರತೆಯ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ದೇಶದ ದೊಡ್ಡ ಜನಸಂಖ್ಯೆಗೆ ಆಹಾರ ಪೂರೈಕೆ ಮಾಡುವುದು ಈಗ ಭಾರೀ ಸವಾಲಾಗಿದೆ.
ಉಗ್ರವಾದಕ್ಕೆ ಕುಮ್ಮಕ್ಕು ನೀಡಿದ ಪಾಕಿಸ್ತಾನಕ್ಕೆ ಪ್ರಕೃತಿಯ ಪಾಠ?
ವರ್ಷಗಳಿಂದ ಗಡಿಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ, ಭಾರತದ ವಿರುದ್ಧ ಪರೋಕ್ಷ ಯುದ್ಧ ಸಾರಿದ್ದ ಪಾಕಿಸ್ತಾನಕ್ಕೆ ಇದು ‘ಪ್ರಕೃತಿಯೇ ಕಲಿಸಿದ ಪಾಠ’ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಭಾರತದ ನಿರ್ಧಾರದಿಂದಾಗಿ ಪಾಕಿಸ್ತಾನಕ್ಕೆ ‘ನೀರೇ ಇಲ್ಲ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಉತ್ಪಾದನೆಯ ಕುಸಿತವು ಪಾಕಿಸ್ತಾನದ ಈಗಾಗಲೇ ದುರ್ಬಲವಾಗಿರುವ ಆರ್ಥಿಕತೆಯ ಮೇಲೆ ಮತ್ತಷ್ಟು ಒತ್ತಡ ಹೇರಲಿದೆ. ನೀರಿನ ಕೊರತೆಯು ಭವಿಷ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡು, ಸಾಮಾಜಿಕ ಅಶಾಂತಿ ಮತ್ತು ಜನರಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.