ಇಂದೋರ್ : ಇತ್ತೀಚೆಗೆ ಪ್ರೀತಿಯ ಹೆಸರಿನಲ್ಲಿ ನಡೆದ ಭೀಕರ ಹತ್ಯೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ತನ್ನ ಪ್ರಿಯತಮೆಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ಆರೋಪಿ ಪಿಯೂಷ್ ಧಮ್ನೋಟಿಯಾ, ನಂತರ ಶವದ ಮೇಲೆ ಅತ್ಯಾಚಾರ ಎಸಗಿದ್ದ. ಇಷ್ಟೆಲ್ಲ ಮಾಡಿದರೂ ಪೊಲೀಸರ ವಿಚಾರಣೆ ವೇಳೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ನಗುತ್ತಾ ಪ್ರತಿಕ್ರಿಯಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. “ಆಗಬೇಕಿರೋದು ಆಗಿಹೋಗಿದೆ, ಈಗ ಕಾರಣ ತಿಳಿದು ಏನು ಮಾಡುತ್ತೀರಿ?” ಎಂದು ಮಾಧ್ಯಮದವರ ಪ್ರಶ್ನೆಗೆ ಉದ್ಧಟತನದ ಉತ್ತರ ನೀಡಿದ್ದಾನೆ.
ಫೆಬ್ರವರಿ 13ರಂದು ಇಂದೋರ್ನ ದ್ವಾರಕಾಪುರಿ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ 24 ವರ್ಷದ ಯುವತಿಯ ನಗ್ನ ಶವ ಪತ್ತೆಯಾಗಿತ್ತು. ಅದು ಕೊಳೆತ ಸ್ಥಿತಿಯಲ್ಲಿತ್ತು. ಆರೋಪಿ ಪಿಯೂಷ್ ಮತ್ತು ಸಂತ್ರಸ್ತೆ ವಿದ್ಯಾರ್ಥಿನಿ ಮೊದಲಿನಿಂದಲೇ ಪರಿಚಿತರು. ಸಂತ್ರಸ್ತೆಯು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದದ್ದು ಪಿಯೂಷ್ಗೆ ಕಿರಿಕಿರಿ ಉಂಟುಮಾಡಿತ್ತು. ಇದೇ ವಿಚಾರವಾಗಿ ಫೆಬ್ರವರಿ 10ರಂದು ನಡೆದ ಗಲಾಟೆ ವಿಕೋಪಕ್ಕೆ ಹೋಗಿ, ಆರೋಪಿಯು ಆಕೆಯ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ, ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಸಂಭೋಗ ಮತ್ತು ಪಕ್ಕದಲ್ಲೇ ಮದ್ಯಪಾನ
ಕೊಲೆಯ ನಂತರ ಆರೋಪಿಯ ವರ್ತನೆ ಅತ್ಯಂತ ವಿಕೃತವಾಗಿತ್ತು. ಹತ್ಯೆಯ ನಂತರ ಆಕೆಯ ಶವದ ಮೇಲೆಯೇ ಅತ್ಯಾಚಾರ ಎಸಗಿದ್ದ ಆತ, ನಂತರ ಹೊರಗೆ ಹೋಗಿ ಬಿಯರ್ ತಂದು, ಅದೇ ಕೋಣೆಯಲ್ಲಿ ಶವದ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದ ಆತ, ಸಂತ್ರಸ್ತೆಯ ಫೋನ್ ಬಳಸಿ ಆಕೆಯ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ವಿಡಿಯೋಗಳನ್ನು ಕಾಲೇಜಿನ ವಾಟ್ಸ್ ಆ್ಯಪ್ ಗ್ರೂಪ್ಗೆ ಕಳುಹಿಸಿದ್ದಾನೆ. ಜೊತೆಗೆ, ಆಕೆಯ ವಾಟ್ಸ್ಆ್ಯಪ್ ಸ್ಟೇಟಸ್ಗೂ ಅದೇ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ.
ಕೆಲ ದಿನಗಳ ಬಳಿಕ ಆ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದಾಗ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದು, ಆಗ ಈ ಕ್ರೂರ ಕೃತ್ಯ ಜಗಜ್ಜಾಹೀರಾಗಿದೆ. ವಿಚಾರಣೆ ವೇಳೆ ಆರೋಪಿಯು ಆತ್ಮಗಳೊಂದಿಗೆ ಮಾತನಾಡಲು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿದ್ದ ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ.
ಇಷ್ಟೆಲ್ಲಾ ಘೋರ ಕೃತ್ಯ ಎಸಗಿದರೂ ಆರೋಪಿಯ ಮುಖದಲ್ಲಿ ಯಾವುದೇ ಭಯ ಅಥವಾ ನೋವು ಕಾಣುತ್ತಿಲ್ಲ. ಪೊಲೀಸ್ ಜೀಪಿನಲ್ಲಿ ಕರೆದೊಯ್ಯುವಾಗ ಮಾಧ್ಯಮಗಳು ಕೊಲೆಯ ಉದ್ದೇಶದ ಬಗ್ಗೆ ಪ್ರಶ್ನಿಸಿದಾಗ, ಆತ ಸಣ್ಣ ನಗೆ ಬೀರುತ್ತಾ “ಎಲ್ಲವನ್ನೂ ಮರೆತುಬಿಡಿ, ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಆಗಬೇಕಿರೋದು ಆಗಿಹೋಗಿದೆ, ಈಗ ಕಾರಣ ತಿಳಿದು ಏನು ಮಾಡುತ್ತೀರಿ?” ಎಂದು ಹೇಳಿದ್ದಾನೆ. ಪ್ರಸ್ತುತ ಪೊಲೀಸರು ಡಿಜಿಟಲ್ ಸಾಕ್ಷ್ಯಗಳು ಮತ್ತು ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದು, ಕಠಿಣ ಶಿಕ್ಷೆ ಕೊಡಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : ಲಂಚದ ಆಸೆಗಾಗಿ ನಕಲಿ ಮರಣ ಪತ್ರ ಸೃಷ್ಟಿ | ಡಿ ಗ್ರೂಪ್ ನೌಕರ ಅಮಾನತು



















