ಗಾಜಾ: ಭಾರತದ ಜನಪ್ರಿಯ ಬಿಸ್ಕಿಟ್ ಬ್ರಾಂಡ್ ಆಗಿರುವ ಪಾರ್ಲೆ-ಜಿ, ಯುದ್ಧಗ್ರಸ್ತ ಗಾಜಾಪಟ್ಟಿಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ ಎಂದರೆ ನೀವು ನಂಬುತ್ತೀರಾ?
ನಂಬಲೇಬೇಕು. ಯುದ್ಧಪೀಡಿತ ಗಾಜಾದ ಪರಿಸ್ಥಿತಿಗೆ ಎಲ್ಲಿಗೆ ತಲುಪಿದೆಯೆಂದರೆ ಭಾರತದಲ್ಲಿ ಕೇವಲ 5 ರೂಪಾಯಿಗೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕಿಟ್, ಗಾಜಾದಲ್ಲಿ ಬರೋಬ್ಬರಿ 2,400 ರೂಪಾಯಿಗೆ (ಅಂದಾಜು 30 ಡಾಲರ್) ಮಾರಾಟವಾಗುತ್ತಿದೆಯಂತೆ.
ಇಸ್ರೇಲ್-ಹಮಾಸ್ ಸಂಘರ್ಷದಿಂದ ಉಂಟಾದ ತೀವ್ರ ಮಾನವೀಯ ಬಿಕ್ಕಟ್ಟಿನಿಂದಾಗಿ ಗಾಜಾದಲ್ಲಿ ಆಹಾರ ಸಾಮಗ್ರಿಗಳ ತೀವ್ರ ಕೊರತೆ ಉಂಟಾಗಿದ್ದು, ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ ಎಂದು ವರದಿಗಳು ಹೇಳಿವೆ.
ಗಾಜಾದಲ್ಲಿ ಆಹಾರದ ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿ, ಸಾಮಾನ್ಯವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಪಾರ್ಲೆ-ಜಿ ಬಿಸ್ಕಿಟ್ಗಳು ಕಾಳಸಂತೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತಿವೆ. ಗಾಜಾದಲ್ಲಿ ದಿನಸಿ ಸಾಮಗ್ರಿಗಳ ಲಭ್ಯತೆ ಕಡಿಮೆಯಾಗಿರುವುದರಿಂದ, ಈ ಬಿಸ್ಕಿಟ್ಗಳ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದೆ. ಮಕ್ಕಳ ಹೊಟ್ಟೆ ತುಂಬಿಸಲು ಹೆತ್ತವರು ಪಾರ್ಲೆ-ಜಿಯ ಮೊರೆ ಹೋಗುತ್ತಿದ್ದಾರೆ.
ವರದಿಗಳ ಪ್ರಕಾರ, ಗಾಜಾದಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆಯಿಂದಾಗಿ ಆಹಾರ ವಿತರಣಾ ವ್ಯವಸ್ಥೆಯು ಆತಂಕಕಾರಿಯಾಗಿ ಕುಸಿದಿದ್ದು, ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸ್ಥಳೀಯರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯಲು ತೀವ್ರ ತೊಂದರೆಯಾಗುತ್ತಿದೆ. ಎಷ್ಟೋ ದಿನಗಳಿಗೆ ಒಮ್ಮೆ ಯಾವುದಾದರೂ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅದೂ ಇಸ್ರೇಲ್ ಸೇನೆ ಅನುವು ಮಾಡಿಕೊಟ್ಟರೆ ಮಾತ್ರ ಒಂದಿಷ್ಟು ದಿನಸಿ ಪದಾರ್ಥಗಳು ಲಭ್ಯವಾಗುತ್ತಿವೆ.
ಆಗ ಗಾಜಾದ ಜನರು ಅದನ್ನು ಕೊಳ್ಳಲು ಮುಗಿಬೀಳುವ ಕಾರಣ ಕೆಲವರಿಗಷ್ಟೇ ಅದು ಲಭ್ಯವಾಗುತ್ತಿದೆ. ಉಳಿದವರು ಖಾಲಿ ಕೈಯ್ಯಲ್ಲಿ ಮರಳಬೇಕಾಗುತ್ತದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅಗತ್ಯ ವಸ್ತುಗಳನ್ನು ಪೂರೈಸುವ ಸ್ಥಳಗಳ ಮೇಲೆಯೇ ಇಸ್ರೇಲ್ ಸೇನೆ ದಾಳಿ ನಡೆಸುತ್ತಿರುವ ಕಾರಣ, ಅಲ್ಲಿಗೆ ಹೋಗಲೂ ಜನರು ಭಯಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಗಾಜಾದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಅನೇಕರು ಯುದ್ಧದ ಬದಲಿಗೆ ಹಸಿವಿನಿಂದಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂದರ್ಭದಲ್ಲಿ, ಭಾರತದಿಂದ ಆಮದು ಮಾಡಿಕೊಳ್ಳಲಾದ ಪಾರ್ಲೆ-ಜಿ ಬಿಸ್ಕಿಟ್ಗಳು ಕೆಲವರಿಗೆ ಆಹಾರದ ಮೂಲವಾಗಿದ್ದರೂ, ಅವುಗಳ ದರವು ಸಾಮಾನ್ಯ ಜನರಿಗೆ ಕೈಗೆಟುಕದಂತಾಗಿದೆ.
ಈ ಬೆಳವಣಿಗೆಯು ಗಾಜಾದ ಮಾನವೀಯ ಬಿಕ್ಕಟ್ಟಿನ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಗಾಜಾದಲ್ಲಿ ಆಹಾರ ಮತ್ತು ಅಪಸ್ಮಾರ ನಿಗ್ರಹ ಸಾಮಗ್ರಿಗಳ ವಿತರಣೆಯನ್ನು ಸುಗಮಗೊಳಿಸಲು ಒತ್ತಾಯಿಸಿದೆ. ಆದರೆ, ಇಸ್ರೇಲ್ನ ಆಡಳಿತದಿಂದಾಗಿ ಈ ಪ್ರಯತ್ನಗಳಿಗೆ ತಡೆಯಾಗುತ್ತಿವೆ ಎಂದು ವರದಿಗಳು ತಿಳಿಸಿವೆ.
ಗಾಜಾದಲ್ಲಿ ಶಾಂತಿ ಸ್ಥಾಪನೆ ಮತ್ತು ಮಾನವೀಯ ನೆರವಿಗಾಗಿ ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದ್ದು, ಈ ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣದ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.