ನವದೆಹಲಿ: ಭಾರತ –ಪಾಕಿಸ್ತಾನದ ನಡುವೆ ಸಂಘರ್ಷ(India- Pak War) ತೀವ್ರಗೊಂಡಿರುವಂತೆಯೇ ಕೇಂದ್ರದ ಪ್ರಮುಖ ಸಚಿವರು ಸರಣಿ ಸಭೆಗಳನ್ನು ನಡೆಸಲಾರಂಭಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರು ಹಾಗೂ ಭೂ, ವಾಯು, ನೌಕಾಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಗಡಿಯಲ್ಲಿನ ಪರಿಸ್ಥಿತಿ, ಪಾಕ್ ದಾಳಿ ಹಾಗೂ ಭಾರತದ ಪ್ರತಿದಾಳಿ ಸೇರಿದಂತೆ ಯುದ್ಧಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದು ಕಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಾಹ್ನ 12.30ಕ್ಕೆ ಬಿಎಸ್ಎಫ್(ಗಡಿ ಭದ್ರತಾ ಪಡೆ) ಪ್ರಧಾನ ನಿರ್ದೇಶಕ, ಸಿಬಿಎಸ್ಎಫ್ ಪ್ರಧಾನ ನಿರ್ದೇಶಕರು ಮತ್ತು ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಆರಂಭಿಸಿದ್ದಾರೆ. ಗಡಿಯಲ್ಲಿನ ಪರಿಸ್ಥಿತಿ, ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರೂ ಭಾಗಿಯಾಗಲಿದ್ದು, ಈಗಾಗಲೇ ಅವರು ಅಮಿತ್ ಶಾ ಅವರ ನಿವಾಸವನ್ನು ತಲುಪಿದ್ದಾರೆ.
ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ ಭಾರತದ ಹಣಕಾಸು ಸಂಸ್ಥೆಗಳ ಸೈಬರ್ ಭದ್ರತಾ ಸನ್ನದ್ಧತೆ ಕುರಿತು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಜೊತೆಗಿನ ಸಂಘರ್ಷ ಹೆಚ್ಚಿರುವ ಈ ಸಂದರ್ಭದಲ್ಲಿ ದೇಶದ ಸೂಕ್ಷ್ಮ ಬ್ಯಾಂಕಿಂಗ್ ಮೂಲಸೌಕರ್ಯಗಳ ಸುರಕ್ಷತೆಯೂ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸುರಕ್ಷತೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುವ ಸಾಧ್ಯತೆಯಿದೆ. ಬ್ಯಾಂಕ್ ಗಳು ತಮ್ಮ ಡಿಜಿಟಲ್ ಭದ್ರತಾ ಶಿಷ್ಟಾಚಾರಗಳನ್ನು ಹೆಚ್ಚಿಸುವಂತೆ ಸಚಿವೆ ನಿರ್ಮಲಾ ಸೂಚಿಸಬಹುದು ಎನ್ನಲಾಗಿದೆ.