ಪಾಕಿಸ್ತಾನವು ಭಾರತದ ನಗರಗಳನ್ನು ಗುರಿಯಾಗಿಸಿ ನಡೆಸಿದ ಪ್ರತಿಯೊಂದು ದಾಳಿಯನ್ನೂ(India-Pak War) ಹಿಮ್ಮೆಟ್ಟಿಸಿ ಪಾಕಿಸ್ತಾನವನ್ನು ಬೆಂಡೆತ್ತುತ್ತಿರುವ ಭಾರತದ ಹಿಂದಿನ ಶಕ್ತಿ ಯಾವುದು ಗೊತ್ತಾ? ಅದುವೇ ಸಂಯೋಜಿತ ಕೌಂಟರ್ ಯುಎಎಸ್ ಗ್ರಿಡ್ (Integrated Counter-Unmanned Aircraft System) ಮತ್ತು ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ. ಈ ಎರಡು ಅಭೇದ್ಯ ಶಕ್ತಿಗಳು ಭಾರತದ ಗಗನ ರಕ್ಷಣೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಭಾರತಕ್ಕೆ ಬಾಹುಬಲಿಯ ಶಕ್ತಿ ನೀಡಿರುವ ಈ ರಕ್ಷಣಾ ವ್ಯವಸ್ಥೆಗಳ ಕುರಿತ ಮಾಹಿತಿ ಇಲ್ಲಿದೆ:
ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ
ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಬಹು-ಪದರದ ರಕ್ಷಣಾ ಗೋಡೆಯಾಗಿದ್ದು, ಇದರಲ್ಲಿ ರಷ್ಯಾದಿಂದ ಆಮದು ಮಾಡಿಕೊಂಡ ಎಸ್-400 ಟ್ರಯಂಫ್, ಇಸ್ರೇಲ್ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಎಂಆರ್-ಸ್ಯಾಮ್ (ಮೀಡಿಯಮ್ ರೇಂಜ್ ಸರ್ಫೇಸ್-ಟು-ಏರ್ ಮಿಸೈಲ್), ಬರಾಕ್ 8, ದೇಶೀಯವಾಗಿ ತಯಾರಿಸಿದ ಆಕಾಶ್ ವ್ಯವಸ್ಥೆ ಮತ್ತು ಇಸ್ರೇಲ್ನ ಸ್ಪೈಡರ್ ವ್ಯವಸ್ಥೆಗಳು ಸೇರಿವೆ. ಈ ವ್ಯವಸ್ಥೆಗಳು ವಿವಿಧ ಶ್ರೇಣಿಯ ಗುರಿಗಳನ್ನು ಗುರುತಿಸಿ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ:
ಎಸ್-400 ಟ್ರಯಂಫ್:
ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಈ ವ್ಯವಸ್ಥೆಗೆ ಭಾರತವು ಸುದರ್ಶನ ಚಕ್ರ ಎಂದು ಹೆಸರಿಟ್ಟಿದೆ. ಹೆಸರಿಗೆ ತಕ್ಕಂತೆ ಇದು 600 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಗುರುತಿಸಿ, 400 ಕಿಲೋಮೀಟರ್ ಶ್ರೇಣಿಯೊಳಗಿನ ಯುದ್ಧವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಧ್ವಂಸಗೊಳಿಸಬಲ್ಲದು. ಭಾರತವು 2018ರಲ್ಲಿ ರಷ್ಯಾದೊಂದಿಗೆ $5.43 ಬಿಲಿಯನ್ ಒಪ್ಪಂದದಡಿ ಇಂತಹ 5 ವಾಯು ರಕ್ಷಣಾ ಘಟಕಗಳನ್ನು ಖರೀದಿಸಿದ್ದು, ಈಗಾಗಲೇ ಮೂರು ಘಟಕಗಳನ್ನು ಸ್ವೀಕರಿಸಿದೆ. ಇನ್ನೆರಡು 2026ರಲ್ಲಿ ಭಾರತವನ್ನು ತಲುಪಲಿವೆ. ಈ ವಾಯು ರಕ್ಷಣಾ ವ್ಯವಸ್ಥೆಗಳು ಈಗ ಭಾರತದ ಸೇನೆಗೆ ಬೆನ್ನೆಲುವಾಗಿಯೂ, ಭಾರತೀಯರಿಗೆ ಸುರಕ್ಷಾ ಕವಚವಾಗಿಯೂ ಕಾರ್ಯನಿರ್ವಹಿಸುತ್ತಿವೆ.
ಎಂಆರ್-ಎಸ್ಎಎಂ ಮತ್ತು ಬರಾಕ್ 8:
ಇವೆರಡೂ 70ರಿಂದ 150 ಕಿಲೋಮೀಟರ್ ಶ್ರೇಣಿಯೊಳಗಿನ ಗುರಿಗಳನ್ನು ಧ್ವಂಸಗೊಳಿಸಬಲ್ಲವು. ಇವುಗಳನ್ನು ಭೂಮಿ ಮತ್ತು ನೌಕಾಪಡೆಯ ರಕ್ಷಣೆಗೆ ಬಳಸಲಾಗುತ್ತದೆ.
ಆಕಾಶ್ ವ್ಯವಸ್ಥೆ:
ದೇಶೀಯವಾಗಿ ತಯಾರಿಸಿದ ಈ ವ್ಯವಸ್ಥೆಯು 30 ರಿಂದ 50 ಕಿಲೋಮೀಟರ್ ಶ್ರೇಣಿಯ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಕೆಳಮಟ್ಟದಲ್ಲಿ ಹಾರುವ ವಿಮಾನಗಳು, ಹೆಲಿಕಾಪ್ಟರ್ ಗಳು ಮತ್ತು ಡ್ರೋನ್ ಗಳ ವಿರುದ್ಧ ತ್ವರಿತ ಪ್ರತಿದಾಳಿ ನಡೆಸುತ್ತವೆ.
ಸ್ಪೈಡರ್ ವ್ಯವಸ್ಥೆ:
ಇಸ್ರೇಲ್ನಿಂದ ಆಮದು ಮಾಡಿಕೊಂಡ ಈ ವ್ಯವಸ್ಥೆಯು 8-10 ಕಿಲೋಮೀಟರ್ ಶ್ರೇಣಿಯೊಳಗಿನ ಗುರಿಗಳನ್ನು ಧ್ವಂಸಗೊಳಿಸುತ್ತದೆ, ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಬಳಸಲಾಗುತ್ತದೆ.
ಇದರ ಜೊತೆಗೆ, ಸಂಯೋಜಿತ ಕೌಂಟರ್ UAS ಗ್ರಿಡ್ ವ್ಯವಸ್ಥೆಯು ರೇಡಾರ್, ರೇಡಿಯೊ ಫ್ರೀಕ್ವೆನ್ಸಿ ಸೆನ್ಸರ್ಗಳು, ಆಪ್ಟಿಕಲ್ ಕ್ಯಾಮೆರಾಗಳು ಮತ್ತು ಧ್ವನಿ ಗುರುತಿಸುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಾಕಿಸ್ತಾನದ ಕಡೆಯಿಂದ ಬರುವ ಡ್ರೋನ್ಗಳನ್ನು ಪತ್ತೆಹಚ್ಚಲಾಗುತ್ತಿವೆ. ಗುರಿಯನ್ನು ಗುರುತಿಸಿದ ನಂತರ, ಸಿಗ್ನಲ್ ಜಾಮಿಂಗ್, GPS ಸ್ಪೂಫಿಂಗ್ ಅಥವಾ ಕೈನೆಟಿಕ್ ಇಂಟರ್ಸೆಪ್ಟರ್ಗಳ ಮೂಲಕ ಡ್ರೋನ್ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಗುರುವಾರ ಪಾಕಿಸ್ತಾನವು ಜಮ್ಮು ವಿಮಾನ ನಿಲ್ದಾಣ, ಪಠಾಣ್ಕೋಟ್, ಉಧಂಪುರ್, ಜೈಸಲ್ಮೇರ್ ಮತ್ತು ಭುಜ್ ಸೇರಿದಂತೆ 15 ಸೈನಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಡ್ರೋನ್ಗಳು ಮತ್ತು 8 ಕ್ಷಿಪಣಿಗಳನ್ನು ಬಳಸಲಾಗಿತ್ತು.
ಜಮ್ಮು ವಿಮಾನ ನಿಲ್ದಾಣದ ಮೇಲೆ ಒಂದು ಡ್ರೋನ್ ದಾಳಿ ನಡೆಸಿತ್ತು. ಆದರೆ ಎಸ್-400 ವ್ಯವಸ್ಥೆಯು ಎಂಟು ಕ್ಷಿಪಣಿಗಳನ್ನು ಗಾಳಿಯಲ್ಲೇ ಧ್ವಂಸಗೊಳಿಸಿತು. ಜಮ್ಮು ವಿಶ್ವವಿದ್ಯಾಲಯದ ಸಮೀಪ ಎರಡು ಡ್ರೋನ್ಗಳನ್ನು ಹೊಡೆದುರುಳಿಸಲಾಯಿತು. ಈ ದಾಳಿಯ ತೀವ್ರತೆಯು ಹಮಾಸ್ನಂತಹ ಭಯೋತ್ಪಾದಕ ಸಂಘಟನೆಗಳ ದಾಳಿಗಳನ್ನು ನೆನಪಿಸಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗದಂತೆ ತಡೆಯುವಲ್ಲಿ ಯಶಸ್ವಿಯಾದವು.
ಭಾರತದ ಪ್ರತಿದಾಳಿ
ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ, ಭಾರತವು ಲಾಹೋರ್ನಲ್ಲಿರುವ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿ ಪಾಕ್ಗೆ ಮರ್ಮಾಘಾತ ಮಾಡಿತು. ಇಸ್ರೇಲ್ನ ಹಾರ್ಪಿ ಕಾಮಿಕೇಜ್ ಡ್ರೋನ್ಗಳನ್ನು ಬಳಸಿಕೊಂಡು ಚೀನಾ ತಯಾರಿಕೆಯ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಯಿತು. ಹೀಗಾಗಿ ಈಗ ಲಾಹೋರ್ ವಾಯು ದಾಳಿಯ ರಕ್ಷಣೆಯಿಂದ ವಂಚಿತವಾಗಿದ್ದು, ಆ ನಗರದ ಮೇಲೆ ವೈಮಾನಿಕ ದಾಳಿ ನಡೆದರೆ ಕಥೆ ಮುಗಿದಂತೆಯೇ ಸರಿ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ, ಭಾರತವು ಪಾಕಿಸ್ತಾನದ ಎಫ್-16, ಎರಡು ಜೆಎಫ್-17 ಯುದ್ಧವಿಮಾನಗಳು ಮತ್ತು ಒಂದು AWACS (Airborne Warning and Control System) ವಿಮಾನವನ್ನು ಧ್ವಂಸಗೊಳಿಸಿತು.
ಒಟ್ಟಾರೆಯಾಗಿ, ಈ ಘಟನೆಯು ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಮತ್ತು ದೇಶದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಜೊತೆಗೆ, ಭಾರತವು ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಮತ್ತು ಭಯೋತ್ಪಾದನೆಯ ವಿರುದ್ಧ ದೃಢವಾಗಿ ಹೋರಾಡಲು ಸಿದ್ಧವಾಗಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ.