ಬೆಂಗಳೂರು: ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ದರೆ ಭಾರತ-ಪಾಕಿಸ್ತಾನ ಮ್ಯಾಚ್ ರದ್ದು ಮಾಡಿಸುತ್ತಿದ್ದೆವು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇಂದು ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಭಾರತ ಪಾಕಿಸ್ತಾನ ಮ್ಯಾಚ್ ರದ್ದು ಮಾಡಬೇಕು. ಯಾವ ಮುಖ ಇಟ್ಟುಕೊಂಡು ಮ್ಯಾಚ್ ನಡೆಸುತ್ತಿದ್ದಾರೆ? ಪಹಲ್ಗಾಮ್ ಘಟನೆಯ ನೋವು ನಮಗೆ ಇನ್ನೂ ಇದೆ. ಕೇಂದ್ರದ ಬಿಜೆಪಿ ಈ ಮ್ಯಾಚ್ ನಿಲ್ಲಿಸಬಹುದಿತ್ತು, ಆದರೆ ನಿಲ್ಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಅಮಿತಾ ಶಾ ಮಗ ಜೈ ಶಾ ಇದ್ದಾರೆ, ಅವರಿಗೆ ಬ್ಯುಸಿನೆಸ್ ಮುಖ್ಯ. ಇಲ್ಲಿ ಅಶೋಕ, ವಿಜಯೇಂದ್ರ, ಯತ್ನಾಳ್ ಅವರೆಲ್ಲಾ ಪಾಕಿಸ್ತಾನ ಎಂದು ಬೊಬ್ಬೆ ಹಾಕಿದರು. ನಿಮಗೆ ಧಮ್ಮು, ತಾಕತ್ ಇದ್ದರೆ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ನಿಲ್ಲಿಸಿ. ನಾವಿನ್ನೂ ಪಹಲ್ಗಾಮ್ ಘಟನೆ ಮರೆತಿಲ್ಲ. ನಮಗೆ ನೋವಿದೆ, ಅದಕ್ಕೆ ನಾನು ಇವತ್ತಿನ ಮ್ಯಾಚ್ ನೋಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಛಲವಾದಿ ನಾರಾಯಣಸ್ವಾಮಿ ಕುರಿತು ಪ್ರತಿಕ್ರಿಯಿಸಿದ ಅವರು, ಜನರಿಗೆ ಒಳ್ಳೆದು ಮಾಡುವುದರಲ್ಲಿ ನಾನು ಅಣ್ಣ, ಅವರು ತಮ್ಮ. ದಲಿತರ ಬಗ್ಗೆ ನಾರಾಯಣಸ್ವಾಮಿ ಮಾತನಾಡುತ್ತಾರೆ. ಎಐಸಿಸಿ ಅಧ್ಯಕ್ಷರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ನಮ್ನ ಕ್ಷೇತ್ರದಲ್ಲಿ ದಲಿತ ಹುಡುಗ ಆತ್ಮಹತ್ಯೆ ಮಾಡಿಕೊಂಡ. ನಿಮ್ಮ ಸಂಸದರ ಹೆಸರು ಹೇಳಿ ಸತ್ತು ಹೋದ. ನೀವು ಅವರ ಕುಟುಂಬವನ್ನು ಮಾತನಾಡಿಸಲು ಬಂದರೆ? ಇದೇನಾ ನಿಮ್ಮ ದಲಿತ ಪ್ರೀತಿ? ನನ್ನನ್ನು ನಿಮ್ಹಾನ್ಸ್ಗೆ ಸೇರಿಸುತ್ತೇನೆ ಎಂದಿದ್ದೀರಿ? ಮೊದಲು ನೀವು ಟ್ರೀಟ್ಮೆಂಟ್ ತೆಗೆದುಕೊಂಡು ಬನ್ನಿ.
ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಅವರನ್ನು ಕರೆದುಕೊಂಡು ಹೋಗಿ. ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆ. ರಾಜ್ಯದ ಸಿಎಂ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡಿದರೆ ಅದು ಸಂವಿಧಾನ ಗೌರವವೇ? ನೀವು ಸಿಎಂ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು, ನಾನು ನಿಮ್ಮ ಬಗ್ಗೆ ಮಾತನಾಡಬಾರದಾ? ಕೋತಿಗಳನ್ನು ಕೋತಿ ಎಂದರೆ ತಪ್ಪಾ ಎಂದು ಹರಿಹಾಯ್ದಿದ್ದಾರೆ.