ದುಬೈ : ನೆಟ್ಫ್ಲಿಕ್ಸ್ನ ರಿಯಾಲಿಟಿ ಸರಣಿ ‘ದೇಸಿ ಬ್ಲಿಂಗ್’ (Desi Bling) ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಇಂಟರ್ನೆಟ್ನಲ್ಲಿ ತಲ್ಲಣ ಸೃಷ್ಟಿಸಿದೆ. ದುಬೈನಲ್ಲಿ ನೆಲೆಸಿರುವ ಶ್ರೀಮಂತ ಭಾರತೀಯರ ಐಷಾರಾಮಿ ಜೀವನಶೈಲಿಯನ್ನು ಅನಾವರಣಗೊಳಿಸುವ ಈ ಶೋ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ದುಬೈನ ಪ್ರಸಿದ್ಧ ‘ಅನಾಕ್ಸ್ ಹೋಲ್ಡಿಂಗ್’ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಸತೀಶ್ ಸನ್ಪಾಲ್ ಹಾಗೂ ಅವರ ಪತ್ನಿ ತಬಿಂದಾ ಸನ್ಪಾಲ್ ತಮ್ಮ ಅತಿರಂಜಿತ ಮಾತುಗಳು ಮತ್ತು ಅದ್ಧೂರಿ ಜೀವನಶೈಲಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ.
40 ಕೆಜಿ ಚಿನ್ನದ ಒಡತಿ!
ಕಾರ್ಯಕ್ರಮದ ವೇಳೆ ಭಾರತೀಯ ಕಿರುತೆರೆಯ ಜನಪ್ರಿಯ ಜೋಡಿಯಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರೊಂದಿಗೆ ಮಾತನಾಡುತ್ತಾ ತಬಿಂದಾ ಮತ್ತು ಸತೀಶ್ ದಂಪತಿ ತಮ್ಮ ಚಿನ್ನದ ವ್ಯಾಮೋಹವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. “ನನ್ನ ಬಳಿ ಈಗಾಗಲೇ ಬರೋಬ್ಬರಿ 40 ಕೆಜಿ ಚಿನ್ನವಿದೆ. ಸತೀಶ್ಗೆ ಚಿನ್ನ ಖರೀದಿಸುವುದೆಂದರೆ ತುಂಬಾ ಇಷ್ಟ. ಪ್ರತಿ ವರ್ಷ ಧನತ್ರಯೋದಶಿ (ಧನ್ತೇರಸ್) ಹಬ್ಬಕ್ಕೆ ಅವರು ನನಗೆ ಸುಮಾರು 3 ಕೆ.ಜಿ. ಚಿನ್ನವನ್ನು ಉಡುಗೊರೆಯಾಗಿ ನೀಡುತ್ತಾರೆ” ಎಂದು ತಬಿಂದಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಸತೀಶ್, “ಬಿಂದಾ (ತಬಿಂದಾ) ನನ್ನ ಪಾಲಿನ ಗೋಲ್ಡ್ ಕ್ವೀನ್. ನಮ್ಮ 10ನೇ ವಿವಾಹ ವಾರ್ಷಿಕೋತ್ಸವದಂದು ಆಕೆಯನ್ನು ಚಿನ್ನದಲ್ಲೇ ತುಲಾಭಾರ ಮಾಡುವ ಭರವಸೆ ನೀಡಿದ್ದೇನೆ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರಣ್ ಕುಂದ್ರಾ, “ನಾವು ಹಣದ ಬಗ್ಗೆ ಇಷ್ಟು ಬಹಿರಂಗವಾಗಿ ಮಾತನಾಡುವ ಸಂಸ್ಕೃತಿಯಿಂದ ಬಂದವರಲ್ಲ. ಒಂದು ವೇಳೆ ಭಾರತದಲ್ಲಿ ಈ ರೀತಿ ಮಾತನಾಡಿದರೆ ಆದಾಯ ತೆರಿಗೆ ಇಲಾಖೆಯವರು (IT Department) ನಮ್ಮ ಮನೆಗಳ ಮೇಲೆ ದಾಳಿ ನಡೆಸುವುದು ಗ್ಯಾರಂಟಿ” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ದುಬೈನ ಅತ್ಯಂತ ಶ್ರೀಮಂತ ಮಗು ‘ಬೆಲ್ಲಾ’
ಸತೀಶ್ ಸನ್ಪಾಲ್ ತಾವು ಜಬಲ್ಪುರದಿಂದ ಯಾವುದೇ ಕೌಟುಂಬಿಕ ಆಸ್ತಿ ಇಲ್ಲದೆ ಕೇವಲ 10 ಲಕ್ಷ ದಿರ್ಹಾಮ್ಸ್ ತಂದು ಇಂದು ದುಬೈನಲ್ಲಿ ಬಿಲಿಯನೇರ್ ಆಗಿ ಬೆಳೆದ ಕಥೆಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ತಬಿಂದಾ ತಮ್ಮ ಮಗಳ ವೈಭೋಗದ ಬಗ್ಗೆ ಮಾತನಾಡುತ್ತಾ, “ನಮ್ಮ ಮಗಳು ಬೆಲ್ಲಾ ಜನಿಸುವ ಮುನ್ನವೇ ಆಕೆಯ ತಂದೆ ಅವಳಿಗಾಗಿ ಚಿನ್ನದ ಕಟ್ಲರಿಗಳನ್ನು (ಚಮಚ, ತಟ್ಟೆ, ಲೋಟ) ಸಿದ್ಧಪಡಿಸಿದ್ದರು. ಆಕೆ ದುಬೈನ ಅತ್ಯಂತ ಶ್ರೀಮಂತ ಮಗು” ಎಂದು ಹೇಳಿದ್ದಾರೆ. ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ರಾಜಕುಮಾರಿಯ ರಥದ ಎಂಟ್ರಿಯೊಂದಿಗೆ ಆಚರಿಸಲಾಗಿದ್ದು, ಆ ದಿನ ಮಗು 24 ಕ್ಯಾರೆಟ್ ಚಿನ್ನದ ಜ್ಯಾಕೆಟ್ ಧರಿಸಿತ್ತು ಎಂದು ದಂಪತಿ ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ಅನ್ನೇ ದುಬೈಗೆ ತರಿಸುವ ಬಿಲಿಯನೇರ್
ತಮ್ಮ ಐಷಾರಾಮಿ ಹವ್ಯಾಸಗಳ ಬಗ್ಗೆ ಮಾತನಾಡುತ್ತಾ ಸತೀಶ್, “ನಾವು ಬಾಲಿವುಡ್ನತ್ತ ಹೋಗುವುದಿಲ್ಲ, ಬದಲಿಗೆ ಬಾಲಿವುಡ್ ಅನ್ನೇ ನಮ್ಮತ್ತ ತರಿಸಿಕೊಳ್ಳುತ್ತೇವೆ. ಹಣವಿದ್ದರೆ ಎಲ್ಲವೂ ಮಾತನಾಡುತ್ತದೆ” ಎಂದು ಹೆಮ್ಮೆಯಿಂದ ನುಡಿದಿದ್ದಾರೆ. ಸತೀಶ್ ತಾವು ಧರಿಸುವ ಪ್ರತಿಯೊಂದು ಉಡುಪೂ ಕಸ್ಟಮ್-ಮೇಡ್ (ವಿಶೇಷವಾಗಿ ವಿನ್ಯಾಸಗೊಳಿಸಿದ್ದು) ಆಗಿರುತ್ತದೆ ಎಂದಿದ್ದಾರೆ. ಜೊತೆಗೆ ಒಂದು ಬಾರಿ ಬಳಸಿದ ವಿನ್ಯಾಸದ ವಸ್ತ್ರವನ್ನು ಮತ್ತೆ ಧರಿಸುವುದಿಲ್ಲ ಎಂದು ತಬಿಂದಾ ಬಹಿರಂಗಪಡಿಸಿದ್ದಾರೆ. ಇದೇ ಶೋನಲ್ಲಿ ಕರಣ್ ಕುಂದ್ರಾ ಅವರು ತೇಜಸ್ವಿ ಪ್ರಕಾಶ್ಗೆ ಪ್ರಪೋಸ್ ಮಾಡಿರುವ ವಿಡಿಯೋ ಕ್ಲಿಪ್ ಕೂಡ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಅಪ್ರಾಪ್ತೆಯೊಂದಿಗೆ ಪ್ರೇಮ ಪ್ರಸಂಗ – ಚಿತ್ರಹಿಂಸೆ ನೀಡಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರನ ಕೊಲೆ!


















