ನವದೆಹಲಿ: ಅಹಮದಾಬಾದ್ ನಲ್ಲಿ ನಡೆದ ಏರಿಂಡಿಯಾ ವಿಮಾನ ದುರಂತದಲ್ಲಿ ಪವಾಡವೆಂಬಂತೆ ಪಾರಾಗಿರುವ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಇನ್ನೂ ಆಘಾತದಿಂದ ಹೊರಗೆ ಬಂದಿಲ್ಲ. ತಾನು ಹೇಗೆ ಬದುಕುಳಿದೆ ಎಂಬುದೇ ಅವರಿಗೆ ಗೊತ್ತಾಗುತ್ತಿಲ್ಲ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ಗೆ ಭೇಟಿ ನೀಡಿದ್ದು, ಆಸ್ಪತ್ರೆಗೂ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಅವರು ವಿಶ್ವಾಸ್ ಕುಮಾರ್ ರಮೇಶ್ ಅವರೊಂದಿಗೂ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದಾದ ಬಳಿಕ ಮಾಧ್ಯಮದವರು ಘಟನೆಯ ಬಗ್ಗೆ ರಮೇಶ್ ಅವರ ಅನುಭವವನ್ನು ಕೇಳಲು ಪ್ರಯತ್ನಿಸಿದ್ದಾರೆ. ಆದರೆ, ಮಾತನಾಡುವ ಸ್ಥಿತಿಯಲ್ಲಿರದ ರಮೇಶ್, “ನಾನು ಹೇಗೆ ಬದುಕುಳಿದು ಬಂದೆ ಎಂಬುದು ನನಗೇ ಗೊತ್ತಿಲ್ಲ” ಎಂದಿದ್ದಾರೆ.
“ಒಂದು ಕ್ಷಣ, ನಾನೂ ಸಾಯುತ್ತೇನೆ ಎಂದು ಅನಿಸಿತು. ಬದುಕು ಮುಗಿದೇಬಿಟ್ಟಿತು ಅಂದುಕೊಂಡಿದ್ದೆ. ಆದರೆ, ಕಣ್ಣು ತೆರೆದು ನೋಡಿದಾಗ, ನಾನು ಜೀವಂತವಾಗಿದ್ದೇನೆ ಎಂಬುದು ಗೊತ್ತಾಯಿತು. ಸೀಟ್ ಬೆಲ್ಟ್ ಓಪನ್ ಮಾಡಿ, ಅಲ್ಲಿಂದ ಹೊರ ನಡೆದೆ. ಗಗನಸಖಿಯರು, ಆಂಟಿ, ಅಂಕಲ್, ಮಕ್ಕಳು ಎಲ್ಲರ ಮೃತದೇಹಗಳು ನನ್ನ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನನಗೆ ವಿಪರೀತ ಭಯ ಆವರಿಸಿತು. ಏನು ಮಾಡಬೇಕೆಂದು ತೋಚದೇ ಓಡತೊಡಗಿದೆ. ಅಷ್ಟರಲ್ಲೇ ಯಾರೋ ನನ್ನ ಹಿಡಿದು ಎಳೆದಂತಾಯಿತು” ಎಂದು ರಮೇಶ್ ಹೇಳಿದ್ದಾರೆ.

ರಮೇಶ್ ಅವರ ಸೀಟ್ ಸಂಖ್ಯೆ 11ಎ ಎಮರ್ಜೆನ್ಸಿ ಬಾಗಿಲಿನ ಪಕ್ಕದಲ್ಲೇ ಇತ್ತು. ವಿಮಾನವು ಹಾಸ್ಟೆಲ್ ಕಟ್ಟಡಕ್ಕೆ ಬಂದು ಅಪ್ಪಳಿಸಿದಾಗ, ಆ ರಭಸಕ್ಕೆ ತುರ್ತು ನಿರ್ಗಮನ ಬಾಗಿಲು ತನ್ನಿಂತಾನೇ ತೆರೆಯಿತು. ಹೀಗಾಗಿ ರಮೇಶ್ ಮೃತ್ಯುಂಜಯನಾಗಿ ಬದುಕುಳಿದರು.
ನಾನು ಕೆಳಕ್ಕೆ ಬಿದ್ದ ಕೂಡಲೇ ಅಲ್ಲಿಂದ ಒಂದು ದಾರಿ ಕಾಣಿಸಿತು. ನಾನು ಅಲ್ಲಿಂದ ಓಡಿಕೊಂಡು ಹೊರಬಂದೆ. ಕ್ಷಣಮಾತ್ರದಲ್ಲಿ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು. ನನ್ನ ಕೈಗಳಿಗೆ, ಮುಖಕ್ಕೆ ಸ್ವಲ್ಪ ಬೆಂಕಿ ತಾಗಿತು. ಕೂದಲೆಳೆ ಅಂತರದಲ್ಲಿ ಪಾರಾದೆ. ನನ್ನ ಕಣ್ಣ ಮುಂದೆಯೇ ಇಬ್ಬರು ಗಗನಸಖಿಯರು ಸುಟ್ಟು ಕರಕಲಾದರು ಎಂದು ಹೇಳುತ್ತಿದ್ದಂತೆ ರಮೇಶ್ ಭಾವುಕರಾದರು.
ವಿಮಾನ ಪತನಗೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಅವರು, ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸ್ಟಕ್ ಆದಂತೆ ಭಾಸವಾಯಿತು. ನಂತರ ಹಸಿರು ಮತ್ತು ಬಿಳಿ ಬಣ್ಣದ ಲೈಟ್ ಗಳು ಗೋಚರಿಸಿದವು. ಪೈಲಟ್ ಗಳು ವಿಮಾನವನ್ನು ಮೇಲಕ್ಕೇರಿಸಲು ಪ್ರಯತ್ನಿಸದರು. ಆದರೆ, ವಿಮಾನವು ಅತಿ ವೇಗದಲ್ಲಿ ಕೆಳಮುಖವಾಗಿ ಸಾಗಿ, ಕಟ್ಟಡಕ್ಕೆ ಡಿಕ್ಕಿ ಹೊಡೆಯಿತು ಎಂದಿದ್ದಾರೆ.