ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ವಿಚಾರವಾಗಿ ಟ್ರಂಪ್ ಮಾತು ಹಾಗೂ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ ನಿಲ್ಲಿಸಲು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಸವಾಲಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷ ನನ್ನ ಜೊತೆಗೆ ಮಾತನಾಡಲು ಪ್ರಯತ್ನಿಸಿದರು. ಸೇನೆಯ ಜೊತೆಗೆ ಮಾತನಾಡುತ್ತಿದ್ದೆ, ಸಾಧ್ಯವಾಗಲಿಲ್ಲ. ಆಮೇಲೆ ವಾಪಸ್ ಫೋನ್ ಮಾಡಿ ಅವರ ಜೊತೆಗೆ ಮಾತನಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡುವುದಿದೆ ಎಂದು ಎಚ್ಚರಿಕೆ ನೀಡಿದರು. ಅವರ ಉದ್ದೇಶ ದಾಳಿಯಾಗಿದ್ದರೆ, ಅದು ಅವರಿಗೆ ದುಬಾರಿಯಾಗಲಿದೆ ಎಂದು ಉತ್ತರಿಸಿದೆ. ನಾವು ಅದಕ್ಕಿಂತ ದೊಡ್ಡ ದಾಳಿ ನಡೆಸಿ ಉತ್ತರ ಕೊಡುತ್ತೇವೆ. ಗುಂಡಿನ ಉತ್ತರ ಗುಂಡಿನಿಂದಲೇ ಕೊಡುತ್ತೇವೆ ಎಂದು ಹೇಳಿದ್ದೆ ಎಂದು ಮೋದಿ ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜಾಗತಿಕ ದೇಶಗಳ ಬೆಂಬಲ ದೊರಕಿತು. ಆದರೆ, ನಮ್ಮ ಸೇನೆಯ ಪರಾಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ, ಇದು ನಮ್ಮ ದೌರ್ಭಾಗ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
193 ದೇಶಗಳಲ್ಲಿ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಮಾತನಾಡಿವೆ. ಬಾಕಿ ದೇಶಗಳು ಭಾರತದ ಬೆಂಬಲಕ್ಕೆ ಬಂದಿವೆ. ಜಾಗತಿಕ ದೇಶಗಳ ಬೆಂಬಲ ದೊರಕಿದೆ. ಆದರೆ, ನಮ್ಮ ವೀರ ಯೋಧರ ಪರಾಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ, ಇದು ನಮ್ಮ ದೌರ್ಭಾಗ್ಯ ಎಂದು ಹೇಳಿದ್ದಾರೆ.
ಮೋದಿ ಎಲ್ಲಿ ಹೋದರು, ಎಲ್ಲಿದೆ 53 ಇಂಚು ಎದೆಗಾರಿಕೆ? ಹೀಗೆ ಸಾಕಷ್ಟು ತಮಾಷೆ ಮಾಡುತ್ತಿದ್ದರು. ಪೆಹಲ್ಗಾಮ್ ದಾಳಿಯಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿತ್ತು. ಸ್ವಾರ್ಥ ರಾಜಕೀಯಕ್ಕೆ ನನ್ನನ್ನು ಗುರಿಯಾಗಿಸಿಕೊಂಡಿದ್ದರು. ಇಂತಹ ಹೇಳಿಕೆ ದೇಶದ ಯೋಧರ ಮನೋಬಲ ಕುಗ್ಗಿಸುತ್ತಿತ್ತು. ಅವರಿಗೆ ಭಾರತದ ಸೇನೆ, ಶಕ್ತಿಯ ಮೇಲೆ ನಂಬಿಕೆಯಿಲ್ಲ. ಅದೇ ಕಾರಣಕ್ಕೆ ಆಪರೇಷನ್ ಸಿಂಧೂರ ಮೇಲೆ ಪ್ರಶ್ನೆ ಕೇಳಿದರು. ಇದನ್ನು ಮಾಡಿ ಮಾಧ್ಯಮದಲ್ಲಿ ಹೆಡ್ಲೈನ್ ಆಗಬಹುದು. ದೇಶದ ಜನರ ಹೃದಯದಲ್ಲಿ ಸ್ಥಳ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ.
ನಾಚಿಕೆ ಬಿಟ್ಟು ಪಾಕಿಸ್ತಾನ ಭಯೋತ್ಪಾದಕರ ಜೊತೆಗೆ ನಿಂತಿತು. ನಾವು ಹೊಸ ಅವಕಾಶವನ್ನು ನೋಡುತ್ತಿದ್ದೇವೆ. ಮೊದಲು ನಾವು ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿದ್ದೇವು. ಆದರೆ, ಪಾಕಿಸ್ತಾನದ ಬೆಂಬಲದ ನಂತರ ವರ್ಷಗಳ ಕಾಲ ನೆನಪಿರುವಂಥ ಉತ್ತರ ನೀಡಿದ್ದೇವೆ. ನಮ್ಮ ಮಿಸೈಲ್ಗಳು ಪಾಕಿಸ್ತಾನ ತಲುಪಿದವು. ಪಾಕಿಸ್ತಾನ ಮಂಡಿಯೂರುವ ಸ್ಥಿತಿಗೆ ಬಂತು. ಬಳಿಕ ಪಾಕಿಸ್ತಾನ ಡಿಜಿಎಂಒ ಮೂಲಕ ಸಂಧಾನಕ್ಕೆ ಬಂತು. ಸಾಕು ಮಾಡಿ, ಈಗಾಗಲೇ ಸಾಕಷ್ಟು ಹೊಡೆದ್ದೀರಿ. ಇನ್ನು ಹೊಡೆದರೆ ತಡೆಯುವ ಶಕ್ತಿ ಇಲ್ಲ. ದಾಳಿ ನಿಲ್ಲಿಸಿ ಎಂದು ಡಿಜಿಎಂಓ ಮನವಿ ಮಾಡಿದರು. ನಮ್ಮ ಟಾರ್ಗೆಟ್ ಭಯೋತ್ಪಾದನೆ ಅಂತ ನಾವು ಮೊದಲೇ ಹೇಳಿದ್ದೆವು. ಪಾಕಿಸ್ತಾನ ಅವರ ಬೆಂಬಲಕ್ಕೆ ನಿಂತು ತಪ್ಪು ಮಾಡಿತು. ನಾವು ಹೇಳಿ ಹೊಡೆದಿದ್ದೇವೆ, ಆಮೇಲೆ ಮನವಿ ಮೇರೆಗೆ ದಾಳಿ ನಿಲ್ಲಿಸಿದೆವು ಎಂದು ಸ್ಪಷ್ಟಪಡಿಸಿದ್ದಾರೆ.