ದೇಶವಾಸಿಗಳಿಗೆ ಯುದ್ಧ ಸನ್ನದ್ಧತೆಯ ತರಬೇತಿ ನೀಡುವ ನಿಟ್ಟಿನಲ್ಲಿ ಮೇ 7ರ ಬುಧವಾರ ದೇಶದ 300ರಷ್ಟು ಪ್ರದೇಶಗಳಲ್ಲಿ ನಾಗರಿಕ ಸುರಕ್ಷತಾ ಕವಾಯತು ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ದೇಶವ್ಯಾಪಿ ಮಾಕ್ ಡ್ರಿಲ್ಗಾಗಿ ಸಜ್ಜಾಗುತ್ತಿದ್ದವು. ಎಲ್ಲೆಡೆ ಈ ಮಾಕ್ ಡ್ರಿಲ್ ಹೇಗೆ ನಡೆಯುತ್ತದೆ, ಎಲ್ಲಿ ನಡೆಯುತ್ತದೆ, ನಾವೇನು ಮಾಡಬೇಕು ಎಂಬ ಪ್ರಶ್ನೆಗಳ ಬಗ್ಗೆಯೇ ಚರ್ಚೆ ನಡೆಯುತ್ತಿದ್ದವು. ಇಡೀ ದೇಶದ ಗಮನ ಈ ಸುರಕ್ಷತಾ ಕವಾಯತಿನತ್ತ ತಿರುಗಿತ್ತು. ಅತ್ತ ಪಾಕಿಸ್ತಾನದ ಮಾಧ್ಯಮಗಳಲ್ಲೂ ಭಾರತ ಕವಾಯತಿಗೆ ಸಜ್ಜಾಗುತ್ತಿವೆ ಎಂಬ ಸುದ್ದಿಗಳು ಹಬ್ಬಿದ್ದವು. ಭಾರತ ಈಗಷ್ಟೇ ತನ್ನ ನಾಗರಿಕರಿಗೆ ತರಬೇತಿ ಆರಂಭಿಸುತ್ತಿದ್ದು, ಸದ್ಯಕ್ಕಂತೂ ದಾಳಿ ಮಾಡುವ ಸಾಧ್ಯತೆಯಿಲ್ಲ ಎಂದೇ ಪಾಕಿಸ್ತಾನವೂ ಭಾವಿಸಿತ್ತು. ಇದರ ಜೊತೆಗೆ ಮಂಗಳವಾರ ಸಂಜೆಯಾಗುತ್ತಲೇ ಭಾರತ ಸರ್ಕಾರದ ಕಡೆಯಿಂದ ಮತ್ತೊಂದು ಹೊಸ ಸುದ್ದಿಯನ್ನು ಹರಿಬಿಡಲಾಯಿತು. ಬುಧವಾರದಿಂದ 2 ದಿನಗಳ ಕಾಲ ಪಾಕ್ ಗಡಿಯಲ್ಲಿ ಭಾರತೀಯ ವಾಯುಪಡೆಯು ಸಮರಾಭ್ಯಾಸ ನಡೆಸಲಿದೆ ಎಂಬ ವರದಿಗಳು ಹೊರಬಿದ್ದವು. ವಾಯು ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಈ ಸಮರಾಭ್ಯಾಸದ ಪೂರ್ವಸಿದ್ಧತೆಗಳು ಎಂಬಂತೆ ಬಿಂಬಿಸಲಾಯಿತು. ಆದರೆ ಇದೆಲ್ಲವೂ ಭಾರತದ ಅದ್ಭುತ ಸ್ಟ್ರ್ಯಾಟಜಿ ಎಂಬುದು ಪಾಕ್ಗೆ ಹೊಳೆಯಲೇ ಇಲ್ಲ.
ಇತ್ತ ಭಾರತ, ಅತ್ತ ಪಾಕಿಸ್ತಾನ ನಿರಾಳವಾಗಿ ನಿದ್ರೆಗೆ ಜಾರುತ್ತಿದ್ದಂತೆಯೇ, ಇದೇ ಸರಿಯಾದ ಸಮಯ ಅಂದುಕೊಂಡು ಪಾಕ್ ಮೇಲೆ ಭಾರತೀಯ ಸೇನೆ ಆಕ್ರಮಣ ಮಾಡಿಯೇ ಬಿಟ್ಟಿತು. ಮಂಗಳವಾರ ತಡರಾತ್ರಿ 2 ಗಂಟೆಯ ವೇಳೆಗೆ ಏಕಾಏಕಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಹಠಾತ್ ದಾಳಿ ಆರಂಭಿಸಿತು. ಒಂದಲ್ಲ ಎರಡಲ್ಲ 9 ಕಡೆ ಕ್ಷಿಪಣಿಗಳು ಅಪ್ಪಳಿಸಿದವು. ಎಲ್ಲಿ, ಏನಾಗುತ್ತಿದೆ ಎಂದು ಯೋಚಿಸಲೂ ಪುರುಸೊತ್ತು ನೀಡದಂತೆ ಭಾರತದ ಕ್ಷಿಪಣಿಗಳು ಪಾಕ್ ನೆಲಕ್ಕೆ ಅಪ್ಪಳಿಸಿ, ಉಗ್ರರ ನೆಲೆಗಳನ್ನು ಉಡೀಸ್ ಮಾಡಿದ್ದವು. ಕನಸು ಮನಸಿನಲ್ಲೂ ಊಹಿಸಿರದ ಇಂಥದ್ದೊಂದು ದಾಳಿಯು ಪಾಕ್ ಅನ್ನು ಥರಗುಟ್ಟುವಂತೆ ಮಾಡಿತು.
ಮೋದಿ ಮಾಸ್ಟರ್ಸ್ಟ್ರೋಕ್:
ಈ ಹಿಂದೆ 2019ರಲ್ಲಿ ಪುಲ್ವಾಮಾ ದಾಳಿಯಾದ ಸಂದರ್ಭದಲ್ಲೂ ಭಾರತೀಯ ಯೋಧರು ಅನಿರೀಕ್ಷಿತವೆಂಬಂತೆ ಗಡಿ ರೇಖೆ ದಾಟಿ ಪಾಕ್ ನೆಲದೊಳಕ್ಕೆ ನುಗ್ಗಿ ಉಗ್ರರನ್ನು ಬೇಟೆಯಾಡಿದ್ದರು. ಪಾಕಿಸ್ತಾನದ ಬಾಲಕೋಟ್ನಲ್ಲಿ ಭಾರೀ ಸಂಖ್ಯೆಯ ಉಗ್ರರನ್ನು ಹೊಡೆದುರುಳಿಸಿದ್ದರು. ಅದೇ ರೀತಿ, ಪ್ಲ್ಯಾನ್ ಮಾಡಿ ಈ ಬಾರಿಯೂ ಪಾಕಿಸ್ತಾನದ ಹುಟ್ಟಡಗಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಭಾರತ ಮತ್ತು ಪಾಕಿಸ್ತಾನದ ಗಮನ ಬೇರೆಡೆಗೆ ಹರಿಸಿ, ಅದೇ ಸಮಯ ನೋಡಿಕೊಂಡು ಆಕ್ರಮಣ ಮಾಡಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಮಾಸ್ಟರ್ಸ್ಟ್ರೋಕ್ ಎಂದೇ ಹೇಳಬಹುದು.
ಮಾಕ್ ಡ್ರಿಲ್ ಎನ್ನುವುದೇ ಒಂದು ಕಾರ್ಯತಂತ್ರ
ಮೇ 7, 2025ರಂದು ದೇಶಾದ್ಯಂತ ಮಾಕ್ ಡ್ರಿಲ್ (ಅಣಕು ಕವಾಯತು) ನಡೆಸಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿತ್ತು. ಈ ಕವಾಯತಿನ ಉದ್ದೇಶವು ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವುದಾಗಿತ್ತು. ವೈಮಾನಿಕ ದಾಳಿಗಳು ಸೇರಿದಂತೆ ಪ್ರತಿಕೂಲ ಸಂದರ್ಭಗಳಲ್ಲಿ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ತರಬೇತಿ ನೀಡುವುದು ಇದರ ಉದ್ದೇಶವಾಗಿತ್ತು. ಈ ಕವಾಯತಿನ ಘೋಷಣೆಯು ಜಗತ್ತಿನ ಮತ್ತು ಪಾಕಿಸ್ತಾನದ ಗಮನವನ್ನು ಭಾರತದ ಆಂತರಿಕ ಸಿದ್ಧತೆಯತ್ತ ಸೆಳೆಯಿತು. ಭಾರತ ಈಗಷ್ಟೇ ಸಿದ್ಧತೆ ಆರಂಭಿಸಿರುವ ಕಾರಣ ಸದ್ಯಕ್ಕೆ ದಾಳಿ ಅಥವಾ ಯುದ್ಧ ನಡೆಯುವ ಸಾಧ್ಯತೆ ಇಲ್ಲವೇ ಇಲ್ಲ ಎಂಬಂತೆ ಇಡೀ ಜಗತ್ತನ್ನು ನಂಬಿಸಲಾಯಿತು. ಪಾಕಿಸ್ತಾನವೂ ಇದನ್ನೇ ನಂಬಿ ನೆಮ್ಮದಿಯಿಂದ ನಿದ್ರಾದೇವಿಗೆ ಶರಣಾಯಿತು. ವಾಸ್ತವದಲ್ಲಿ ಇದು ಭಾರತೀಯ ಸೇನೆ ಮತ್ತು ಭಾರತ ಸರ್ಕಾರದ ಕಾರ್ಯತಂತ್ರವಾಗಿತ್ತು ಎನ್ನುವುದು ಅರ್ಥವಾಗುವಷ್ಟರಲ್ಲಿ ಪಾಪಿ ಪಾಕ್ನ ಉಗ್ರ ನೆಲೆಗಳು ಧ್ವಂಸಗೊಂಡಾಗಿತ್ತು.
ಆಪರೇಷನ್ ಸಿಂಧೂರ್ ಎಂಬ ತಡರಾತ್ರಿ ಕಾರ್ಯಾಚರಣೆ
ಒಟ್ಟಿನಲ್ಲಿ ಮಾಕ್ ಡ್ರಿಲ್ನ ಘೋಷಣೆಯೇ ಒಂದು ತಂತ್ರಗಾರಿಕೆಯ ಕ್ರಮವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಜಾಗತಿಕ ಸಮುದಾಯದ ಗಮನವನ್ನು ಭಾರತದ ಆಂತರಿಕ ರಕ್ಷಣಾ ಸಿದ್ಧತೆಯತ್ತ ತಿರುಗಿಸಿ, ರಾತ್ರಿಯ ದಾಳಿಗೆ ರಹಸ್ಯವಾಗಿ ಯೋಜನೆ ಸಿದ್ಧಪಡಿಸಲಾಗಿತ್ತು. ಮಂಗಳವಾರ ತಡರಾತ್ರಿ 2 ಗಂಟೆಯ ಸಮಯಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಮೇಲೆ ದಾಳಿ ನಡೆಸಿತು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ತಮ್ಮ ಸಿಂಧೂರವನ್ನು(ಪತಿಯನ್ನು) ಕಳೆದುಕೊಂಡ ಹೆಣ್ಣುಮಕ್ಕಳ ಗೌರವಾರ್ಥ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಕೋಡ್ ನೇಮ್ ಇಡಲಾಗಿತ್ತು. ಈ ಮೂಲಕ ಅಮಾಯಕ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತೀಕಾರ ತೀರಿಸಿಕೊಂಡಿತು.