ನವದೆಹಲಿ: ಪಾಕಿಸ್ತಾನದ ಪ್ರತಿಯೊಂದು ದಾಳಿ ಯತ್ನಕ್ಕೂ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡುತ್ತಿರುವ ಭಾರತದ ಪರಾಕ್ರಮವು(Operation Sindoor) ಪಾಕಿಗಳನ್ನು ಗಡ ಗಡ ನಡುಗಿಸಿದೆ. ಭಾರತದ ಪ್ರತಿದಾಳಿಗೆ ಬೆಚ್ಚಿ ಬಿದ್ದಿರುವ ಪಾಕ್ ಸರ್ಕಾರ ಈಗ ಮಂಡಿಯೂರಲು ಸಜ್ಜಾಗುತ್ತಿದೆ. ಭಾರತದ ದಾಳಿಯಿಂದ ತಮ್ಮೆಲ್ಲ ಸೇನಾ ಮೂಲಸೌಕರ್ಯಗಳು ಮಣ್ಣುಪಾಲಾಗುತ್ತಿರುವುದರಿಂದ ಅಂಜಿರುವ ಪಾಕ್, ಈಗ ಮಾತುಕತೆಗೆ ಸಿದ್ಧವಾಗಿರುವುದಾಗಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಾಬಾದ್ನ ಪರಿಸ್ಥಿತಿಯು ತೀರಾ ಹದಗೆಟ್ಟಿದ್ದು, ಎರಡೂ ಕಡೆಯವರು ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಪಾಕ್ ಸರ್ಕಾರ ಬಂದಿದೆ ಎನ್ನಲಾಗಿದೆ. ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮಾತುಕತೆಗೆ ಅನುಕೂಲವಾಗುವಂತೆ ಸಂವಹನಾ ಚಾನೆಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಎರಡೂ ದೇಶಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಪಾಕಿಸ್ತಾನವು ತನ್ನ ನಿಲುವನ್ನು ಸಡಿಲಿಸಿಕೊಂಡು ರಾಜತಾಂತ್ರಿಕ ಹಾದಿಯ ಮೂಲಕ ಯುದ್ಧೋನ್ಮಾದಕ್ಕೆ ಅಂತ್ಯ ಹಾಡಲು ಬಯಸಿದೆ ಎಂದು ಹೇಳಲಾಗಿದೆ.
ಈಗಾಗಲೇ ಪಾಕಿಸ್ತಾನದ ಅಟ್ಟಹಾಸಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ನಗರಗಳ ಮೇಲೆ ಪಾಕ್ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತವು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪಾಕಿಸ್ತಾನದ ಸೇನಾ ಮೂಲಸೌಕರ್ಯಕ್ಕೆ ಗಣನೀಯ ಪ್ರಮಾಣದಲ್ಲಿ ಹಾನಿ ಉಂಟುಮಾಡಿದೆ.
ಪಾಕ್ ದಾಳಿಗೆ ಭಾರತ ನೀಡುತ್ತಿರುವ ಎದಿರೇಟು 2-3 ಪಟ್ಟು ಬಲಿಷ್ಠವಾಗಿದೆ. ರಜೌರಿಯಲ್ಲಿರುವ ಆಡಳಿತಾತ್ಮಕ ಸೇವೆಗಳ ಅಧಿಕಾರಿಯ ಸಾವನ್ನು ಹೊರತುಪಡಿಸಿದರೆ ಭಾರತಕ್ಕೆ ಪಾಕ್ ದಾಳಿಯಿಂದ ದೊಡ್ಡ ಮಟ್ಟದ ನಷ್ಟವೇನೂ ಆಗಿಲ್ಲ. ಆದರೆ, ಪಾಕಿಸ್ತಾನ ಮಾತ್ರ ಭಾರತದ ಪ್ರತಿದಾಳಿಯಿಂದ ವಿಲವಿಲನೆ ಒದ್ದಾಡುತ್ತಿದೆ.
ಮೆದುವಾದ ಪಾಕ್ ವಿದೇಶಾಂಗ ಸಚಿವ:
ಇದೇ ವೇಳೆ, ಭಾರತದ ವಿರುದ್ಧ ಅಣ್ವಸ್ತ್ರದ ಮಾತುಗಳನ್ನಾಡುತ್ತಿದ್ದ ಪಾಕಿಸ್ತಾನ ವಿದೇಶಾಂಗ ಖಾತೆ ಸಚಿವ ಇಶಾಕ್ ದಾರ್ ಕೂಡ ಈಗ ಮೆದುವಾಗಿದ್ದಾರೆ. “ಭಾರತ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರೆ, ನಾವೂ ಸ್ಥಗಿತಗೊಳಿಸಲು ಸಿದ್ಧ” ಎಂದು ಶನಿವಾರ ಹೇಳಿದ್ದಾರೆ.