ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತಳಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಕುರಿತು ಹಲವು ಆಘಾತಕಾರಿ ಮಾಹಿತಿಗಳು ಬಹಿರಂಗವಾಗತೊಡಗಿವೆ. ಈಕೆಯ ಪ್ರಕರಣವನ್ನು ಸರ್ಕಾರ ಎನ್ಐಎಗೆ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜ್ಯೋತಿ ಮಲ್ಹೋತ್ರಾ ಅವರಿಗೆ ಪಾಕಿಸ್ತಾನದ ಹಲವು ಏಜೆಂಟ್ ಗಳೊಂದಿಗೆ ಸಂಪರ್ಕವಿತ್ತು. ಆದರೆ, ಅವರ ಸಂಪರ್ಕವನ್ನು ರಹಸ್ಯವಾಗಿಡುವ ಉದ್ದೇಶದಿಂದ ಆಕೆ ತನ್ನ ಮೊಬೈಲ್ನಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಅವರ ದೂರವಾಣಿ ಸಂಖ್ಯೆಗಳನ್ನು ಸೇವ್ ಮಾಡಿಕೊಂಡಿದ್ದಳು. ಈ ಕುರಿತು ಹೊಸ ಡಿಜಿಟಲ್ ಸಾಕ್ಷ್ಯಗಳು ದೊರೆಯುತ್ತಿವೆ ಎಂದು ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆಕೆಯ ಸಾಮಾಜಿಕ ಜಾಲತಾಣ ವಿಡಿಯೋಗಳು ಕೇವಲ ಒಂದು ಸುರಕ್ಷಾ ಕವಚವಾಗಿತ್ತು. ಆಕೆ ಹಲವು ಬಗೆಯ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು, ಪಾಕಿಸ್ತಾನಿ ಏಜೆಂಟ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ.
ಆಕೆ ಸ್ನ್ಯಾಪ್ ಚಾಟ್, ಟೆಲಿಗ್ರಾಂ, ವಾಟ್ಸ್ಆಪ್ ಮೂಲಕ ಸಂಭಾಷಣೆ ನಡೆಸುತ್ತಿದ್ದಳು ಎನ್ನಲಾಗಿದೆ. ಇದೇ ವೇಳೆ, ಜ್ಯೋತಿಗೆ ಸಂಬಂಧಿಸಿದ ಪ್ರಕರಣದ ತನಿಖೆಗೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ನೆರವಾಗುತ್ತಿದೆ ಎಂದು ಹರ್ಯಾಣದ ಹಿಸಾರ್ ಎಸ್ಪಿ ಶಶಾಂಕ್ ಕುಮಾರ್ ತಿಳಿಸಿದ್ದಾರೆ.
ಎನ್ಐಎ ಕೂಡ ಜ್ಯೋತಿ ಅವರನ್ನು ಕೆಲವು ವಿಚಾರಗಳ ಕುರಿತು ಪ್ರಶ್ನೆ ಮಾಡಿದೆ. ಇತರೆ ತನಿಖಾ ಸಂಸ್ಥೆಗಳೂ ತನಿಖೆ ನಡೆಸುತ್ತಿವೆ ಎಂದಿದ್ದಾರೆ.
ಹರ್ಯಾಣ ಎಸ್ಜಿಎಂಸಿ ಸಿಬ್ಬಂದಿ ಮೇಲೂ ಕಣ್ಣು
ಜ್ಯೋತಿ ಅವರಿಗೆ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿ ಡ್ಯಾನಿಶ್ ಅವರನ್ನು ಮೊದಲು ಪರಿಚಯಿಸಿದ್ದು ಹರ್ಯಾಣ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಎಸ್ಜಿಎಂಸಿ) ಉದ್ಯೋಗಿ ಹರ್ಕೀರತ್ ಸಿಂಗ್ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ. ಜ್ಯೋತಿಗೆ ಎರಡು ಬಾರಿ ಪಾಕಿಸ್ತಾನಿ ವೀಸಾ ದೊರಕಿಸಿಕೊಡಲು ಮತ್ತು ಪಾಕಿಸ್ತಾನಕ್ಕೆ ತೆರಳುವ ಸಿಖ್ ಜಾಥಾದೊಂದಿಗೆ ತೆರಳಲು ಹರ್ಕೀರತ್ ಸಿಂಗ್ ನೆರವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭಾರತೀಯ ಸಿಖ್ಖರು ಯಾತ್ರೆಯ ಉದ್ದೇಶದಿಂದ ನನ್ಕಾನಾ ಸಾಹಿಬ್ ನಂಥ ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ. ಅವರೊಂದಿಗೆ ಜ್ಯೋತಿ ಮಲ್ಹೋತ್ರಾರನ್ನೂ ಹರ್ಕೀರತ್ ಸಿಂಗ್ ಅವರು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೂ ಪೊಲೀಸರು ನಿಗಾ ವಹಿಸಿದ್ದು, ಅವರ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜ್ಯೋತಿ ಅವರು 2023ರಿಂದಲೂ ಪಾಕಿಸ್ತಾನದ ಹಲವರೊಂದಿಗೆ ಸಂಪರ್ಕದಲ್ಲಿದ್ದಳು. ಎಹ್ಸಾನ್-ಉಲ್-ರೆಹಮಾನ್ ಅಲಿಯಾಸ್ ಡ್ಯಾನಿಷ್ ಅವರು ಜ್ಯೋತಿಯ ಮೂಲ ಸಂಪರ್ಕ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ಅಲ್ಲದೇ, ಜ್ಯೋತಿ ಅವರು ಪಾಕಿಸ್ತಾನಿ ಏಜೆಂಟ್ ಶಕೀರ್ ಹೆಸರನ್ನು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ತಮ್ಮ ಮೊಬೈಲ್ ನಲ್ಲಿ ಜಾಟ್ ರಾಂಧವ ಎಂದು ಸೇವ್ ಮಾಡಿಟ್ಟುಕೊಂಡಿದ್ದರು. ಪಾಕ್ನ ಅಲಿ ಅಹ್ವಾನ್ ಮತ್ತು ರಾಣಾ ಶಹಬಾಜ್ ಎಂಬವರ ಜತೆಗೂ ಆಕೆಗೆ ಸಂಪರ್ಕವಿತ್ತು. ಆಕೆ ಪಾಕಿಸ್ತಾನಕ್ಕೆ ಹೋದಾಗಲೆಲ್ಲ ಆಕೆಗೆ ಅಹ್ವಾನ್ ಭದ್ರತೆ ನೀಡುತ್ತಿದ್ದ ಎನ್ನುವುದೂ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.