ರಾಜ್ಯದಲ್ಲಿ ಸಂಭವಿಸಿರುವ ಘೋರ ದುರಂತಕ್ಕೆ ಅಮಿತ್ ಶಾ ಎಂಟ್ರಿ ಕೊಡುವ ಸಾಧ್ಯತೆ ಇದೆ. ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಮಗನ ಮದುವೆ ಸಮಾರಂಭ ನಡೆಯಲಿದೆ. ಭಾನುವಾರ ಮದುವೆಯ ಮುಹೂರ್ತ, ನಾಳೆ ಸಂಜೆ ಆರತಕ್ಷತೆ ಕಾರ್ಯಕ್ರಮ ಇದೆ. ಹೀಗಾಗಿ ನಾಳೆ ಸಂಜೆಯ ಆರತಕ್ಷತೆ ಅಥವಾ ನಾಡಿದ್ದು ಬೆಳಿಗ್ಗೆ ಮದುವೆಯ ಮುಹೂರ್ತಕ್ಕೆ ಅಮಿತ್ ಶಾ ಆಗಮಿಸುವ ಸಾಧ್ಯತೆ ಇದೆ.
ಈ ಮದುವೆ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮದುವೆಗೆ ಅಮಿತ್ ಶಾ ಆಗಮಿಸುವ ಸಂದರ್ಭದಲ್ಲಿ ಭೀಕರ ದುರಂತ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಕೂಡ ಇದೆ. ರಾಜ್ಯ ಬಿಜೆಪಿ ನಾಯಕರ ಜೊತೆಗೆ ಸ್ಥಳ ಪರಿಶೀಲನೆಯನ್ನು ಅಮಿತ್ ಶಾ ಮಾಡುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಸಂಭ್ರಮಾಚರಣೆಯ ಕಾರ್ಯಕ್ರಮದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿತ್ತು. ಘಟನೆ ನಡೆದಾಗಿನಿಂದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಳ ಪರಿಶೀಲನೆಯನ್ನು ಅಮಿತ್ ಶಾ ನಡೆಸುವ ಸಾಧ್ಯತೆ ಇದೆ ಎಂಬುವುದು “ಕರ್ನಾಟಕ ನ್ಯೂಸ್ ಬೀಟ್” ಗೆ ಬಿಜೆಪಿ ನಾಯಕರ ಆಪ್ತ ವಲಯ ಮಾಹಿತಿ ನೀಡಿದೆ.