ನವದೆಹಲಿ | ಇರಾನ್ ನಾಯಕ ಖಮೇನಿ ಹತ್ಯೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿಲ್ಲ ಅಂತಾ ಕೈ ಅಧಿನಾಯಕಿ ಸೋನಿಯಾ ಹೇಳಿದ್ದರು. ಯುದ್ಧದ ಬಗ್ಗೆ ಭಾರತದ ನಿಲುವನ್ನು ಈಗ ಕಾಂಗ್ರೆಸ್ ಪ್ರಶ್ನಿಸುತ್ತಿದೆ. ವಿರೋಧ ಪಕ್ಷದ ಪ್ರಶ್ನೆಗಳಿಗೆ ಇಂದು ಭಾರತ ತನ್ನ ಸ್ಪಷ್ಟನೆ ನೀಡಿದೆ.
ಇಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್, ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತದ ಸ್ಪಷ್ಟನೆ ತಿಳಿಸಿದ್ದಾರೆ. ಭಾರತ ಶಾಂತಿ, ಸಂವಾದ, ರಾಜತಾಂತ್ರಿಕತೆಯ ನಿಲುವನ್ನು ಪ್ರತಿಪಾದಿಸುತ್ತದೆ ಎಂದಿದ್ದಾರೆ. ಅಲ್ಲದೇ, ಮೂರು ಅಂಶಗಳನ್ನು ಕೂಡ ಹೇಳಿದ್ದಾರೆ.

ಹೌದು.. ರಾಜತಾಂತ್ರಿಕ ವಿಚಾರವಾಗಿ ನೋಡಿದರೂ ಭಾರತದ ಈ ನಿರ್ಧಾರ ಸರಿಯಾಗಿಯೇ ಇದೆ ಅನಿಸುತ್ತಿದೆ. ಏಕೆಂದರೆ ಭಾರತದ ಆರ್ಥಿಕ ಪ್ರಗತಿ ಮುಖ್ಯ. ಆ ನಿರ್ಧಾರದ ಹಿನ್ನೆಲೆಯಲ್ಲಿಯೇ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿರಬಹುದು. ಆ ಕುರಿತಾದ ಕೆಲವು ಅಂಶಗಳನ್ನು ಗಮನಿಸುವುದಾದರೆ, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಸುಮಾರು 1 ಕೋಟಿಯಷ್ಟು ಭಾರತೀಯರಿದ್ದಾರೆ. ಮಧ್ಯಪ್ರಾಚ್ಯದೊಂದಿಗೆ ಭಾರತದ ಆರ್ಥಿಕ ವ್ಯವಹಾರ ಉತ್ತಮವಾಗಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ ಹೇಳುತ್ತಿದ್ದಂತೆ ಕಂಬನಿ ಮಿಡಿಯಲಿಲ್ಲ ಎನ್ನಬಹುದು. ಹೀಗಾಗಿ ರಾಜತಾಂತ್ರಿಕ ಹೆಜ್ಜೆಯನ್ನ ತುಂಬಾ ಜಾಗರೂಕತೆಯಿಂದ ಇಡುತ್ತಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗಲ್ಫ್ ರಾಷ್ಟ್ರಗಳೇ ಇರಾನ್ ವಿರುದ್ಧ ತಿರುಗಿ ಬಿದ್ದಾಗ ಭಾರತದ ಸಪೋರ್ಟ್ ಅವಶ್ಯವೂ ಅನಿಸುವುದಿಲ್ಲ.
ಭಾರತವು ಗಲ್ಫ್ ರಾಷ್ಟ್ರಗಳೊಂದಿಗೆ ಸಾಕಷ್ಟು ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತ ಜಿಸಿಸಿ ರಾಷ್ಟ್ರಗಳ ಜೊತೆ ವಾರ್ಷಿಕವಾಗಿ 180 ಬಿಲಿಯನ್ ಡಾಲರ್ ನಷ್ಟು ಆರ್ಥಿಕ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಮತ್ತು ಚೀನಾದ ನಂತರ ಯುಎಇ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಸೌದಿ ಅರೇಬಿಯಾ ಭಾರತದ 4ನೇ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಸೌದಿ ಅರೇಬಿಯಾ ಭಾರತದ ಅತೀ ದೊಡ್ಡ 4ನೇ ವ್ಯಾಪಾರ ಪಾಲುದಾರ ರಾಷ್ಟ್ರ. ಅಲ್ಲದೇ, ಸೌದಿ ಅರೇಬಿಯಾ ಭಾರತದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ಶೇ. 40ರಷ್ಟು ಕಚ್ಚಾ ತೈಲವನ್ನು ಗಲ್ಭ್ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತದೆ.
ಭಾರತದ ಒಟ್ಟು ಎಲ್ ಎನ್ ಜಿ ಆಮದಿನಲ್ಲಿ ಕತಾರ್ ನದ್ದು ಶೇ. 40ಕ್ಕಿಂತ ಹೆಚ್ಚು ಪಾಲಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಶೇ.28ರಿಂದ 30ರಷ್ಟು ಆರ್ಥಿಕತೆ ಕೇವಲ ಗಲ್ಫ್ ರಾಷ್ಟ್ರಗಳಿಂದ ಅಂದ್ರೆ ವಾರ್ಷಿಕವಾಗಿ 35 ರಿಂದ 40 ಬಿಲಿಯನ್ ಡಾಲರ್ ನಷ್ಟು ಹರಿದು ಬರುತ್ತದೆ. ಇದರೊಂದಿಗೆ ರಿಟೇಲ್ ಸೆಕ್ಟರ್ ನಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಭರವಸೆಯನ್ನೂ ಸೌದಿ ನೀಡಿದೆ. ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಯುಎಇ 7ನೇ ಸ್ಥಾನ ಪಡೆದಿದೆ.
ಸುಮಾರು 1 ಕೋಟಿ ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ. ಯುಎಇನಲ್ಲಿ 35 ಲಕ್ಷ, ಸೌದಿ ಅರೇಬಿಯಾದಲ್ಲಿ 25 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ. ಪ್ರಧಾನಿ ಮೋದಿಗೆ ಗಲ್ಫ್ ರಾಷ್ಟ್ರಗಳು ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. ಇಸ್ರೇಲ್ ಭಾರತದಂತೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ರಾಷ್ಟ್ರವಾಗಿದೆ. ಭಾರತಕ್ಕೆ ಇಸ್ರೇಲ್ ಹಳೆಯ ಸ್ನೇಹಿತ. 1971ರ ಬಾಂಗ್ಲಾ ವಿಮೋಚನ ಯುದ್ಧದಲ್ಲೂ ಇಸ್ರೇಲ್ ಭಾರತಕ್ಕೆ ರಹಸ್ಯ ನಿರ್ಣಾಯಕ ಮಿಲಿಟರಿ ಬೆಂಬಲ ನೀಡಿತ್ತು. ಹೀಗಾಗಿ ಭಾರತ ಎಂದಿಗೂ ಇಸ್ರೇಲ್ ಬಿಟ್ಟು ಕೊಡುವುದಿಲ್ಲ.
ಆದರೆ, ಇರಾನ್ ನಿಂದ ಭಾರತಕ್ಕೆ ಲಾಭ ಅಷ್ಟಕಷ್ಟೇ. ಇರಾನ್ ಭಾರತಕ್ಕೆ ಹಿಂದೆ ತೈಲ ಪೂರೈಕೆಯ ಪ್ರಮುಖ ರಾಷ್ಟ್ರವಾಗಿತ್ತು. 2018ರಲ್ಲಿ 17 ಬಿಲಿಯನ್ ಡಾಲರ್ ಇದ್ದ ವ್ಯಾಪಾರ, 2025ರಲ್ಲಿ 2 ಬಿಲಿಯನ್ ಗಿಂತಲೂ ಕೆಳಗೆ ಕುಸಿದಿತ್ತು. ಹೀಗಾಗಿ ಇರಾನ್ ನಿಂದ ಭಾರತಕ್ಕೆ ಲಾಭವೇನು ಇಲ್ಲ. ಇನ್ನೊಂದೆಡೆ ಅಮೆರಿಕದೊಂದಿಗೆ ಭಾರತದ ಸಂಬಂಧ ಸುಧಾರಿಸುತ್ತಿದೆ. ಕೆಲವು ಹೇಳಿಕೆಗಳಿಂದ ಅದು ಹಳಿಸುವ ಹಂತದಲ್ಲಿತ್ತು. ಆದರೆ, ಪ್ರಧಾನಿ ಸಂಯಮದಿಂದಾಗಿ ಅದು ಹಾಳಾಗಲಿಲ್ಲ. ಹೀಗಾಗಿ ಮೋದಿ ಸಂಯಮ ಕೆಲಸ ಮಾಡುತ್ತಿದೆ.
ಆದರೆ, ವಿರೋಧ ಪಕ್ಷದ ನಾಯಕರು ದೇಶದ ಈ ನಿರ್ಧಾರವನ್ನು ಗುಲಾಮಗಿರಿ ಅಂತಿದ್ದಾರೆ. ಸ್ಪೇನ್ ಧೈರ್ಯವಾಗಿ ಅಮೆರಿಕ ವಿರುದ್ಧ ಮಾತನಾಡಿತು ಅಂತಾರೆ. ಆದರೆ, ಸ್ಪೇನ್ ಗೆ ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಸ್ಪೇನ್ ಜೊತೆ ಇವೆ. ಆದರೆ ಭಾರತ ಹಾಗಲ್ಲ. ಭಾರತಕ್ಕೆ ಭಾರತವೇ ರಕ್ಷಣೆ. ಯಾವುದೇ ರಂಗದಲ್ಲಿ ಭಾರತದ್ದು ಏಕಾಂಗಿ ಹೋರಾಟ. ಹೀಗಾಗಿಯೇ ಭಾರತ ವಿವೇಚನೆಯಿಂದ ಹೆಜ್ಜೆ ಇಡಬೇಕಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಖಮೇನಿ ಯಾವತ್ತೂ ಭಾರತದ ಪರ ಮಾತನಾಡಿದವರಲ್ಲ. ಕಾಶ್ಮೀರ ವಿಚಾರ, ಆರ್ಟಿಕಲ್ 370 ರದ್ದಾದಾಗ, ದೆಹಲಿ ಗಲಭೆ ಸೇರಿದಂತೆ ಹಲವು ವಿಷಯಗಳಲ್ಲಿ ಪಾಕ್ ಬೆಂಬಲಿಸಿ ಭಾರತವನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಈಗ ಹೇಳಿ ಭಾರತದ ನಿರ್ಧಾರ ಸರಿಯಾ? ಅಥವಾ ತಪ್ಪಾ?
ಇದನ್ನೂ ಓದಿ : ಚೆನ್ನೈನ US ಕಾನ್ಸಲ್ ಜನರಲ್ ಆಗಿ ಮರಿಯಾನಾ ಎಲ್. ನೈಶುಲರ್ ಅಧಿಕಾರ ಸ್ವೀಕಾರ!



















