ಬೆಳ್ತಂಗಡಿ : ಧರ್ಮಸ್ಥಳ ಅರಣ್ಯದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.29ಎಂದು ಸಾಕ್ಷಿ ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಮೊದಲ ಸ್ಥಳ ಉತ್ಖನನ ಮಾಡಿದ ಸಂದರ್ಭದಲ್ಲಿ ಯಾವುದೆ ಕಳೇಬರ ದೊರೆತಿಲ್ಲ ಎಂದು ತನಿಖಾಧಿಕಾರಿ ಅನುಚೇತ್ ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿ ದೂರುದಾರ ಸ್ಥಳವನ್ನು ಕಾರ್ಮಿಕ ಸಹಾಯದಿಂದ ತೆರವು ಕಾರ್ಯ ಮುಂಜಾನೆಯಿಂದ ಆರಂಭಗೊಂಡಿದ್ದು, ಸತತ 3 ತಾಸು ಅಗೆಯುವ ಕೆಲಸ ನಡೆದಿದೆ. ಸ್ಥಳದಲ್ಲಿ ಯಾವುದೇ ಕುರುಹು ದೊರೆತಿಲ್ಲ.
ಸುಮಾರು ನಾಲ್ಕು ಅಡಿ ಆಳ, ಆರು ಅಡಿ ಉದ್ದ ಆಳ ಕೊರೆದಿದ್ದು, ಆದರೆ ಕಳೇಬರ ಸಿಗದೆ ಇರುವ ಕಾರಣ ಮತ್ತಷ್ಟು ಅಗೆಯುವ ಕಾರ್ಯ ಮುಂದುವರಿದೆ. ಸಾಕ್ಷಿ ದೂರುದಾರನೇ ಹಿಟಾಚಿ ಮೂಲಕ ತೆಗೆಯುವಂತೆ ಮನವಿ ಮಾಡಿಕೊಂಡಿದ್ದನಂತೆ. ಆತನ ಮನವಿಯ ಆಧಾರದ ಮೇಲೆ ಹಿಟಾಚಿ ಕರೆಸಿದ್ದು, ಈಗ ಕಾರ್ಯಾಚರಣೆ ಮುಂದುವರಿದಿದೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ಡಾ. ಜಗದೀಶ್ ರಾವ್ ಮತ್ತು ಡಾ. ರಶ್ಮಿ ತಂಡ, ಡಿಐಜಿ ಅನುಚೇತ್, ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ದಯಾಮ, ಪುತ್ತೂರು ವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸಗ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸಹಿತ ಕಂದಾಯ, ಅರಣ್ಯ, ಎಫ್.ಎಸ್.ಎಲ್ ನ ಸೋಕೋ ವಿಭಾಗ, ಎ.ಎನ್.ಎಫ್ , ಆಂತರಿಕ ಭದ್ರತಾ ದಳ, ಪೊಲೀಸ್ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ಸಾಗಿದೆ. ನೇತ್ರಾವತಿ ನದಿ ತೀರ ಆಗಿರುವುದರಿಂದ ನೀರಿನ ಒರತೆ ಹೆಚ್ಚಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎನ್ನಲಾಗುತ್ತಿದೆ.



















