ಬೆಂಗಳೂರು: ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತಕ್ಕೆ (Chinnaswamy Stadium Stampede Case) ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಫ್ ಐರ್ ಆರ್ ನಲ್ಲಿ ಸನ್ಮಾನಕ್ಕೆ ಮೊದಲೇ ಅನುಮತಿ ಕೇಳಿರುವುದು ಉಲ್ಲೇಖವಾಗಿದೆ. ಆರ್ಸಿಬಿ ಗೆದ್ದರೆ ಜೂನ್ 4 ರಂದು ಸನ್ಮಾನ ಮಾಡಬೇಕು. ಅದಕ್ಕೆ ಅನುಮತಿ ನೀಡಬೇಕು ಎಂದು ಕೆಎಸ್ಸಿಎ (KSCA) ಜೂನ್ 3 ರಂದೇ ಕೇಳಿದೆ ಎಂಬ ವಿಚಾರ ಬಯಲಾಗಿದೆ. ವಿಧಾನಸೌಧದಲ್ಲಿ (Vidhansoudha) ಅನುಮತಿ ಕೊಡಿ ಕೆಎಸ್ಸಿಎ ಡಿಪಿಎಆರ್ಗೆ ಮನವಿ ಮಾಡಿತ್ತು. ಇದನ್ನು ಗಮನಿಸಿದರೆ ಎರಡು ಕಡೆ ಕಾರ್ಯಕ್ರಮ ಆಯೋಜಿಸಿರುವುದು ಮೊದಲೇ ನಿರ್ಧಾರವಾಗಿತ್ತು.
ಸಿಎಂ (CM Siddaramaiah) ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರು ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ. ಆರ್ ಸಿಬಿ ಗೆದ್ದಾಗ ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ. ಎರಡು ಮೂರು ಕಡೆ ಕಾರ್ಯಕ್ರಮ ಮಾಡಿದರೆ ಭದ್ರತೆ ನೀಡಲು ಕಷ್ಟವಾಗುತ್ತದೆ. ಒಂದು ಕಡೆ ಕಾರ್ಯಕ್ರಮ ಮಾಡಿ. ವಿಧಾನಸೌಧದ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು ಎರಡೂ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲೇ ಕಾರ್ಯಕ್ರಮ ಮಾಡಬೇಕು. ನಾನು ಚಿನ್ನಸ್ವಾಮಿಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಕ್ರೀಡಾಂಗಣದ ಬಳಿ ಪೊಲೀಸರು ಇರಲಿಲ್ಲ. ಇದು ಘಟನೆ ನಡೆಯಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಸಾವು- ನೋವಾದರೂ ಸಂಜೆ ಸಿಎಂ ಮೊಮ್ಮಗನ ಜತೆ ಜನಾರ್ದನ ಹೊಟೇಲಿಗೆ ಮಸಾಲೆ ದೋಸೆ ಸವಿಯಲು ಹೋಗಿದ್ದಾರೆ. ಇದು ಸಿಎಂ ಅವರ ಸತ್ಯಮೇವ ಜಯತೆ. ರಾಜ್ಯ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ? ನಿಮ್ಮ ನಿಮ್ಮ ತೀಟೆ ತೀರಿಸಿಕೊಳ್ಳಲು ಅಮಾಯಕರನ್ನು ಬಲಿಕೊಟ್ಟು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಕೋರ್ಟ್ನಿಂದಲೇ ನೇರವಾಗಿ ಹೆಚ್ಎಎಲ್ಗೆ ಹೋಗಿ ತಂಡಕ್ಕೆ ಸನ್ಮಾನ ಮಾಡುತ್ತಾರೆ.
ಇವರೇ ಆರ್ಸಿಬಿ ಧ್ವಜ ಹಿಡಿದುಕೊಂಡು ನಾನೇ ಗೆಲ್ಲಿಸಿ ಬಂದವರ ಹಾಗೆ ಪೋಸ್ಟ್ ಮಾಡಿದ್ದಾರೆ. ವಿಧಾನಸೌಧದಲ್ಲಿ ಶಾಲು ಮೈಸೂರು ಪೇಟಾ ಇಲ್ಲದೇ ಸನ್ಮಾನ ಮಾಡಿದ್ದಾರೆ. ಶಾಲುಗಳನ್ನು ಬೇಕಾಬಿಟ್ಟಿ ಹಾಕಿದ್ದಾರೆ. ಕಾರ್ಯಕ್ರಮ ನಡೆಯುವಾಗಲೇ ಅಭಿಮಾನಿಗಳು ಮೃತಪಟ್ಟ ಸುದ್ದಿ ಬಂದರೂ ಕಾರ್ಯಕ್ರಮ ಮುಂದೂಡಿಲ್ಲ. ಬಂದರೂ 6 ಗಂಟೆವರೆಗೆ ಕಾರ್ಯಕ್ರಮ ಮಾಡಿದ್ದಾರೆ. ನಂತರ ಕ್ರೀಡಾಂಗಣಕ್ಕೂ ಹೋಗಿ ಟ್ರೋಫಿಗೆ ಮುತ್ತು ಕೊಟ್ಟು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.