ಬಿಲಾಸ್ಪುರ (ಛತ್ತೀಸ್ಗಢ): ಕೌಟುಂಬಿಕ ಕಲಹವು ಛತ್ತೀಸ್ಗಢದ ಬಿಲಾಸ್ಪುರದಲ್ಲಿ ದಂಪತಿಯನ್ನೇ ಬಲಿಪಡೆದಿದೆ. ಪತಿಯು ಪತ್ನಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದ್ದು, ಸಾವಿಗೂ ಮುನ್ನ ಪತಿ ಲಿಪ್ಸ್ಟಿಕ್ನಿಂದ ಗೋಡೆಯ ಮೇಲೆ ಬರೆದ ಸಂದೇಶವೊಂದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಮೃತರನ್ನು ರಾಜು ತಾಂಬೆ (32) ಮತ್ತು ಅವರ ಪತ್ನಿ ನೇಹಾ ಅಲಿಯಾಸ್ ಶಿವಾನಿ ಎಂದು ಗುರುತಿಸಲಾಗಿದೆ. ಸೋಮವಾರ ದಂಪತಿ ಮನೆಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ತೆರೆದು ನೋಡಿದಾಗ ಭಯಾನಕ ದೃಶ್ಯ ಕಂಡುಬಂದಿದೆ. ಪತ್ನಿ ಶಿವಾನಿ ಅವರ ಮೃತದೇಹ ಮಂಚದ ಮೇಲೆ ಬಿದ್ದಿದ್ದರೆ, ಪತಿ ರಾಜು ತಾಂಬೆ ಫ್ಯಾನ್ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ .
ಲಿಪ್ಸ್ಟಿಕ್ ಸಂದೇಶದಲ್ಲಿ ಸ್ಫೋಟಕ ಮಾಹಿತಿ
ಘಟನಾ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಗೋಡೆಯ ಮೇಲೆ ಲಿಪ್ಸ್ಟಿಕ್ನಲ್ಲಿ ಬರೆದಿದ್ದ ಸಂದೇಶವೊಂದು ಸಿಕ್ಕಿದೆ. ಇದನ್ನು ರಾಜು ತಾಂಬೆ ಅವರೇ ಬರೆದಿರಬಹುದೆಂದು ಶಂಕಿಸಲಾಗಿದೆ. ಅದರಲ್ಲಿ, “ನನ್ನ ಪತ್ನಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಳು ಮತ್ತು ಉದ್ಯಾನವನದಲ್ಲಿ ಆತನನ್ನು ಭೇಟಿಯಾಗುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು,” ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, ಸಂದೇಶದಲ್ಲಿ ‘ರಾಜೇಶ್ ಬಿಸ್ವಾಸ್’ ಎಂಬ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನೂ ಬರೆಯಲಾಗಿದೆ. ಇದರ ಜೊತೆಗೆ ಪೊಲೀಸರಿಗೆ ಪ್ರತ್ಯೇಕವಾಗಿ ಒಂದು ಪುಟದ ಡೆತ್ ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿಯೂ ಈ ದುರಂತಕ್ಕೆ ರಾಜೇಶ್ ಬಿಸ್ವಾಸ್ ಅವರೇ ಕಾರಣ ಎಂದು ಆರೋಪಿಸಲಾಗಿದೆ .
ಲವ್ ಮ್ಯಾರೇಜ್ ಆಗಿದ್ದ ದಂಪತಿ
ಮೃತ ದಂಪತಿ ಲಯನ್ಸ್ ಕಂಪನಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಮತ್ತು ಇವರಿಗೆ ಮೂವರು ಮಕ್ಕಳಿದ್ದಾರೆ. ಘಟನೆ ನಡೆದ ಸಮಯದಲ್ಲಿ ಮಕ್ಕಳು ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ ಶಿವಾನಿ ಬೇರೊಬ್ಬ ವ್ಯಕ್ತಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ ರಾಜುಗೆ ಸಿಕ್ಕಿಬಿದ್ದಿದ್ದರು ಮತ್ತು ಉರ್ಜಾ ಪಾರ್ಕ್ನಲ್ಲಿ ಅದೇ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ರಾಜು ಬರೆದಿರುವ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ .
ಪೊಲೀಸರ ತನಿಖೆ ಚುರುಕು
ಪ್ರಾಥಮಿಕ ತನಿಖೆಯ ಪ್ರಕಾರ, ರಾಜು ಮೊದಲು ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನಿಖರವಾದ ಸಾವಿನ ಸಮಯ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಗೋಡೆಯ ಮೇಲೆ ಹೆಸರಿಸಲಾದ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ .
ಇದನ್ನೂ ಓದಿ : ದೆಹಲಿ ಕಾರು ಸ್ಫೋಟ ಪ್ರಕರಣದ 7ನೇ ಆರೋಪಿ NIA ಬಲೆಗೆ!



















