ಲಖನೌ: ಭಾರತ ಹಾಗೂ ಪಾಕಿಸ್ತಾನ ನಡುವಿನ ಐದು ದಿನಗಳ ಸಂಘರ್ಷಕ್ಕೆ ಕದನವಿರಾಮ ಅಂತ್ಯ ಹಾಡಿದೆ. ಇಷ್ಟಾದರೂ, ಭಾರತ-ಪಾಕಿಸ್ತಾನ ಗಡಿಯಲ್ಲಿ ಆತಂಕದ ವಾತಾವರಣ ಮುಂದುವರಿದಿದೆ. ಆದಾಗ್ಯೂ, ಭಾರತವು ಗಡಿಯಲ್ಲಿ ಪ್ರತಿದಾಳಿಗೆ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಇದರ ಬೆನ್ನಲ್ಲೇ, ಲಖನೌನಲ್ಲಿ ರಕ್ಷಣಾ ಸಚಿವರ ರಾಜನಾಥ್ ಸಿಂಗ್ ಅವರು ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಕಾರ್ಖಾನೆಗೆ ಭಾನುವಾರ ಚಾಲನೆ ನೀಡಿದೆ. ಇದು ಭಾರತದ ಸೇನೆಗೆ ಆನೆಬಲ ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯನ್ನು ಘೋಷಣೆ ಮಾಡಿದ್ದರು. ದೇಶೀಯವಾಗಿಯೇ ಕ್ಷಿಪಣಿಗಳನ್ನು ತಯಾರಿಸುವ ದಿಸೆಯಲ್ಲಿ ಮಹತ್ವದ ಘೊಷಣೆ ಮಾಡಿದ್ದರು. ಅದರಂತೆ, ಲಖನೌನಲ್ಲಿ ಕ್ಷಿಪಣಿ ತಯಾರಿಕಾ ಫ್ಯಾಕ್ಟರಿಗೆ 2021ರಲ್ಲಿ ಚಾಲನೆ ನೀಡಲಾಗಿತ್ತು. ಈಗ ಕಾರ್ಖಾನೆಯನ್ನು ರಕ್ಷಣಾ ಸಚಿವರು ಉದ್ಘಾಟನೆ ಮಾಡಿದ್ದಾರೆ. ಇದರೊಂದಿಗೆ ದೇಶದ ಸೇನೆಯು ಮತ್ತಷ್ಟು ಬಲಿಷ್ಠವಾದಂತಾಗಿದೆ.
ಕಾರ್ಖಾನೆ ಏಕೆ ಮಹತ್ವ?
ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಕಾರ್ಖಾನೆಯನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ 1,600 ಹೆಕ್ಟೇರ್ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ರಕ್ಷಣಾ ಕಾರಿಡಾರ್ ಗೆ ಹಂಚಿಕೆ ಮಾಡಿದೆ. ಈ ಬ್ರಹ್ಮೋಸ್ ಕಾರ್ಖಾನೆಯಲ್ಲಿ ಪ್ರತಿ ವರ್ಷ 80-100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಬ್ರಹ್ಮೋಸ್ ಕ್ಷಿಪಣಿಗಳು ಖಂಡಾತರ ಕ್ಷಿಪಣಿಗಳಾಗಿದ್ದು, ವೈರಿಗಳ ಯಾವುದೇ ದಾಳಿಗಳನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿವೆ. ಇವು ಡ್ರೋನ್ ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದ್ದು, ಕಳೆದ ಐದು ದಿನಗಳಿಂದ ನಡೆದ ಪಾಕಿಸ್ತಾನ ವಿರುದ್ಧದ ಸಂಘರ್ಷದಲ್ಲಿ ಇವುಗಳನ್ನು ಬಳಸಲಾಗಿತ್ತು. ಇವು ಭೂಮಿ ಹಾಗೂ ಸಾಗರ ಪ್ರದೇಶದಿಂದ 800-900 ಕಿ.ಮೀ ದೂರದವರೆಗೆ ಹಾರಾಟ ನಡೆಸುತ್ತವೆ. ಆಗಸದಿಂದಲೂ ಇವುಗಳನ್ನು ಉಡಾಯಿಸಬಹುದಾಗಿದ್ದು, 450-500 ಕಿ.ಮೀ ದೂರದವರೆಗೆ ಚಲಿಸುತ್ತವೆ. ಇವು ಖಂಡಾಂತರ ಕ್ಷಿಪಣಿಗಳಾಗಿವೆ. ಹಾಗಾಗಿ, ಲಖನೌ ಕ್ಷಿಪಣಿ ತಯಾರಿಕಾ ಘಟಕವು ಭಾರತೀಯ ಸೇನೆಗೆ ಬಲ ತಂದಿದೆ.