ಹಾವೇರಿ: ಬಿಜೆಪಿಯಲ್ಲಿ ಹಿಂದೂಗಳ ಪರವಾಗಿರುವವರನ್ನು ಸೈಡ್ ಲೈನ್ ಮಾಡವುದು, ಉಚ್ಛಾಟನೆ ಮಾಡುವುದು ಇದೇ ಮೊದಲಲ್ಲ. ಹಿಂದೆಯೂ ಇತ್ತು ಎಂದು ಹಾವೇರಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪುತ್ರ ಕೆ. ಕಾಂತೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಈ ನಡೆ ಒಳ್ಳೆಯದಲ್ಲ ಅಂತಾ ಮಾತ್ರ ನಾನು ಹೇಳಬಲ್ಲೆ. ಯತ್ನಾಳ್ ಆದಷ್ಟು ಬೇಗ ಭಾರತೀಯ ಜನತಾ ಪಕ್ಷದ ಒಳಗಡೆ ಬರುತ್ತಾರೆ. ಅವರ ಜೊತೆ ನನ್ನ ತಂದೆ ಕೂಡ ಪಕ್ಷದ ಒಳಗಡೆ ಬರುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.
ಹಿಂದೂತ್ವವಾದಿಗಳನ್ನು ಸೈಡ್ ಲೈನ್ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ, ಕೆ.ಎಸ್. ಈಶ್ವರಪ್ಪ, ಅನಂತ ಕುಮಾರ್, ಪ್ರತಾಪ್ ಸಿಂಹ, ಸಿಟಿ ರವಿ ಸೇರಿದಂತೆ ಹಲವು ಹಿಂದೂತ್ವವಾದಿಗಳನ್ನು ಸೈಡ್ ಲೈನ್ ಗೆ ದೂಡುವ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಯಾವುದೊ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ಇಡೀ ಹಿಂದೂ ಸಮಾಜಕ್ಕೆ ಸೀಮಿತವಾಗಿರುವ ಪಕ್ಷ. ಇದು ಹೀಗೆ ನಡೆದರೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಹೊರಗಡೆ ಇರುವುದರಿಂದ ನೂರಕ್ಕೆ ನೂರರಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ನಮೋ ಆ್ಯಪ್ ನ್ನು 10 ಲಕ್ಷ ಜನರು ಅನ್ ಫಾಲೋ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಹೈಕಮಾಂಡ್ ಕೂಡ ಇದನ್ನು ಗಮನಿಸುತ್ತದೆ. ಯತ್ನಾಳ್ ಹೊಸ ಪಕ್ಷ ಕಟ್ಟಿದರೆ, ಬಿಜೆಪಿಗೆ ತೊಂದರೆಯಾಗುತ್ತದೆ. ಆದಷ್ಟು ಬೇಗ ಬಿಜೆಪಿ ಇದಕ್ಕೊಂದು ಸೂತ್ರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದ್ದಾರೆ.