ಮುಂಗಾರು ಅಧಿಕೃತ ಎಂಟ್ರಿಗೂ ಮುನ್ನವೇ ಈ ಬಾರಿ ಬೆಂಗಳೂರು ಪ್ರವಾಹಕ್ಕೆ ಸಾಕ್ಷಿಯಾಗಿದೆ.
ಮೇ ತಿಂಗಳ ದಾಖಲೆ ಮಳೆಗೆ ರಾಜಧಾನಿಯ ಹಲವು ಪ್ರದೇಶಗಳು ಅವಾಂತರಕ್ಕೆ ಸಾಕ್ಷಿಯಾಗಿದೆ. ಹೀಗಾಗಿಯೇ ಈ ಬಾರಿಯ ಮಳೆ ಪರಿಸ್ಥಿತಿ ನಿಭಾಯಿಸಲು ಗ್ರೇಟರ್ ಬೆಂಗಳೂರು ಆಡಳಿತ ಹೊಸ ಮಾರ್ಗ ಕಂಡುಕೊಂಡಿದೆ. ಅತಿ ಹೆಚ್ಚು ಮಳೆಯಾಗಿ ಅವಾಂತರ ಸೃಷ್ಟಿಯಾಗುವ ಪ್ರದೇಶಗಳ ಪರಿಸ್ಥಿತಿ ಅವಲೋಕನಕ್ಕೆ ಡ್ರೋನ್ ಬಳಕೆಗೆ ನಿರ್ಧರಿಸಲಾಗಿದೆ.
ಪ್ರವಾಹ ಸ್ಥಿತಿ ನಿರ್ಮಾಣವಾದ ಪ್ರದೇಶಗಳಿಗೆ ಅಗತ್ಯವಿರುವ ತುರ್ತು ನೆರವನ್ನು ರವಾನಿಸುವ ನಿಟ್ಟಿನಲ್ಲಿ ಡ್ರೋನ್ ಮೂಲಕ ಪರಿಸ್ಥಿತಿಯನ್ನು ಮನಗಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ತೀರ್ಮಾನಿಸಿದೆ. ಹೀಗಾಗಿ ಈ ಬಾರಿ ಮಳೆಗಾಲಕ್ಕೆ ಸಿಲಿಕಾನ್ ಸಿಟಿ ಡ್ರೋನ್ ಕಣ್ಗಾವಲಿನಲ್ಲಿ ಕಾರ್ಯ ನಿರ್ವಹಿಸಲಿದೆ. ಡ್ರೋನ್ ಮೂಲಕವೇ ರೇನ್ ವಾರ್ ರೂಂ ನಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.