ಬಾರ್ಡರ್- ಗವಾಸ್ಕರ್ ಟ್ರೋಫಿ (Border- Gavaskar Trophy )2024-25ರ ಸೋಲಿನ ಹಿನ್ನೆಲೆಯಲ್ಲಿ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವನ್ನು ವಿಶ್ಲೇಷಣೆ ಮಾಡಲಾಯಿತು.
ಸಭೆಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ,(Rohit Sharma) ಮುಖ್ಯ ಕೋಚ್ ಗೌತಮ್ ಗಂಭೀರ್, (Gautam Gambhir,) ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಭಾಗವಹಿಸಿದ್ದರು.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಭಾರತದ ಇತ್ತೀಚಿನ ಪ್ರದರ್ಶನದ ವಿಶ್ಲೇಷಣೆ ಬಳಿಕ ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು. ಹಿರಿಯ ಆಟಗಾರರು ತಮ್ಮ ಪ್ರದರ್ಶನವನ್ನು ಸುಧಾರಿಸಲು ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಿದೆ.
ಬಿಸಿಸಿಐ ಕೇಂದ್ರ ಗುತ್ತಿಗೆ ಆಟಗಾರರ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಮುಂದಾಗಿದೆ. ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಲು ಕೋರಿಕೋಂಡಿದೆ. ವಿನಾಯಿತಿ ಬಯಸುವ ಆಟಗಾರರು ಫಿಸಿಯೋದಿಂದ ವಿವರ ವರದಿಯನ್ನು ಒದಗಿಸಬೇಕು ಎಂದು ಹೇಳಿದೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಇಬ್ಬರಿಂದಲೂ ಅನುಮೋದನೆ ಪಡೆಯಬೇಕು ಸಭೆಯಲ್ಲಿ ಹೇಳಲಾಗಿದೆ.
ಟೀಮ್ ಇಂಡಿಯಾ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಗರ್ಕರ್ ಅವರು ಒತ್ತಡ ನಿರ್ವಹಣೆ ಅಥವಾ ಇತರ ನೈಜ ಕಾಳಜಿಗಳನ್ನು ಉಲ್ಲೇಖಿಸಿದರೆ ಮಾತ್ರ ಬಿಸಿಸಿಐ ಆ ಆಟಗಾರರಿಗೆ ಅವಕಾಶ ನೀಡುತ್ತದೆ ಎಂದು ವರದಿ ಹೇಳಿದೆ.
ಕಳಪೆ ಫಾರ್ಮ್ ಮತ್ತು ದೇಶೀಯ ಕ್ರಿಕೆಟ್ ಅನುಪಸ್ಥಿತಿಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ(Virat Kohli) ಅವರ ಬಗ್ಗೆ ಹೆಚ್ಚು ಚರ್ಚೆಗಳು ಸಭೆಯಲ್ಲಿ ನಡೆಯಿತು.
ರೋಹಿತ್ ಐದು ಇನ್ನಿಂಗ್ಸ್ಗಳಲ್ಲಿ ಕೇವಲ 31 ರನ್ ಗಳಿಸಿದ್ದರು ಮತ್ತು ಕಳಪೆ ಪ್ರದರ್ಶನದಿಂದಾಗಿ ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ನಿಂದ ಹೊರಗುಳಿಯುವಂತಾತಿತ್ತು. ಕೊಹ್ಲಿ ಪರ್ತ್ನಲ್ಲಿ ಶತಕ ಗಳಿಸಿದರೂ ಒಟ್ಟಾರೆಯಾಗಿ ಹೆಣಗಾಡಿದರು. ಒಂಬತ್ತು ಇನ್ನಿಂಗ್ಸ್ಗಳಲ್ಲಿ ಕೇವಲ 190 ರನ್ ಗಳಿಸಿದ್ದಾರೆ. ಸ್ಟಂಪ್ನಿಂದ ಹೊರಕ್ಕೆ ಹೋಗುವ ಚೆಂಡುಗಳನ್ನು ಆಡಲು ಹೋಗಿ ಔಟಾಗಿದ್ದರು.
ದೇಶೀಯ ಕ್ರಿಕೆಟ್ನಿಂದ ಅವರಿಬ್ಬರೂ ದೀರ್ಘಕಾಲ ದೂರವಿರುವುದು ಕಳವಳ ಹೆಚ್ಚಿಸಿದೆ. ರೋಹಿತ್ 2015ರಲ್ಲಿ ಕೊನೇ ಬಾರಿಗೆ ರಣಜಿ ಟ್ರೋಫಿ ಆಡಿದ್ದರೆ ಕೊಹ್ಲಿ 2012ರಲ್ಲಿ ಕಾಣಿಸಿಕೊಂಡಿದ್ದರು.
ರೋಹಿತ್ ಮತ್ತು ಕೊಹ್ಲಿ ಟೆಸ್ಟ್ ಭವಿಷ್ಯ ?
ಭಾರತದ ಮುಂದಿನ ಟೆಸ್ಟ್ ಸರಣಿ ಜೂನ್ 2025 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ರೋಹಿತ್ ಮತ್ತು ಕೊಹ್ಲಿ ಬಹುನಿರೀಕ್ಷಿತ ಬ್ರಿಟನ್ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ. ಅವರ ಇತ್ತೀಚಿನ ಪ್ರದರ್ಶನಗಳು ಪರಿಶೀಲನೆಗೆ ಒಳಪಟ್ಟಿರುವುದರಿಂದ, ಭಾರತದ ಅತಿದೊಡ್ಡ ಕ್ರಿಕೆಟ್ ಐಕಾನ್ಗಳ ಭವಿಷ್ಯ ಅಪಾಯದಲ್ಲಿದೆ.
ಮತ್ತೊಂದೆಡೆ, ಗೌತಮ್ ಗಂಭೀರ್ ಅವರು ಕೋಚಿಂಗ್ ಅವಧಿಯ ಬಗ್ಗೆಯೂ ಚರ್ಚೆ ನಡೆದಿದೆ. ಅವರು ಕೋಚ್ ಆದ ಬಳಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿತು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ವೈಟ್ವಾಷ್ ಮುಖಭಂಗ ಎದುರಿಸಿತು. 10 ವರ್ಷಗಳಲ್ಲಿ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನುಕಳೆದುಕೊಂಡಿತ್ತು.
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಈ ಫಲಿತಾಂಶಗಳೊಂದಿಗೆ, ಭಾರತವನ್ನು ಮತ್ತೆ ಹಳಿಗೆ ತರಲು ಗಂಭೀರ್, ಆಯ್ಕೆದಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.