ಚಂಡಿಗಢ: ದೆಹಲಿ ವಿಧಾನಸಭೆ ಚುನಾವಣೆಯ ಸೋಲಿನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷಕ್ಕೆ ಈಗ ಪಂಜಾಬ್ ಅನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸದ್ಯಕ್ಕೆ ಆಪ್ ಅಧಿಕಾರದಲ್ಲಿರುವ ಏಕೈಕ ರಾಜ್ಯವೆಂದರೆ ಅದು ಪಂಜಾಬ್. ಅಲ್ಲೇನಾದರೂ ಆಪರೇಷನ್ ಕಮಲವೋ, ಆಪರೇಷನ್ ಹಸ್ತವೋ ನಡೆದರೆ, ಇದ್ದ ಒಂದು ರಾಜ್ಯವನ್ನೂ ಕಳೆದುಕೊಳ್ಳಬೇಕಾದೀತು ಎಂಬ ಭೀತಿ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ರದ್ದು (Arvind Kejriwal ). ಹೀಗಾಗಿ, ಕೇಜ್ರಿವಾಲ್ ಅವರು ಪಂಜಾಬ್ ಶಾಸಕರ ತುರ್ತು ಸಭೆ ಕರೆದಿದ್ದಾರೆ.
ಪಂಜಾಬ್ನ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು, ರಾಜ್ಯದ 30 ಆಪ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಂಗಳವಾರವೇ ಪಂಜಾಬ್ನ ಎಲ್ಲ ಶಾಸಕರೊಂದಿಗೆ ಸಭೆ ನಡೆಸಲು ಕೇಜ್ರಿವಾಲ್ ತೀರ್ಮಾನಿಸಿಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 30 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಲೂಧಿಯಾನಾದಿಂದ ಕೇಜ್ರಿವಾಲ್ ಸ್ಪರ್ಧೆ
ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ಬಾಜ್ವಾ ಅವರ ಪ್ರಕಾರ, ಆಪ್ ನಾಯಕ ಕೇಜ್ರಿವಾಲ್ ಲುಧಿಯಾನಾದಿಂದ ಸ್ಪರ್ಧಿಸಿ ಪಂಜಾಬ್ ಸರ್ಕಾರಕ್ಕೆ ಸೇರುವ ಸಾಧ್ಯತೆ ಇದೆ. ಪಂಜಾಬ್ ಬಿಜೆಪಿ ನಾಯಕ ಸುಭಾಷ್ ಶರ್ಮಾ ಕೂಡ, ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ.
27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಆಪ್ನ ದಶಕದ ಆಡಳಿತ ಕೊನೆಗೊಂಡಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪ್ರತಾಪ್ ಸಿಂಗ್ ಬಾಜ್ವಾ, ಆಪ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆಪ್ ನಲ್ಲಿದ್ದರೆ ತಮಗೆ ಉಳಿಗಾಲ ಇಲ್ಲ ಎಂಬುದನ್ನು ಅರಿತಿರುವ ಬಹುತೇಕ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದೂ ಬಾಜ್ವಾ ಹೇಳಿದ್ದಾರೆ. ಪಂಜಾಬ್ನಲ್ಲಿ ಆಪ್ ನೊಳಗೆ ಆಂತರಿಕ ಕಚ್ಚಾಟ ಶುರುವಾಗಿದೆ. ಹೀಗಾಗಿ ರಾಜ್ಯ ಸಂಪುಟ ಪುನಾರಚನೆ ಆಗುವ ಸಾಧ್ಯತೆಯಿದೆ ಎಂದೂ ಕಾಂಗ್ರೆಸ್ ನಾಯಕ ಬಾಜ್ವಾ ಹೇಳಿದ್ದಾರೆ. “ಪಂಜಾಬ್ ಜನರು ನಿರಂಕುಶ ಪಕ್ಷದ ನೈಜ ಮುಖ ನೋಡಿದ್ದಾರೆ. ಅವರ ಬಣ್ಣ ಬಯಲಾಗಿದೆ. ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಹ್ ಮಾನ್ 2022ರಲ್ಲಿ ಪಂಜಾಬ್ನ ಜನತೆಯನ್ನು ವಂಚಿಸಿದ್ದಾರೆ. ದಿಲ್ಲಿಯ ಫಲಿತಾಂಶ ಆಪ್ ಅಂತ್ಯದ ಸೂಚನೆ” ಎಂದಿದ್ದಾರೆ.
ಇದನ್ನೂ ಓದಿ : ಬಂದ್ ಗೆ ಕಿಡಿಕಾರಿದ ವಿಪಕ್ಷ ನಾಯಕ ಅರವಿಂದ್ ಬೆಲ್ಲದ್!!
2022 ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, ಆಪ್ 117 ಸ್ಥಾನಗಳ ಪೈಕಿ 92ರಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ನಿಂದ ಅಧಿಕಾರ ಕಬಳಿಸಿತ್ತು. ಕಾಂಗ್ರೆಸ್ 18 ಸ್ಥಾನ ಗಳಿಸಿತ್ತು. ಶಿರೋಮಣಿ ಅಕಾಲಿ ದಳಕ್ಕೆ ಕೇವಲ ಮೂರು ಸೀಟುಗಳು ಬಂದಿದ್ದವು.
70 ಕ್ಷೇತ್ರಗಳ ದಿಲ್ಲಿ ವಿಧಾನಸಭೆಯಲ್ಲಿ 67 ಸ್ಥಾನಗಳನ್ನು ಹೊಂದಿದ್ದ ಎಎಪಿ, ಫೆಬ್ರವರಿ 5ರ ಚುನಾವಣೆಯಲ್ಲಿ ಕೇವಲ 22 ಸ್ಥಾನ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಚಿವ ಸೌರಭ್ ಭಾರದ್ವಾಜ್, ಅವಧ್ ಓಜಾ ಮತ್ತು ಸೋಮನಾಥ್ ಭಾರ್ತಿಯಂಥ ಘಟಾನುಘಟಿಗಳು ಸೋತಿದ್ದರು.