ಒಂದು ವಾರ ಕಳೆದು ಹೋಗಿದೆ. 26 ಪ್ರವಾಸಿಗರನ್ನು ರಕ್ತದ ಮಡುವಿಗೆ ದೂಡಿದ ಜಿಹಾದಿ ರಾಕ್ಷಸರ ಹೆಜ್ಜೆ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ, ಕಾಶ್ಮೀರ ಪೊಲೀಸರು ಸೇರಿದಂತೆ ಎನ್ಐಎ ತಂಡ ನಿರಂತರ ಶೋಧ ಕಾರ್ಯ ನಡೆಸಿದೆ. ನರಮೇಧ ನಡೆಸಿದ ನಾಲ್ವರು ಉಗ್ರರ ಬೇಟೆಗಾಗಿ ಐತಿಹಾಸಿಕ ಮ್ಯಾನ್ ಹಂಟ್ ಮುಂದುವರಿದಿದೆ.
ರಕ್ತದೋಕುಳಿ ಆಡಿದ ಬಳಿಕ ಹಾಶಿಮ್ ಮೂಸಾ ಸಾರಥ್ಯದ ಉಗ್ರರ ತಂಡ ಬೈಸರನ್ ನ ದಟ್ಟ ಕಾಡಿನಲ್ಲೇ ಇಂದಿಗೂ ಅಡಗಿ ಕುಳಿತಿದೆ ಎನ್ನಲಾಗುತ್ತಿದೆ. ಕೃತ್ಯವೆಸಗಿದವರು ಇನ್ನೂ ಬೈಸರನ್ ವ್ಯಾಪ್ತಿಯಲ್ಲೇ ಜೀವಿಸ್ತಿದ್ದಾರೆ ಅಂತಾ ಎನ್ಐಎ ಸ್ಪಷ್ಟಪಡಿಸಿದೆ. ಹೀಗೆ ಬಿಲಸೇರಿರುವ ಜಿಹಾದಿ ಹೆಗ್ಗಣಗಳು ತಮ್ಮೊಟ್ಟಿಗೆ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ತಂದಿದ್ದಾರೆ ಅನ್ನೋ ಗುಮಾನಿಯಿದೆ. ಇನ್ನೊಂದೆಡೆ, ಸ್ಥಳೀಯರನ್ನು ಬಳಸಿಕೊಂಡು ಪಾಕಿಸ್ತಾನ ಸೇನೆಯೇ ಇವರಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿರುವ ಅನುಮಾನವಿದೆ.
ಹುಡುಕಿ…ಹುಡುಕಿ ಒಬ್ಬೊಬ್ಬರನ್ನು ಹೊಡೆದು ಹಾಕ್ತೀವಿ
ಪಹಲ್ಗಾಮ್ ಹತ್ಯೆಯ ಹಿಂದಿರುವ ಪ್ರತಿ ಕರ್ಮಠ ಸೈನಿಕನನ್ನು ಎಲ್ಲೇ ಅಡಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲಾ. ಪ್ರತಿಯೊಬ್ಬರನ್ನೂ ಹುಡುಕಿ ಹುಡುಕಿ ಹೊಡೀತಿವಿ ಅಂತಾ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ದಾಳಿ ಬಳಿಕ ಇದೇ ಮೊದಲ ಬಾರಿ ಅಸ್ಸಾಂ ನಲ್ಲಿ ಪ್ರತಿಕ್ರಿಯಿಸಿರುವ ಅಮಿತ್ ಶಾ, ಪ್ರಧಾನಿ ಮೋದಿ ಸರ್ಕಾರ ಈ ವಿಚಾರದಲ್ಲಿ ಶೂನ್ಯ ಸಹಿಷ್ಣುವಾಗಿದೆ ಅಂತಾ ಕೆಂಡಕಾರಿದ್ದಾರೆ. ಇನ್ನೊಂದೆಡೆ, ಪಾಕಿಸ್ತಾನ ವಿರುದ್ಧ ಸಮರಕ್ಕೆ ಭಾರತೀಯ ನೌಕಾಪಡೆಗಳು ತಾಲೀಮು ಆರಂಭಿಸಿವೆ. ಅರಬ್ಬಿ ಸಮುದ್ರದಲ್ಲಿ ಶಸ್ತ್ರಾಭ್ಯಾಸ ಆರಂಭಿಸಿರುವ ನೌಕಾಪಡೆಗಳು ಪಾಕ್ ನಿಂದ ಕೇವಲ 80 ನಾಟಿಕಲ್ ಮೈಲು ದೂರದಲ್ಲಿ ಖಂಡಾತರ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಈ ಬೆಳವಣಿಗೆ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ.
ಪಂಜಾಬಿಗಳು ಪಾಕ್ ಯೋಧರಿಗೆ ಅನ್ನಹಾಕಿ
ಒಂದೊಮ್ಮೆ ಯುದ್ಧ ಆದ್ರೆ, ಭಾರತೀಯ ಸೇನೆಯ ಬಲಿಷ್ಠ ಶಕ್ತಿ ಪಂಜಾಬಿಗಳು ಪಾಕ್ ಪರ ನಿಲ್ಲಬೇಕು. ಅಷ್ಟೇ ಅಲ್ಲಾ ಪ್ರತಿ ಪಾಕ್ ಯೋಧನಿಗೆ ಅನ್ನಹಾಕುವಂತೆ ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಕರೆ ನೀಡಿದ್ದಾನೆ. ಗುರುನಾನಕರ ಜನ್ಮ ಸ್ಥಳ ಪಾಕಿಸ್ಥಾನದಲ್ಲಿದೆ. ಹೀಗಾಗಿ ಪಂಜಾಬಿಗಳು ಪಾಕ್ ಬೆಂಬಲಿಗರು. ಈ ನಿಟ್ಟಿನಲ್ಲೇ, ಭಾರತದ ಪರ ಯುದ್ಧಕ್ಕೆ ಯಾವೊಬ್ಬ ಪಂಜಾಬಿಯೂ ನಿಲ್ಲದಿರಲಿ ಅಂತಾ ಪನ್ನು ತನ್ನ ನಾಲಗೆ ಹರಿಬಿಟ್ಟಿದ್ದಾರೆ.
ಈ ನಡುವೆ, ಭಾರತ ಯಾವ ಸಂದರ್ಭದಲ್ಲಾದ್ರೂ ತಿರುಗಿಬೀಳೋ ಭೀತಿಯಲ್ಲಿರೋ ಪಾಕ್, ಅಮೆರಿಕ ಮೊರೆ ಹೋಗಿದೆ. ಹಿರಿಯಣ್ಣನ ಅಂಗಳದಲ್ಲಿ ಸಂಧಾನಕ್ಕಾಗಿ ಅಂಗಲಾಚುತ್ತಿದೆ. ಆದ್ರೆ ಭಾರತದ ಪ್ರತೀಕಾರದ ಜ್ವಾಲೆ ಕುದಿಯುತ್ತಿದ್ದು, ಅದು ಜ್ವಾಲಾಮುಖಿಯಾಗಿ ಯಾವ ಕ್ಷಣದಲ್ಲಾದ್ರೂ ಸಿಡಿಯಬಹುದಾಗಿದೆ.



















