ಹತ್ತಾರು ಕನಸುಗಳು…ನೂರಾರು ಗಂಟೆಗಳ ನಿಂರತರ ಓದಿನ ಫಲ. ಬದುಕನ್ನೇ ತಮ್ಮ ಓದಿಗೆ ಮುಡಿಪಿಟ್ಟು, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡವರ ಕಣ್ಣೀರಿನ ಕತೆಯಿದು. ಹೌದು, ಇದು ನಿಜಕ್ಕೂ ಭಾರತದ ಶಿಕ್ಷಣ ವ್ಯವಸ್ಥೆಗೆ ಕೈಗನ್ನಡಿಯಾಗಬೇಕಿರುವಂತಹ ರಿಯಲ್ ಸ್ಟೋರಿ. ನಮ್ಮಲ್ಲೇ ಎಲ್ಲವೂ ಸರಿ ಇದ್ದಿದಿದ್ದರೆ, ಈ ಸಾವಿರಾರು ಮಕ್ಕಳ ಬದುಕೀಗ ಅತಂತ್ರವಾಗುತ್ತಿರಲಿಲ್ಲ. ಎರಡು ದೇಶಗಳ ಯುದ್ಧದಾಹಕ್ಕೆ ಭಾರತದ ಭವಿಷ್ಯದ ವೈದ್ಯರ ಬದುಕೇ ಅತಂತ್ರವಾಗಿದೆ.
ಇರಾನ್ ನಲ್ಲಿ ಎಂಬಿಬಿಎಸ್ ಕಲಿಕೆಗೆ ಹೆಚ್ಚಿನ ಒಲವು
ಜಗತ್ತಿನೆಲ್ಲೆಡೆ ಮಾನ್ಯವಾಗುತ್ತೆ ಇರಾನ್ ಡಿಗ್ರಿ
ಭಾರತ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ರಾಷ್ಟ್ರ. 140 ಕೋಟಿ ಮೀರಿದ ಜನಸಂಖ್ಯೆ ದೇಶದಲ್ಲಿ ಈಗ ಬಹುತೇಕ ಜಿಲ್ಲೆಗೊಂದರಂತೆ ಮೆಡಿಕಲ್ ಕಾಲೇಜುಗಳಿವೆ. ಆದರೂ ನಮ್ಮ ವಿದ್ಯಾರ್ಥಿಗಳು ಎಂಬಿಬಿಎಸ್ ಕಲಿಯುವುದಕ್ಕೆ ಅಂತಾ ಇರಾನ್, ಇಸ್ರೇಲ್ ಗೆ ಗುಳೇ ಹೋಗುತ್ತಿದ್ದಾರೆ. ಹಾಗಂತಾ ಇದರ ಹಿಂದಿನ ಒಬ್ಬೊಬ್ಬರ ಕತೆಯೂ ನಿಜಕ್ಕೂ ಎಂಥವರ ಕರಳನ್ನು ಹಿಂಡದೆ ಇರದು. ವಿದ್ಯಾರ್ಥಿ ದೆಸೆಯಲ್ಲಿ ಅರಳುವ ಈ ವೈದ್ಯನಾಗಬೇಕೆನ್ನೋ ಕನಸನ್ನು ನನಸಾಗಿಸಿಕೊಳ್ಳೋದು ನಿಜಕ್ಕೂ ಅಷ್ಟು ಸುಲಭದ್ದಲ್ಲ. ಈಗ ಭಾರತದಲ್ಲಿ ನೀಟ್ ಪರೀಕ್ಷೆ ಪಾಸಾಗಿ ಆಲ್ ಇಂಡಿಯಾ ಮಟ್ಟದಲ್ಲಿ ಸೀಟ್ ಗಿಟ್ಟಿಸಬೇಕು. ಒಂದೊಮ್ಮೆ ಸರ್ಕಾರಿ ಖೋಟಾದಲ್ಲೇ ಸೀಟ್ ಸಿಕ್ಕರೂ ದುಬಾರಿ ಫೀಸ್ ಭರಿಸುವ ಶಕ್ತಿ ಎಲ್ಲರಲ್ಲಿಲ್ಲ. ಅಂದಾಜು ವಾರ್ಷಿಕ 6ರಿಂದ 7 ಲಕ್ಷ ರೂ. ಖರ್ಚು. ಕಲಿಕೆ ಅರ್ಹತೆ ಇದ್ದರೂ ಸಾಮರ್ಥ್ಯದ ಕೊರತೆ ಹಲವರನ್ನು ಅನಿವಾರ್ಯವಾಗಿ ಅನ್ಯ ಕೋರ್ಸ್ ಗಳಿಗೆ ದೂಡುತ್ತೆ. ಆದರೆ ಛಲಬಿಡದ ಕೆಲ ತ್ರಿವಿಕ್ರಮರು ಮಾತ್ರ, ತಮ್ಮ ಕನಸನ್ನು ಸಾಕಾರವಾಗಿಸಿಕೊಳ್ಳಲು ದೂರದ ಇರಾನ್, ಇಸ್ರೇಲ್ ಗೆ ಹೋಗುತ್ತಾರೆ.
ಇರಾನ್ ನಲ್ಲಿದ್ದಾರೆ 6 ಸಾವಿರ ಭಾರತೀಯ ವಿದ್ಯಾರ್ಥಿಗಳು
ಯುದ್ಧದ ರಣಘೋಷಕ್ಕೆ ಬೀದಿಗೆ ಬೀಳುತ್ತಾ ವಿದ್ಯಾರ್ಥಿಗಳ ಬದುಕು
ಇರಾನ್-ಇಸ್ರೇಲ್ ನಡುವೆ, ಸಮರ ತಾರಕಕ್ಕೇರಿದೆ. ನಾನ್ ಹೆಚ್ಚಾ ನೀನ್ ಹೆಚ್ಚಾ ಅನ್ನೋ ಧಾವಂತಕ್ಕೆ ಬಿದ್ದವರಂತೆ ಉಭಯರೂ ಆರ್ಭಟಿಸುತ್ತಿದ್ದಾರೆ. ಈ ರಣೋತ್ಸಾಹ, ಭಾರತದ 6 ಸಾವಿರ ವಿದ್ಯಾರ್ಥಿಗಳ ಭವಿಷ್ಯವನ್ನು ಅರ್ಧಚಂದ್ರವಾಗಿಸಿದೆ. ಇರಾನ್ ನಲ್ಲಿ ಭಾರತ ಮೂಲದ 6 ಸಾವಿರ ಮೆಡಿಕಲ್ ವಿದ್ಯಾರ್ಥಿಗಳಿದ್ದು ಅವರೆಲ್ಲಾ ಈಗ ದೇಶ ತೊರೆಯಬೇಕಾದ ಅನಿವಾರ್ತೆಗೆ ಸಿಲುಕಿದ್ದಾರೆ. ಭಾರತದಿಂದ ಈ 6 ಸಾವಿರ ವಿದ್ಯಾರ್ಥಿಗಳು ಇರಾನ್ ಗೆ ಹೋಗಿದ್ದಾದ್ರು ಯಾಕೆ ಅಂತಾ ನೋಡಿದ್ರೆ ಅದರ ಹಿಂದೆ ಒಬ್ಬೊಬ್ಬರದ್ದು ಒಂದೊಂದು ದಾರುಣ ಕತೆಗಳಿವೆ. ಈ ವಿದ್ಯಾರ್ಥಿಗಳ ಪೈಕಿ ಬಹುತೇಕರು ಕಶ್ಮೀರಿಗಳು. ಬಡತನವೆನ್ನೋ ಬೆಂಕಿಯಲ್ಲಿ ಬೆಂದ ಈ ಕನಸುಗಾರರು ಅಗ್ಗದ ಖರ್ಚಿನಲ್ಲಿ ವೈದ್ಯರಾಗುವ ಉಮೇದಿನಲ್ಲೇ ಜೀವವನ್ನೇ ಪಣಕ್ಕಿಟ್ಟು ಇರಾನ್, ಇಸ್ರೇಲ್ ನಂಥಾ ದೇಶಗಳಿಗೆ ಹೋಗಿದ್ದಾರೆ. ಥೆಹ್ರೀನ್ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್, ಶಾಹೀದ್ ಬೆಹಸ್ತಿ ಯುನಿವರ್ಸಿಟಿ ಮತ್ತು ಇಸ್ಲಾಮಿಕ್ ಆಜಾದ್ ಯುನಿವರ್ಸಿಟಿಗಳಲ್ಲಿ ಹೆಚ್ಚಾಗಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇನ್ನು 6 ವರ್ಷಗಳ ಎಂಬಿಬಿಎಸ್ ಕಲಿಕೆಗೆ ಇರಾನ್ ನಲ್ಲಿ ಕೇವಲ 15ರಿಂದ 30 ಲಕ್ಷ ಖರ್ಚಾಗುತ್ತೆ. ಅದು ಕೂಡಾ ವಸತಿ, ಊಟ ಸೇರಿ. ನಿಜಕ್ಕೂ ಈ ಮೊತ್ತ ಭಾರತದಲ್ಲಾದ್ರೆ 3 ವರ್ಷಕ್ಕೆ ಆಗೋದಿಲ್ಲ. ಹೀಗಾಗಿಯೇ ಇದ್ದ ಅಲ್ಪ ಸ್ವಲ್ಪ ಜಮೀನು, ಮನೆ, ಸಾಲ ಮಾಡಿಯಾದ್ರೂ ವಿದ್ಯಾರ್ಥಿಗಳು ಈ ರಾಷ್ಟ್ರಗಳಲ್ಲಿ ಕಲಿಯೋದಕ್ಕೆ ಹೋಗಿದ್ದಾರೆ. ಹಾಗಂತಾ ಇರಾನ್ ನ ವೈದ್ಯಕೀಯ ಡಿಗ್ರಿಗೆ ಜಗತ್ತಿನಾದ್ಯಂತ ಮನ್ನಣೆ ಕೂಡಾ ಇದೆ.
ಜಾಗತಿಕ ಮಟ್ಟದಲ್ಲಿ ಫಲಿಸಿತು ಭಾರತದ ರಾಯಭಾರತ್ವ
ಇರಾನ್ ಭೂ ಗಡಿಗಳೆಲ್ಲಾ ಭಾರತೀಯರಿಗೆ ಮುಕ್ತ
ಭಾರತದ ರಾಜತಾಂತ್ರಿಕ ಜಾದು ಇರಾನ್ ನಲ್ಲೂ ಫಲ ನೀಡಿದೆ. ವಿದ್ಯಾರ್ಥಿಗಳು ಸೇರಿ ಕಾರ್ಮಿಕರಾಗಿ ದುಡಿಯುತ್ತಿರೋ ಒಟ್ಟು 10 ಸಾವಿರ ಭಾರತೀಯರು ಇರಾನ್ ನಲ್ಲಿದ್ದಾರೆ. ಇವರೆನ್ನೆಲ್ಲಾ ಯುದ್ಧದ ಅಂಗಳದಿಂದ ಈಗ ಸೇಫಾಗಿ ಭಾರತಕ್ಕೆ ವಾಪಸ್ ಕರೆತರಬೇಕಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಇರಾನ್ ಜೊತೆ ನಡೆಸಿದ ಮಾತುಕತೆ ಸಫಲವಾಗಿದ್ದು, ದೇಶದ ಎಲ್ಲ ಭೂಗಡಿಗಳನ್ನು ಭಾರತೀಯರಿಗೆ ಇರಾನ್ ತೆರೆದಿದೆ. ಯುದ್ಧದಿಂದಾಗಿ ಇರಾನ್ ನಿಂದ ವಿಮಾನ ಸಂಚಾರವಿಲ್ಲ ಹೀಗಾಗಿ ಗಡಿಗಳನ್ನು ತೆರೆಯಲಾಗಿದ್ದು, ಪಾಸ್ ಪೋರ್ಟ್ ನೋಂದಾಯಿಸಿ, ನೆರೆಯ ರಾಷ್ಟ್ರಗಳ ಮೂಲಕ ಭಾರತೀಯರು ತವರಿಗೆ ಮರಳಲು ಇರಾನ್ ಅನುವು ಮಾಡಿಕೊಟ್ಟಿದೆ. ಈ ಮೂಲಕ ರಣರಂಗದಲ್ಲಿ ಸಿಲುಕಿದ್ದ ಭಾರತೀಯರೀಗ ವಾಪಸ್ ಆಗಲು ಸಜ್ಜಾಗ್ತಿದ್ದಾರೆ. ಒಟ್ನಲ್ಲಿ, ಮತ್ತೊಬ್ಬರ ಜೀವ ಉಳಿಸುವ ಪರಮಪವಿತ್ರ ವೃತ್ತಿ ಮಾಡೋ ಭವಿಷ್ಯದ ವೈದ್ಯರ ಜೀವವೇ ಅಡಕತ್ತರಿಯಲ್ಲಿ ಸಿಲುಕಿ ನಲುಗಿದ್ದು ದುರಂತವೇ ಸರಿ.