ವಾಷಿಂಗ್ಟನ್: ಕಾರಣವನ್ನೇ ನೀಡದೆ ಅಮೆರಿಕವು ಭಾರತೀಯ ವಿದ್ಯಾರ್ಥಿಗಳನ್ನು ದೇಶದಿಂದ ಗಡಿ ಪಾರು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಅಮೆರಿಕ ಸರ್ಕಾರವು 48 ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದೆ. ಹೀಗಾಗಿ ವ್ಯಾಸಂಗಕ್ಕೆಂದು ಅಮೆರಿಕಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಮರಳಿ ಬರುವಂತಾಗಿದೆ. ಗಡಿಪಾರು ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾತ್ರ ಅಮೆರಿಕ ಕಾರಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಅಮೆರಿಕ ಸರ್ಕಾರದಿಂದ ಸ್ಪಷ್ಟನೆ ಬಯಸಿದೆ.
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪಡೆದು ಜಾಗತಿಕ ಮಟ್ಟದ ಸಂಸ್ಥೆಗಳಲ್ಲಿ ಉದ್ಯೋಗ ಅಥವಾ ಉದ್ಯಮ ನಡೆಸಲು ಆಸಕ್ತಿ ವಹಿಸಿ ವಿದ್ಯಾರ್ಥಿಗಳು ಅಮೆರಿಕಗೆ ತೆರಳಿದ್ದರು. ಆದರೆ, ಅಮೆರಿಕ ಕಾರಣವನ್ನೇ ನೀಡದೆ ಮರಳಿ ಕಳುಹಿಸಿದೆ. ಈ ವಿಚಾರ ಸಂಸತ್ ಅಧಿವೇಶನದಲ್ಲೂ ಪ್ರಸ್ತಾಪವಾಗಿದೆ. ಈ ಕುರಿತಾಗಿ ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಪ್ರಶ್ನೆ ಮಾಡಿದ ಸಂಸದ ಬಿ. ಕೆ. ಪಾರ್ಥಸಾರಥಿ, ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಈ ರೀತಿ ಕ್ರಮ ವಹಿಸಿದ್ದು ತಪ್ಪು. ಈ ಕುರಿತು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವೆ ಕೀರ್ತಿ ವರ್ಧನ್ ಸಿಂಗ್, ಸೂಕ್ತ ಕಾರಣ ಹೇಳುವಂತೆ ಅಮೆರಿಕ ಸರ್ಕಾರಕ್ಕೆ ಕೇಳಲಾಗಿದೆ ಎಂದು ಉತ್ತರಿಸಿದ್ದಾರೆ.
ಕೆಲಸದಿಂದ ಕಿತ್ತು ಹಾಕಿದ ವೇಳೆ ಅಥವಾ ಸಸ್ಪೆಂಡ್ ಮಾಡಿದ ವೇಳೆ ಹಾಗೂ ಉದ್ಯೋಗ ಪಡೆಯಲು ನೀಡಬೇಕಾದ ಸೂಕ್ತ ದಾಖಲೆ ಪತ್ರಗಳನ್ನು ಒದಗಿಸದಿದ್ದಾಗ, ವಿದ್ಯಾರ್ಥಿಗಳು ತಮ್ಮ ವೀಸಾ ಅವಧಿ ಮೀರಿ ಅಮೆರಿಕದಲ್ಲೇ ಉಳಿದಿದ್ದರೆ ಸಹಜವಾಗಿಯೇ ಅವರನ್ನು ಅಕ್ರಮ ವಲಸಿಗರು ಎಂದು ತೀರ್ಮಾನಿಸಿ ವಾಪಸ್ ಕಳಿಸಲಾಗುತ್ತದೆ ಎಂದು ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ.
ಈ ವಿಚಾರವಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಮಗ್ರ ಮಾಹಿತಿ ನೀಡಿದ್ದು, ಭಾರತ ಸರ್ಕಾರವು ಅಮೆರಿಕ ಜೊತೆಗೆ ಸದೃಢ ಸಂಬಂಧ ಹೊಂದಿದೆ. ದ್ವಿಪಕ್ಷೀಯವಾಗಿ ಉತ್ತಮ ಬಾಂಧವ್ಯ ಇದೆ. ಆದರೆ, ಅಕ್ರಮ ವಲಸೆ ಹಾಗೂ ಅನಧಿಕೃತ ದಾಖಲೆ ನೀಡಿ ಅಮೆರಿಕಗೆ ಭಾರತೀಯರು ವಲಸೆ ಹೋಗುವ ಪ್ರಸಂಗಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ಧಾರೆ.