ಹಾವಿನ ದ್ವೇಷ 12 ವರ್ಷ.. ನನ್ನ ದ್ವೇಷ 100 ವರ್ಷ.. ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದ ಈ ಹಾಡು ಅಮೆರಿಕ-ಇರಾನ್ ಯುದ್ಧಕ್ಕೆ ಹೊಂದಿಕೊಳ್ಳುವಂತಿದೆ. ಹೌದು.. ವಿಶ್ವದ ದೊಡ್ಡಣ್ಣನಿಗೆ ಯಾರೂ ಖಾಯಂ ಗೆಳೆಯರಿಲ್ಲ, ಖಾಯಂ ಶತ್ರುಗಳಿಲ್ಲ. ಇದು ಇತಿಹಾಸದಿಂದ ತಿಳಿದು ಬಂದ ಸತ್ಯವೂ ಹೌದು. ಈಗಿನ ದಿಟವೂ ಹೌದು.. ಅದಕ್ಕೆ ಯಾವಾಗಲೂ ತನ್ನ ಹಿತಾಸಕ್ತಿಯೇ ಮುಖ್ಯ. ಈಗ ಇರಾನ್ ಯುದ್ಧ ಕೂಡ ಅದರ ಒಂದು ಭಾಗ.
100 ವರ್ಷಗಳ ಹಿಂದೆಯೇ ಇರಾನ್ ಮೇಲೆ ಅಮೆರಿಕ, ಬ್ರಿಟನ್ ಕಣ್ಣು ಬಿದ್ದಿದ್ದವು. ಅಮೆರಿಕದ ಸಿಎಐ ಸಂಚಿಗೆ ಅವತ್ತೇ ಇರಾನ್ ಬಲಿಯಾಗಿ ಹೋಗಿತ್ತು. ಈಗ ಚೇತರಿಸಿಕೊಂಡು ಎದ್ದು ನಿಲ್ಲಬೇಕು ಅನ್ನುವಷ್ಟರಲ್ಲೇ ಮತ್ತೆ ದೊಡ್ಡಣ್ಣನ ದ್ವೇಷ ತಾಂಡವವಾಡುತ್ತಿದೆ. ಈಗ ಇಸ್ರೇಲ್ ದಾಳಿಗೆ ಇರಾನ್ ನ ತೈಲಾಗಾರಗಳು ಹೊತ್ತಿ ಉರಿಯುತ್ತಿವೆ. ಈ ಪಿತೂರಿ ಈಗಷ್ಟೇ ಅಲ್ಲ 100 ವರ್ಷಗಳ ಹಿಂದೆಯೇ ಕಾರ್ಯರೂಪಕ್ಕೆ ಬಂದಿತ್ತು. ಬ್ರಿಟಿಷರು, ಅಮೆರಿಕನ್ನರು ಇರಾನ್ ನಾಶಕ್ಕೆ ಶತಕ ವರ್ಷದ ಹಿಂದೆಯೇ ನಾಂದಿ ಹಾಡಿದ್ದರು.
1901ರಲ್ಲಿ ಬ್ರಿಟಿಷ್ ಉದ್ಯಮಿ ವಿಲಿಯಮ್ ನಾಕ್ಸಾ ಡಾರ್ಸಿ ಇರಾನ್ ಜೊತೆಗೆ ತೈಲ ವಿಷಯದಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆಗ ಇರಾನ್ ನ ತೈಲದಿಂದ ಬ್ರಿಟನ್ ಶ್ರೀಮಂತವಾಯಿತು. ಇನ್ನೊಂದೆಡೆ ಇರಾನ್ ಬಡವಾಗುತ್ತಾ ಹೋಯ್ತು. ಹೀಗಾಗಿ ಇರಾನ್ ಆಳುತ್ತಿದ್ದ ರಾಜರು ಯುರೋಪ್ ನಿಂದ ಸಾಲ ಪಡೆದಿದ್ರು. ಆ ಸಾಲ ತೀರಿಸಲು ದೇಶದ ತೈಲವನ್ನೆಲ್ಲ ಮಾರಾಟ ಮಾಡೋಕೆ ನಿಂತ್ರು. ತೀರಾ ಕೆಟ್ಟ ಸ್ಥಿತಿಗೆ ಇರಾನ್ ಸಿಲುಕಿತು. ಆ ವೇಳೆ 1951ರಲ್ಲಿ ಮೊಹಮ್ಮದ್ ಮೊಸಾದೆ ಇರಾನ್ ನ ಪ್ರಧಾನಿಯಾದ್ರು. ಅವರು ಇರಾನಿನ ತೈಲವನ್ನು ರಾಷ್ಟ್ರೀಕರಣ ಮಾಡಿ ತೈಲದ ಲಾಭ ಇರಾನ್ ಜನರಿಗೆ ಮಾತ್ರ ಸಿಗುವಂತೆ ಮಾಡಿದರು. ಈ ನಿರ್ಧಾರಕ್ಕೆ ಕೆಂಡವಾದ ಬ್ರಿಟನ್, ಅಮೆರಿಕ ಮೊರೆ ಹೋಯ್ತು. ತೈಲದ ಮೇಲೆ ಕಣ್ಣಿಟ್ಟಿದ್ದ ಅಮೆರಿಕಕ್ಕೆ ಇದೊಂದು ಸುವರ್ಣವಕಾಶದಂತಾಗಿ 1951ರಲ್ಲಿ ಅಮೆರಿಕ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ) ಇರಾನ್ ಗೆ ಎಂಟ್ರಿ ಕೊಟ್ಟೇ ಬಿಟ್ಟಿತ್ತು. ಆಗ ಆಪರೇಷನ್ ಅಜಾಕ್ಸ್ ಆರಂಭಿಸಿತು.
ಆ ವೇಳೆ ಬ್ರಿಟನ್ ಮತ್ತು ಅಮೆರಿಕ ಸೇರಿಕೊಂಡು ಇರಾನ್ ನ ಮೇಲೆ ದಿಗ್ಬಂಧನ ಹೇರಿದವು. ಹೀಗಾಗಿ ಇರಾನ್ ನ ತೈಲವನ್ನು ಬೇರೆ ಯಾರೂ ಖರೀದಿಸುವಂತಿರಲಿಲ್ಲ. ಆ ಮೂಲಕ ಇರಾನ್ ನನ್ನ ಮೂಲೆಗುಂಪು ಮಾಡುವ ಯತ್ನ ಶುರುವಾಗಿತ್ತು. ಹೀಗಾಗಿ ತೈಲ ಮಾರಾಟವಾಗದೆ ಇರಾನ್ ನಲ್ಲಿ ಆರ್ಥಿಕ ಸಂಕಷ್ಟ ಶುರುವಾಯಿತು. ಜನ ರೋಸಿ ಹೋದ್ರು. ಇದೇ ಸಮಯ ನೋಡಿಕೊಂಡು ಅಮೆರಿಕ ಗುಪ್ತಚರ ಇಲಾಖೆ ಇರಾನ್ ನಲ್ಲಿ ತನ್ನ ಆಟ ಆರಂಭಿಸಿತು. ಸರ್ಕಾರದ ವಿರುದ್ಧ ಪಿತೂರಿ ಶುರುವಾಯ್ತು. ಇರಾನಿನ ಪತ್ರಿಕೆಗಳಲ್ಲಿ ಪ್ರಧಾನಿ ಮೊಸಾದೆ ವಿರುದ್ಧ ಪ್ರಖರ ಲೇಖನಗಳು ಪ್ರಕಟವಾಗುವುದಕ್ಕೆ ಶುರುವಾಯ್ತು. ಜನಾಭಿಪ್ರಾಯ ಮೊಸಾದೆ ವಿರುದ್ಧ ತಿರುಗಿ ಬಿತ್ತು. ಇನ್ನೊಂದೆಡೆ ಸಿಎಐ, ಇರಾನ್ ನ ವಿರೋಧ ಪಕ್ಷಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಸರ್ಕಾರದ ವಿರುದ್ಧ ಜನಾಂದೋಲನ ಶುರುವಾಯ್ತು. ಅಷ್ಟೇ ಅಲ್ಲ, ಮೊಸಾದೆ ವಿರುದ್ಧದ ಕೆಲವು ಮಿಲಿಟರಿ ಅಧಿಕಾರಿಗಳು ಈ ಬಲೆಗೆ ಬಿದ್ದರು. ಅಂತಿಮವಾಗಿ ಅದೇ ಮಿಲಿಟರಿ ಅಧಿಕಾರಿಗಳು ಮೊಸಾದೆಯವರನ್ನ ಬಂಧಿಸಿಟ್ರು. ಇವೆಲ್ಲ ಜನಾಕ್ರೋಶದ ಹೆಸರಲ್ಲಿ ನಡೆದವು. ಆದರೆ ಇದರ ಹಿಂದೆ ಬ್ರಿಟನ್ ಮತ್ತು ಅಮೆರಿಕ ಇದ್ದವು.
ಅಂತಿಮವಾಗಿ 1953ರಲ್ಲಿ ಅಮೆರಿಕದ ಕೈಗೊಂಬೆ ಆದ ಇರಾನ್ ಶಾ ಮೊಹಮ್ಮದ್ ರೇಝ್ ಪಹ್ಲವಿ ಅವರನ್ನ ಅಧಿಕಾರಕ್ಕೆ ತಂದಿತು. ಆಗ ಮತ್ತೆ ಇರಾನ್ ನಲ್ಲಿ ರಾಜನ ಆಡಳಿತ ಶುರುವಾಯಿತು. ಶಾ ಆಡಳಿತವು ಪಾಶ್ಮಿಮಾತ್ಯ ಸಂಸ್ಕೃತಿ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿತು. ಆಗ ಶಾ, ಜನರ ಭಾವನೆಗಳಿಗಿಂತ ಅಮೆರಿಕದ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡತೊಡಗಿದರು. ಇರಾನ್ ಆಧುನಿಕ ಜಗತ್ತಿಗೆ ತನ್ನನ್ನು ತೆರೆದುಕೊಳ್ತು. ಮಹಿಳೆಯರಿಗೆ ಶಿಕ್ಷಣ, ವಾಹನ ಚಾಲನೆ ಮತ್ತು ಪಾಶ್ಚಿಮಾತ್ಯ ಉಡುಪು ಧರಿಸುವ ಸ್ವಾತಂತ್ರ್ಯ ಸಿಕ್ತು. ಆದರೆ ಒಳಗೊಳಗೆ ಭ್ರಷ್ಟಾಚಾರ ಮತ್ತು ಜನರ ಮೇಲಿನ ದೌರ್ಜನ್ಯ ಹೆಚ್ಚಾಯ್ತು.
ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿ ಉಂಟಾಯಿತು. ಆಗ ಆಯತೊಪ್ಪ ಅಲಿ ಖಮೇನಿ ಎಂಟ್ರಿ ಕೊಟ್ಟರು. ಶಾ ಅವರ ಅತಿಯಾದ ಪಾಶ್ಚಿಮಾತ್ಯ ಒಲವು ಮತ್ತು ಭ್ರಷ್ಟಾಚಾರದ ವಿರುದ್ಧ ಜನರು ತಿರುಗಿ ಬಿದ್ದಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಖಮೇನಿ ಅದನ್ನೆಲ್ಲ ಸರಿ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ರು. ಜನ ಖಮೇನಿಗೆ ಜೈ ಅಂದ್ರು, 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯಾಯ್ತು. ಶಾ ದೇಶ ಬಿಟ್ಟು ಓಡಿ ಹೋದ್ರು. ಆಯೊತುಲ್ಲಾ ಖಮೇನಿ ದೇಶದ ಸುಪ್ರೀಮ್ ಲೀಡರ್ ಆದರು.
ಖಮೇನಿ ಎಂಟ್ರಿಯಿಂದ ಇರಾನ್ ಒಂದು ಇಸ್ಲಾಮಿಕ್ ಗಣರಾಜ್ಯವಾಗಿ ಬದಲಾಯಿತು. ಅಂದಿನಿಂದ ಇಂದಿನವರೆಗೆ ಇರಾನ್ ಮತ್ತು ಅಮೆರಿಕಾ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು, ಈಗ ದೊಡ್ಡ ಸಂಘರ್ಷವಾಗಿ ಮಾರ್ಪಟ್ಟಿದೆ. ಇರಾನ್ ಸರ್ವನಾಶವೇ ನನ್ನ ಗುರಿ ಅಂತಾ ಟ್ರಂಪ್ ಹೇಳಿದ್ದಾರೆ..ಈ ಯುದ್ಧ ಎಲ್ಲಿಗೆ ಹೋಗಿ ನಿಲ್ಲತ್ತೆ ಕಾಯ್ದು ನೋಡಬೇಕಿದೆ.
ಇದನ್ನೂ ಓದಿ : ಗಲ್ಫ್ ಕೊತಕೊತ.. ಭಾರತದ ಆರ್ಥಿಕ ಭಂಡಾರಕ್ಕೆ ಬೆಂಕಿ!


















