ಅಹಮದಾಬಾದ್: ಗುಜರಾತ್ನಿಂದ ಹೊರಟಿದ್ದ ಅಹಮದಾಬಾದ್-ಲಂಡನ್ ಏರ್ಇಂಡಿಯಾ ವಿಮಾನವು ದುರಂತಕ್ಕೀಡಾಗಿ 2 ದಿನಗಳ ಕಳೆದ ಬಳಿಕ ವಿಮಾನದ ಗಗನಸಖಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ವಿಮಾನದ ಬಾಲದ ಅವಶೇಷದ ಮಧ್ಯೆ ಗಗನಸಖಿಯ ಮೃತದೇಹವನ್ನು ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ) ಪತ್ತೆಹಚ್ಚಿದೆ. ವಿಮಾನ ದುರಂತ ಘಟನೆಗೆ ಸಂಬಂಧಿಸಿದಂತೆ ಎನ್ಎಸ್ಜಿ ತನಿಖೆ ನಡೆಸುತ್ತಿದ್ದು, ತನಿಖೆಯ ಭಾಗವಾಗಿ ಅವಶೇಷಗಳಡಿ ತಡಕಾಡುತ್ತಿದ್ದಾಗ, ಗಗನಸಖಿಯ ಮೃತದೇಹ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಷ್ಟೇ ವಿಮಾನವು ಅಪ್ಪಳಿಸಿದಂಥ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನ ಚಾವಣಿಯಲ್ಲಿ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು.
ಸಾವಿನ ಸಂಖ್ಯೆ 274ಕ್ಕೇರಿಕೆ
ಪ್ರಸ್ತುತ ಎನ್ಎಸ್ಜಿ ಹಾಗೂ ವಿಧಿವಿಜ್ಞಾನ ತಂಡಗಳು ದುರಂತ ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿವೆ. ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 274ಕ್ಕೇರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿರುವವರಾದರೆ, ಉಳಿದವರು ನೆಲದಲ್ಲಿದ್ದವರು ಎನ್ನಲಾಗಿದೆ. ಇಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಸುದ್ದಿಗೋಷ್ಠಿ ನಡೆಸಿ, ಈ ಕುರಿತು ಹೆಚ್ಚಿನ ವಿವರಣೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಏರಿಂಡಿಯಾದ ಎಲ್ಲ ಬೋಯಿಂಗ್ 787-8 ಮತ್ತು 787-9 ವಿಮಾನಗಳ ಸುರಕ್ಷತಾ ತಪಾಸಣೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶಿಸಿದೆ. ಇನ್ನೊಂದೆಡೆ, ಅವಶೇಷಗಳಡಿ ಪತ್ತೆಯಾಗಿರುವ ವಿಮಾನದ ಬ್ಲ್ಯಾಕ್ ಬಾಕ್ಸ್ ನಲ್ಲಿನ ದತ್ತಾಂಶಗಳ ಪರಿಶೀಲನೆ ಕಾರ್ಯವನ್ನು ವಿಮಾನ ಅಪಘಾತ ತನಿಖಾ ಸಂಸ್ಥೆ ಆರಂಭಿಸಿದೆ. ವಿಮಾನ ದುರಂತಕ್ಕೆ ನಿಖರ ಕಾರಣವೇನು ಎನ್ನುವುದು ಇದರ ಪರಿಶೀಲನೆ ಬಳಿಕವೇ ತಿಳಿದುಬರಲಿದೆ. ಬ್ಲ್ಯಾಕ್ ಬಾಕ್ಸ್ ನಲ್ಲಿ ಎಂಜಿನ್ ಸೆಟ್ಟಿಂಗ್ಗಳು, ವಿಮಾನ ಎಷ್ಟು ಎತ್ತರದಲ್ಲಿತ್ತು, ಪೈಲಟ್ ನಿಯಂತ್ರಣ, ಕಾಕ್ಪಿಟ್ನಲ್ಲಿ ನಡೆದಿದ್ದ ಕೊನೆಯ ಸಂಭಾಷಣೆಗಳು ರೆಕಾರ್ಡ್ ಆಗಿರುವ ಕಾರಣ, ಅವುಗಳು ತನಿಖೆಗೆ ಮಹತ್ವರ ತಿರುವು ನೀಡಲಿದೆ.