ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧ ಹಾಗೂ ರಾಜಕೀಯ ಉದ್ವಿಗ್ನತೆಯ ಪರಿಣಾಮ ಭಾರತದ ಕೃಷಿಯ ವಲಯಕ್ಕೂ ತಟ್ಟಿದೆ. ಯುದ್ಧದಿಂದಾಗಿ ತೈಲದ ಆತಂಕ ಇಡೀ ಜಗತ್ತನ್ನು ಕಾಡಿದರೆ, ಕೃಷಿ ಹಾಗೂ ಆಹಾರ ರಫ್ತಿನ ಮೇಲೆಯೂ ಭಾರೀ ಹೊಡೆತ ಬೀಳುತ್ತಿದೆ. ಗಲ್ಫ್ ಯುದ್ಧವು ಭಾರತದ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ.
ತೈಲದ ವಿಷಯದಲ್ಲಿ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಹೇಗೆ ಅವಲಂಬಿತವಾಗಿದೆಯೋ ಹಾಗೆ ಆಹಾರ ಪದಾರ್ಥಗಳ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ಕೂಡ ಭಾರತದ ಮೇಲೆ ಅವಲಂಬಿತವಾಗಿವೆ. ಭಾರತದ ಅಕ್ಕಿ, ಬಾಳೆ ಹಣ್ಣು, ಮಾಂಸ, ಮಸಾಲೆ ಪದಾರ್ಥ ದ್ವಿದಳ ಧಾನ್ಯ, ಕೊಬ್ಬರಿ, ಡೈರಿ ಉತ್ಪನ್ನ, ಚಹಾ, ಖಾದ್ಯ ತೈಲ, ಕೊಬ್ಬರಿ ಸೇರಿದಂತೆ ಇನ್ನೂ ಹತ್ತು ಹಲವು ಆಹಾರ ಪದಾರ್ಥಗಳು ಗಲ್ಫ್ ರಾಷ್ಟ್ರಗಳಿಗೆ ಹೆಚ್ಚಾಗಿ ರಫ್ತಾಗುತ್ತಿದ್ದವು. ರಫ್ತಿನ ವಿಷಯದಲ್ಲಿ ಭಾರತದ್ದು ಶೇ. 70 ಪಾಲು ಎಂದು ವರದಿಗಳು ಹೇಳುತ್ತಿವೆ.
ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ ಸುಮಾರು 11.8 ಬಿಲಿಯನ್ ಡಾಲರ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದೆ. ಭಾರತದ ಆಹಾರ ಹಾಗೂ ಕೃಷಿ ಪದಾರ್ಥಗಳು ಪಶ್ಚಿಮ ಏಷ್ಯಾದ ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್, ಕತಾರ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ ಮತ್ತು ಯೆಮೆನ್ ದೇಶಗಳಿಗೆ ರಫ್ತಾಗುತ್ತಿದ್ದವು. ಈಗ ಇವೆಲ್ಲ ಯುದ್ಧದ ಕರಿಛಾಯೆಗೆ ಸಿಲುಕಿವೆ. ಭೌಗೋಳಿಕ ಸಾಮೀಪ್ಯ ಹಾಗೂ 1 ಕೋಟಿಗೂ ಹೆಚ್ಚು ಭಾರತೀಯರು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಣಾಮ ಭಾರತದ ಆಹಾರ ವಸ್ತುಗಳಿಗೆ ಆ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಸಹಜವಾಗಿಯೇ ಭಾರತದ ಆಹಾರ ರಫ್ತಿಗೆ ಇವೆಲ್ಲ ನೈಸರ್ಗಿಕ ಮಾರುಕಟ್ಟೆ ಒದಗಿಸಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಆದರೆ, ಈಗ ಭಾರತದ ಹಡಗುಗಳು ಹರ್ಮುಜ್ ಜಲಸಂಧಿಯಿಂದ ಹೊರ ಬರುತ್ತಿವೆ. ಇದು ಭಾರತದ ರಾಜತಾಂತ್ರಿಕತೆಯ ಜಯವಾಗಿದ್ದರೂ ಇಲ್ಲಿಂದ ಆಹಾರ ಪದಾರ್ಥಗಳು ರಫ್ತಾಗದಿರುವುದು ಹಿನ್ನಡೆಯಾಗುತ್ತಿದೆ. ವರದಿಯಂತೆ 2025ರಲ್ಲಿ ಭಾರತವು ಪಶ್ಚಿಮ ಏಷ್ಯಾಕ್ಕೆ 7.48 ಶತಕೋಟಿ ಡಾಲರ್ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆ ರಫ್ತು ಮಾಡಿದೆ. ಈ ಪೈಕಿ ಬಾಳೆ ಹಣ್ಣು ರಫ್ತು 396.5 ಮಿಲಿಯನ್ ಡಾಲರ್ ತಲುಪಿದೆ. ಇದು ಭಾರತದ ಒಟ್ಟು ಬಾಳೆಹಣ್ಣಿನ ರಫ್ತಿನ ಶೇ. 79.6ರಷ್ಟು ಎನ್ನಲಾಗಿದೆ. ಬಾಳೆಹಣ್ಣು ಹೆಚ್ಚಾಗಿ ತಮಿಳುನಾಡು, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಂದ ರಫ್ತಾಗುತ್ತಿತ್ತು. ಇದೇ ವರ್ಷದಲ್ಲಿ ಈರುಳ್ಳಿ- ಬೆಳ್ಳುಳ್ಳಿ ರಫ್ತು 111 ಮಿಲಿಯನ್ ಡಾಲರ್, ಇನ್ನಿತರ ತರಕಾರಿ 91.5 ಮಿಲಿಯನ್ ಡಾಲರ್ ನಷ್ಟು ರಫ್ತಾಗಿವೆ.
ಪ್ರತಿ ವರ್ಷ ಭಾರತವು ಭಾರತವು ಪಶ್ಚಿಮ ಏಷ್ಯಾಕ್ಕೆ 4.43 ಶತಕೋಟಿ ಡಾಲರ್ ಮೌಲ್ಯದ ಅಕ್ಕಿ ರಫ್ತು ಮಾಡುತ್ತದೆ. ಇದು ಜಾಗತಿಕ ಅಕ್ಕಿ ರಫ್ತಿನ ಶೇ. 36.7ರಷ್ಟಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಹೆಚ್ಚಾಗಿ ಅಕ್ಕಿ ರಫ್ತು ಮಾಡುತ್ತಿದ್ದವು. ಭಾರತದ ಜಾಯಿಕಾಯಿ, ಏಲಕ್ಕಿ 295.5 ಮಿಲಿಯನ್ ಡಾಲರ್ ನಷ್ಟು ರಫ್ತಾಗಿವೆ. ಜೀರಿಗೆ, ಕೊತ್ತಂಬರಿ ಸೇರಿದಂತೆ ಇನ್ನಿತರ ಮಸಾಲೆ ಬೀಜಗಳ ರಫ್ತು 163 ಮಿಲಿಯನ್ ಡಾಲರ್, ಶುಂಠಿ, ಅರಿಶಿನ 173 ಮಿಲಿಯನ್ ಡಾಲರ್ ಆಗಿದೆ. ಕೇರಳ, ಕರ್ನಾಟಕ, ರಾಜಸ್ಥಾನ, ಗುಜರಾತ್ ನಿಂದ ಇವು ಹೆಚ್ಚು ರಫ್ತಾಗುತ್ತಿದ್ದವು. ಅಲ್ಲದೇ, 240.7 ಮಿಲಿಯನ್ ಡಾಲರ್ ಕಾಫಿ, 410.1 ಮಿಲಿಯನ್ ಡಾಲರ್ ಚಹಾವನ್ನು ರಫ್ತು ಮಾಡಲಾಗಿದೆ. ಕರ್ನಾಟಕ, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳು ರಫ್ತು ಮಾಡುತ್ತವೆ. 2025ರಲ್ಲಿ 1.81 ಶತಕೋಟಿ ಡಾಲರ್ ಮೀನು, ಮಾಂಸ, ಹೆಪ್ಪುಗಟ್ಟಿದ ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.
ಕುರಿ ಮತ್ತು ಮೇಕೆ ಮಾಂಸ ರಫ್ತು 95.2 ಮಿಲಿಯನ್ ಡಾಲರ್ ತಲುಪಿದೆ. ಭಾರತದ ರಫ್ತಿನ ಶೇ. 98.9 ಪಶ್ಚಿಮ ಏಷ್ಯಾಕ್ಕೆ ಹೋಗುತ್ತದೆ. ಸಮುದ್ರಹಾರಗಳನ್ನು ಕೂಡ ಭಾರತ ರಫ್ತು ಮಾಡುತ್ತದೆ. 2025 ರಲ್ಲಿ 281.1 ಮಿಲಿಯನ್ ಡಾಲರ್ ಡೈರಿ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಬೆಣ್ಣೆ ಮತ್ತು ಡೈರಿ ಕೊಬ್ಬುಗಳು ಮತ್ತು ಚೀಸ್, ಮೊಸರನ್ನು ರಫ್ತು ಮಾಡಲಾಗುತ್ತದೆ. ಇದರ ಒಟ್ಟು ರಫ್ತು 203 ಮಿಲಿಯನ್ ಡಾಲರ್ ಆಗಿದೆ. ಆದರೆ, ಯುದ್ಧದಿಂದಾಗಿ ಕೃಷಿ ಉತ್ಪನ್ನ ರಫ್ತಾಗದೆ ಉಳಿದಿದ್ದು, ರೈತರ ಸಂಕಷ್ಟದಲ್ಲಿದ್ದಾರೆ. ಅಲ್ಲದೇ, ಭಾರತದ ರಫ್ತಿಗೆ ಹಿನ್ನಡೆಯಾಗುತ್ತಿದೆ.
ಇದನ್ನೂ ಓದಿ : ಎಲ್ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ



















