ಭಾರತ-ಪಾಕಿಸ್ತಾನ ನಡುವೆ ಯುದ್ಧಕಾಂಡ ಆರಂಭವಾದ ಬೆನ್ನಲ್ಲೇ ಸೇನೆಗೆ ನೂರಾನೆ ಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವರ್ಷದ ಕೇಂದ್ರದ ರಕ್ಷಣಾ ಬಜೆಟ್ ನಲ್ಲಿ ಹೆಚ್ಚುವರಿ 50 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮುಂಬರೋ ಮುಂಗಾರು ಅಧಿವೇಶನದಲ್ಲಿ ಹೆಚ್ಚುವರಿ ಹಣವನ್ನು ಮಂಜೂರು ಮಾಡಿ ಅನುದಾನ ಪಡೆಯಲು ನಿರ್ಧರಿಸಲಾಗಿದೆ. ಇನ್ನು ಈ ಹೆಚ್ಚುವರಿ ಹಣದಲ್ಲಿ ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಗಳ ಖರೀದಿ ಮತ್ತು ರಕ್ಷಣಾ ಸಾಮಾಗ್ರಿಗಳ ಖರೀದಿಗೆ ತೀರ್ಮಾನಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ವಲಯಕ್ಕೆ 6.81 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಇದಕ್ಕೀಗ ಹೆಚ್ಚವರಿಯಾಗಿ ಮತ್ತೆ 50 ಸಾವಿರ ಕೋಟಿಯನ್ನು ನೀಡಲು ನಿರ್ಧರಿಸಿದೆ ಮೋದಿ ಸರ್ಕಾರ. ಹಾಗೆ ನೋಡಿದ್ರೆ ಕಳೆದ ವರ್ಷಕ್ಕಿಂತ ಈ ಬಾರಿ ಬಜೆಟ್ ನಲ್ಲಿ ಶೇಕಡಾ 9.5ರಷ್ಟು ಅನುದಾನವನ್ನು ಹೆಚ್ಚಸಲಾಗಿತ್ತು. ಆದ್ರೆ ದೇಶವೀಗ ಯುದ್ಧದ ನೆರಳಿನಲ್ಲಿರುವುದರಿಂದಾಗಿ 50 ಸಾವಿರ ಕೋಟಿ ಹೆಚ್ಚವರಿ ನೀಡುವ ಮೂಲಕ ಸೇನೆಗೆ ಬಲಭೀಮ ಶಕ್ತಿ ನೀಡಲಾಗುತ್ತಿದೆ.
ಇನ್ನು ಹಿಂದಿನ ಯುಪಿಎ ಸರ್ಕಾರದ ಆಡಳಿತದಲ್ಲಿನ ಅನುದಾನವನ್ನು ಗಮನಿಸಿದ್ರೆ ಮೋದಿ ನೇತೃತ್ವದ ಎನ್ ಡಿಎ ಆಡಳಿತಾವಧಿಯಲ್ಲಿ ರಕ್ಷಣಾ ವಲಯದ ಅನುದಾನ ಮೂರು ಪಟ್ಟು ಹೆಚ್ಚಾಗಿರುವುದು ಗಮನಾರ್ಹ.