ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಚುನಾವಣೆಯ ಕಾವು ಜೋರಾಗಿದೆ. ಈ ಮಧ್ಯೆ ಈ ರಾಜ್ಯದಲ್ಲಿ ಅಧಿಪತ್ಯ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಿರುವ ಬಿಜೆಪಿ (BJP) ‘ಗ್ಯಾಸ್’ ಆಫರ್ ನೀಡಿದೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಈದ್ (Eid) ಮತ್ತು ಮೊಹರಂ (Muharram) ಹಬ್ಬದ ಸಂದರ್ಭದಲ್ಲಿ ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭರವಸೆ ಕೊಟ್ಟಿದ್ದಾರೆ.
ಮೆಂಧಾರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಕುರಿತು ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬವು 90ರ ದಶಕದಿಂದಲೂ ಭಯೋತ್ಪಾದನೆ ಹರಡಿದೆ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆ ಕೊನೆಯಾಗಿದೆ. ಇಲ್ಲಿನ ಯುವಕರ ಕೈಗೆ ಕಲ್ಲುಗಳ ಬದಲಾಗಿ ಲ್ಯಾಪ್ ಟಾಪ್ ನೀಡಲಾಗಿದೆ. ಹೀಗಾಗಿ ಜಮ್ಮು- ಕಾಶ್ಮೀರದ ಅಭಿವೃದ್ಧಿಗೆ ಬಿಜೆಪಿ ಅವಶ್ಯವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಆಡಳಿತವಿದ್ದ ಸಂದರ್ಭದಲ್ಲಿ ಈ ರಾಜ್ಯದಲ್ಲಿ ಸುಮಾರು 40 ಸಾವಿರ ಜನರು ಹತ್ಯೆಯಾಗಿದ್ದರು. ಬರೋಬ್ಬರಿ 3 ಸಾವಿರ ದಿನ ಕಾಶ್ಮೀರ ಮುಚ್ಚಿದ್ದು. ಎಂಟು ವರ್ಷಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು. ಅಬ್ದುಲ್ಲಾ, ಮುಫ್ತಿ , ಮತ್ತು ನೆಹರು-ಗಾಂಧಿ ಕುಟುಂಬ ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವವನ್ನು ನಿಲ್ಲಿಸಿದ್ದವು. ಈ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. 2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಇಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.