ಮೈಸೂರು: ಮುಡಾ ಹಗರದ ಕುಣಿಕೆಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಹಿರಿಯ ನ್ಯಾಯವಾದಿ ರಾಘವನ್ ಅವರು ನ್ಯಾಯಾಧೀಶರ ಮುಂದೆ ಮಂಡಿಸಿದ ವಾದ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಮುಡಾದಿಂದ ಬದಲಿ ನಿವೇಶನ ಪಡೆದ ಬಹುತೇಕ ಸಂದರ್ಭದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು.
1997ರಲ್ಲಿ ಮುಡಾದಿಂದ ಸರ್ವೇ ನಂ 464 3.16 ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. 1998ರಲ್ಲಿ ಭೂಸ್ವಾಧೀನ ಕೈ ಬಿಡಲಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. 2004ರಲ್ಲಿ ಸಿದ್ದರಾಮಯ್ಯ ಪತ್ನಿ ಸಹೋದರನಿಂದ ಜಮೀನು ಖರೀದಿ ಮಾಡಿದ್ದಾರೆ. 2005ರಲ್ಲಿ ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿದೆ. ಆಗಲೂ ಅವರು ಡಿಸಿಎಂ ಆಗಿದ್ದರು ಎಂದು ವಾದಿಸಿದ್ದಾರೆ.
2014ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. ನಮ್ಮ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ದಿ ಕಾರ್ಯ ಬಳಸಿಕೊಂಡಿದೆ. ರಸ್ತೆ, ಪಾರ್ಕ್, ನಿವೇಶನ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಬದಲಿ ಭೂಮಿ ನೀಡುವಂತೆ ಮನವಿ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. 2017ರಲ್ಲಿ ಬದಲಿ ಜಮೀನು ನೀಡಲು ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಆಗಲೂ ಸಿಎಂ ಆಗಿದ್ದರು. ಹೀಗಾಗಿ ಎಲ್ಲ ಕಾರಣಗಳಿಂದಲೂ ಸಿದ್ದರಾಮಯ್ಯ ಪ್ರಭಾವ ಕೆಲಸ ಮಾಡಿದೆ ಎಂದು ವಾದಿಸಿದ್ದಾರೆ. ಸದ್ಯ ಈ ವಾದ ಸಿದ್ದರಾಮಯ್ಯಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.