ಬೆಂಗಳೂರು ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನವಾಗಿದೆ ಎಂದು ದೂರು ಕೊಟ್ಟಿದ್ದ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಈಗ ಬೆಳಕಿಗೆ ಬಂದಿದೆ.
‘ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಏಜೆನ್ಸಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52), ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರನ್ನು ಬಂಧಿಸಿದ್ದಾರೆ.
ಬೆಳ್ಳಂದೂರು ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಕಳ್ಳರ ಗ್ಯಾಂಗ್, ಎಟಿಎಂ ಕಟ್ ಮಾಡಿ ಕಳ್ಳತನ ಮಾಡಿದ್ದರು. ಆದರೆ, ಆ ಗ್ಯಾಂಗ್ ಗೆ ಕೇವಲ 5 ಸಾವಿರ ಹಣ ಮಾತ್ರ ಸಿಕ್ಕಿದೆ. ಆದರೆ, ಮರುದಿನ ಬ್ಯಾಂಕ್ ಸಿಬ್ಬಂದಿ 16.5 ಲಕ್ಷ ಕಳ್ಳತನ ಆಗಿದೆ ಎಂದು ದೂರು ನೀಡಿದ್ದರು.
ಆದರೆ, ಹಣ ಹಾಕಲು ಬಂದಿದ್ದ ಏಜೆನ್ಸಿಯವರು ಹಣವೇ ಹಾಕಿರಲಿಲ್ಲ. ಕೆಲ ಟೆಕ್ನಿಕಲ್ ಎರರ್ ಕಾರಣಕ್ಕೆ ರಿಸಿಪ್ಟ್ ಮಾತ್ರ ಬಂದಿದ್ದು, ಹಣ ಹಾಕಿರಲಿಲ್ಲ. ಮರುದಿನವೇ ಕಳ್ಳತನ ಆಗಿದ್ದು, ಹಣ ಹಾಕಿದ್ದೀವಿ, ಅದೇ ಹಣ ಕಳ್ಳತನ ಆಗಿದೆ ಎಂದು ಏಜೆನ್ಸಿಯವರು ಹೇಳಿದ್ದಾರೆ. ಇತ್ತ ಏಜೆನ್ಸಿಯವರ ಮಾತಿನಂತೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದರು. ಈಗ ಪೊಲೀಸರು ಪ್ರಕರಣ ಬೇಧಿಸಿ, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.