
ವಿಶ್ವ ತಾಯಂದಿರ ದಿನದ ವಿಶೇಷವಾಗಿ ಪ್ರಪಂಚವೇ ತಾಯಂದಿರಿಗೆ ತಲೆಬಾಗಿ ನಿಂತಿತ್ತು. ಜಗದಗಲ, ವಿಶೇಷವಾದ ಕಾರ್ಯ ಮಾಡಿ ಪ್ರತಿ ತಾಯಂದಿರಿಗೂ ಗೌರವ ಸಲ್ಲಿಸಲಾಯಿತು. ಅದೇ ಹಾದಿಯಲ್ಲಿ ಬೆಂಗಳೂರಿನ ನೆಲಮಂಗಲದ “ಹಿತಚಿಂತನ ಚಾರಿಟೇಬಲ್ ಟ್ರಸ್ಟ್” ನವರು ತಾಯಂದಿರ ಹಿತ ಕಾಯುವ ವಿಶೇಷ ಕಾರ್ಯ ಮಾಡುವ ಮೂಲಕ, ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನೆಲಮಂಗಲ ತಾಲೂಕಿನ ಭೈರಶೆಟ್ಟಿಹಳ್ಳಿಯ ಹಿತಚಿಂತನ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ “ಹಿತಚಿಂತನ ಚಾರಿಟೇಬಲ್ ಟ್ರಸ್ಟಿನವರು, “ವಿಶ್ವ ತಾಯಂದಿರ ದಿನದ ಪ್ರಯುಕ್ತ, “ಸ್ತನ ಕ್ಯಾನ್ಸರ್ ತಪಾಸಣೆ” ಹಾಗೂ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಹಮ್ಮಿಕೊಂಡು ಯಶಸ್ವಿಯಾದರು. ನೂರಾರು ಜನ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡು, ಉಚಿತ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುಮಾರು ಐದು ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಔಷದಿಯನ್ನು ಬಡ ಮಹಿಳೆಯರಿಗೆ ಉಚಿತವಾಗಿ ವಿತರಿಸಲಾಯಿತು.
ಈ ವಿಶೇಷದ ಬಗ್ಗೆ “ಹಿತಚಿಂತನ ಚಾರಿಟೇಬಲ್ ಟ್ರಸ್ಟ್”ನ ವ್ಯವಸ್ಥಾಪಕ ನಿರ್ದೇಶಕ ವಿ.ರಾಮಸ್ವಾಮಿ”ಯವರು ಮಾತನಾಡಿ, “ಈ ಸೇವೆ ನಿರಂತರವಾಗಿ ನಡೆಯಲಿದೆ. ರಾಜ್ಯಾದ್ಯಂದ ಯಾವುದೇ ರೋಗಿಗಳು ಕರೆ ಮಾಡಿದರೂ, ಅವರಿಗೆ ಉಚಿತ ಔಷದಿ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಟ್ರಸ್ಟ್ ವತಿಯಿಂದ ಔಷದಿಯನ್ನು ಕೊರಿಯರ್ ಮೂಲಕ ವಿತರಣೆ ಮಾಡಲಾಗುತ್ತದೆ. ಈಗಾಗಲೆ ಬೆಂಗಳೂರು, ಬೆಳಗಾವಿ, ಮಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಸಭೆಯಲ್ಲಿ ನೆರೆದ ತಾವುಗಳೂ ಸಹ ಆಪತ್ಕಾಲದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಿ” ಎಂದು ಮನವಿ ಮಾಡಿದರು

ಈ ವಿಶೇಷ ಕಾರ್ಯಕ್ರಮವನ್ನು ಮಹಿಳಾ ಸಾಧಕಿ, “ಬೆಳಕು” ಸಂಸ್ಥೆಯ ಅಧ್ಯಕ್ಷರಾದ “ಅಶ್ವಿನಿ ಅಂಗಡಿ” ಉದ್ಘಾಟಿಸಿ, “ಸಾಧನೆಗೆ ಅಂಗ ವೈಕಲ್ಯ ಅಡ್ಡಿ ಬರುವುದಿಲ್ಲ; ಬದುಕಲ್ಲಿ ಎನೇ ಬಂದರೂ, ಧೈರ್ಯದಿಂದ ಎದುರಿಸಿ” ಎಂದು, ನೆರೆದಿದ್ದ ಮಹಿಳೆಯರಿಗೆ ಕರೆಕೊಟ್ಟರು.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವೈದ್ಯೆ, ಕ್ಯಾನ್ಸರ್ ತಜ್ಞೆ ಡಾ. ಸಿ.ಯು. ಪೂವಮ್ಮ ಮಾತನಾಡಿ ” ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರಕೆಯಿಂದ ಇರುವಂತೆ ಸಲಹೆ ನೀಡಿ, ” ಮಹಿಳೆಯರು ಮುಜುಗರದಿಂದ ತಮ್ಮ ಸಮಸ್ಯೆ ಮುಚ್ಚಿಡುವುದರಿಂದಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಎದೆಯಲ್ಲಿ ಯಾವುದೇ ಥರದ ಗಡ್ಡೆ ಕಾಣಿಸಿಕೊಂಡರೂ, ನಿರ್ಲಕ್ಷ್ಯ ಮಾಡದೆ, ಮುಜುಗರ ಪಡೆದೆ, ತಮ್ಮ ತಾಯಿ, ಅಕ್ಕ- ತಂಗಿಯರ ಬಳಿ ಸಮಾಲೋಚಿಸಿ, ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿದಾಗ, ಸಮಸ್ಯೆಯು ಉಲ್ಬಣವಾಗುವ ಮೊದಲೇ ತಡೆಯ ಬಹುದು. ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆಯಲ್ಲಿ ಇಂದು ಭಾರತ, ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಮಹಿಳೆಯರ ಆಧುನಿಕ ಜೀವನ ಶೈಲಿಯೂ ಕಾರಣವಾಗಿದೆ. ಆರೋಗ್ಯಕರ ಜೀವನಶೈಲಿ ರೂಡಿಸಿಕೊಳ್ಳಿ” ಎಂದು ಸಲಹೆ ಇತ್ತರು. ಇನ್ನು ಶ್ವಾಸಕೋಶ ತಜ್ಞ ಡಾ. ಗಣೇಶ್ ಮಾತನಾಡಿ ” ನಿಯಮಿತ ವ್ಯಾಯಾಮ, ಮಿತ ಆಹಾರವೇ, ಅನಾರೋಗ್ಯ ತಡೆವ ದಿವ್ಯ ಔಷದ” ಎಂದು ಸಲಹೆ ನೀಡಿ ತಾಯಂದಿರಿಗೆ ವಿಶ್ವ ತಾಂದಿರ ದಿನದ ಶುಭಕೋರಿದರು.
ಕಾರ್ಯಕ್ರಮದಲ್ಲಿ ಹಿತಚಿಂತನಾ ಟ್ರಸ್ಟಿನ ವ್ಯವಸ್ಥಾಪಕ ಮಂಡಳಿ, ಟ್ರಸ್ಟಿಗಳು ಹಾಗು ಸಿಎನ್ ಆರ್ ಗ್ರೂಪಿನವರು, ವಿಸಿಎನ್ಆರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ವಿಸಿಎನ್ಆರ್ ಗ್ರೂಪಿನವರು, ನೆಲಮಂಗಲ ಸುತ್ತಮುತ್ತಲ ಜನತೆ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಿದರು. ಒಟ್ಟಿನಲ್ಲಿ ತಾಯಂದಿರ ಗಂಭೀರ ಖಾಯಿಲೆಗೆ, ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷದಿ ಪೂರೈಕೆ ಮಾಡುವ ಮೂಲಕ ವಿಶ್ವ ತಾಯಂದಿರ ದಿನವನ್ನು “ವಿಶೇಷವಾಗಿ ಆಚರಿಸಿದ ‘ಹಿತಚಿಂತನಾ ಚಾರಿಟೇಬಲ್ ಟ್ರಸ್ಟ್’ನ” ಈ ಮಹತ್ಕಾರ್ಯ ಶ್ಲಾಘನೀಯ ಮತ್ತು ಅರ್ಥಪೂರ್ಣ.



















