ವೃಂದಾವನ: ಶ್ರೀಕೃಷ್ಣನ ಲೀಲಾಕ್ಷೇತ್ರವಾದ ಉತ್ತರ ಪ್ರದೇಶದ ವೃಂದಾವನದಲ್ಲಿ ಬಂಕೆ ಬಿಹಾರಿ ದೇವಸ್ಥಾನದಷ್ಟೇ ಅಪಾರ ಆಧ್ಯಾತ್ಮಿಕ ಮಹತ್ವ ಪಡೆದಿರುವ ಮತ್ತೊಂದು ಪವಿತ್ರ ಸ್ಥಳವೆಂದರೆ ಅದು ‘ನಿಧಿಫಥ’ (ನಿಧಿಚಿನ್ನ/ನಿಧಿಬನ). ಸಾಮಾನ್ಯ ದೇವಾಲಯಗಳಿಗಿಂತ ತೀರಾ ಭಿನ್ನವಾಗಿರುವ ಈ ಪವಿತ್ರ ವನವು, ಶ್ರೀಕೃಷ್ಣ ಮತ್ತು ರಾಧೆಯರ ಪವಾಡಸದೃಶ ಪೌರಾಣಿಕ ಕಥೆಗಳು ಹಾಗೂ ಅತೀಂದ್ರಿಯ ರಹಸ್ಯಗಳಿಗೆ ಹೆಸರುವಾಸಿಯಾಗಿದೆ.
ಸೂರ್ಯಾಸ್ತದ ಬಳಿಕ ಪ್ರವೇಶ ನಿರ್ಬಂಧ
ನಿಧಿಬನದ ಅತ್ಯಂತ ದೊಡ್ಡ ವಿಸ್ಮಯವೆಂದರೆ ಸೂರ್ಯಾಸ್ತವಾಗುತ್ತಿದ್ದಂತೆ ಇಲ್ಲಿಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಪ್ರತಿದಿನ ಸಂಜೆ ಪೂಜಾರಿಗಳು, ಭದ್ರತಾ ಸಿಬ್ಬಂದಿ ಹಾಗೂ ಭಕ್ತರು ವನದಿಂದ ಹೊರಬಂದ ನಂತರ ಮುಖ್ಯ ದ್ವಾರಗಳಿಗೆ ಬೀಗ ಜಡಿಯಲಾಗುತ್ತದೆ. ರಾತ್ರಿಯ ವೇಳೆಯಲ್ಲಿ ಭಗವಾನ್ ಶ್ರೀಕೃಷ್ಣನು ರಾಧೆ ಮತ್ತು ಗೋಪಿಕೆಯರೊಂದಿಗೆ ಇಲ್ಲಿ ‘ರಾಸಲೀಲೆ’ ನಡೆಸುತ್ತಾನೆ ಎಂಬುದು ಯುಗಯುಗಾಂತರಗಳಿಂದ ನಡೆದುಬಂದಿರುವ ದೃಢವಾದ ನಂಬಿಕೆಯಾಗಿದೆ.
ವಿಶಿಷ್ಟ ತುಳಸಿ ಗಿಡಗಳು ಗೋಪಿಕೆಯರಾಗಿ ಬದಲಾಗುತ್ತಾರೆ!
ನಿಧಿಬನದಲ್ಲಿರುವ ತುಳಸಿ ಗಿಡಗಳ ಆಕಾರವೇ ತೀರಾ ವಿಶಿಷ್ಟ. ಇಲ್ಲಿನ ಗಿಡಗಳು ಅತಿ ಗಿಡ್ಡವಾಗಿದ್ದು, ಒಂದಕ್ಕೊಂದು ಹೆಣೆದುಕೊಂಡು ಜೋಡಿಯಾಗಿ ಬೆಳೆದಿವೆ. ರಾತ್ರಿಯ ಸಮಯದಲ್ಲಿ ಈ ಪ್ರತಿಯೊಂದು ತುಳಸಿ ಗಿಡಗಳು ಗೋಪಿಕೆಯರಾಗಿ ರೂಪಾಂತರಗೊಂಡು ಕೃಷ್ಣನ ರಾಸಲೀಲೆಯಲ್ಲಿ ಪಾಲ್ಗೊಳ್ಳುತ್ತವೆ, ಬಳಿಕ ಮುಂಜಾನೆಯಾಗುತ್ತಿದ್ದಂತೆ ಮತ್ತೆ ಗಿಡಗಳಾಗಿ ಬದಲಾಗುತ್ತವೆ ಎಂದು ನಂಬಲಾಗುತ್ತದೆ. ಇನ್ನು ವನದ ಒಳಗಿರುವ ‘ರಂಗಮಹಲ್’ನಲ್ಲಿ ಪೂಜಾರಿಗಳು ಪ್ರತಿದಿನ ಸಂಜೆ ಹಾಸಿಗೆ, ಕುಡಿಯುವ ನೀರು, ಸಿಹಿ ತಿಂಡಿ, ಕಾಡಿಗೆ ಹಾಗೂ ಕನ್ನಡಿಗಳನ್ನು ಇಟ್ಟು ಬೀಗ ಹಾಕುತ್ತಾರೆ. ಮರುದಿನ ಬೆಳಿಗ್ಗೆ ಬಾಗಿಲು ತೆರೆದಾಗ ಹಾಸಿಗೆಯನ್ನು ಯಾರೋ ಬಳಸಿದಂತೆ, ನೀರು ಮತ್ತು ತಿಂಡಿ ಖಾಲಿಯಾದಂತೆ ಕಾಣುವುದು ಭಕ್ತರಲ್ಲಿ ಅಪಾರ ಆಶ್ಚರ್ಯ ಮೂಡಿಸಿದೆ.
ಕತ್ತಲಾದ ಮೇಲೆ ಪ್ರವೇಶಕ್ಕೆ ಏಕಿಲ್ಲ?
ಸ್ಥಳೀಯ ನಂಬಿಕೆಗಳ ಪ್ರಕಾರ, ರಾತ್ರಿಯ ಸಮಯದಲ್ಲಿ ನಡೆಯುವ ದಿವ್ಯ ರಾಸಲೀಲೆಯನ್ನು ರಹಸ್ಯವಾಗಿ ನೋಡಲು ಯತ್ನಿಸಿದವರು ತಮ್ಮ ದೃಷ್ಟಿ, ಬುದ್ಧಿಮತ್ತೆ ಅಥವಾ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಈ ಕಾರಣಕ್ಕಾಗಿ ಸಂಜೆಯಾಗುತ್ತಿದ್ದಂತೆ ವನವನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗುತ್ತದೆ.
ವೀಕ್ಷಣೆಯ ಸಮಯ ಮತ್ತು ಪ್ರವೇಶದ ವಿವರ
ಈ ಪವಿತ್ರ ವನವನ್ನು ವೀಕ್ಷಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಏಪ್ರಿಲ್ನಿಂದ ಸೆಪ್ಟೆಂಬರ್ ವರೆಗಿನ ಬೇಸಿಗೆಯ ಅವಧಿಯಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 1.00 ಹಾಗೂ ಸಂಜೆ 3.30 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ಅವಕಾಶವಿರುತ್ತದೆ. ಚಳಿಗಾಲದಲ್ಲಿ (ಅಕ್ಟೋಬರ್ನಿಂದ ಮಾರ್ಚ್) ಬೆಳಿಗ್ಗೆ 6.00ರಿಂದ ಮಧ್ಯಾಹ್ನ 1 ಹಾಗೂ ಸಂಜೆ 3.30 ರಿಂದ 7.30 ರವರೆಗೆ ತೆರೆದಿರುತ್ತದೆ.



















