ನವದೆಹಲಿ : ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಭವಿಷ್ಯದ ಕುರಿತಂತೆ ಇದ್ದ ಗೊಂದಲಗಳಿಗೆ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟನೆ ನೀಡಿದೆ. ರಾಜತಾಂತ್ರಿಕ ಕಾರಣಗಳು ಹಾಗೂ ಭಾರತ ತಂಡವು ಅಫ್ಘಾನಿಸ್ತಾನದ ವಿರುದ್ಧ ಸರಣಿ ಆಡಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಪ್ರವಾಸ ರದ್ದಾಗುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆ, ಬಿಸಿಸಿಐ ಮೂಲಗಳು ಈ ಸರಣಿಯ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿವೆ.
ಅಫ್ಘಾನಿಸ್ತಾನ ಸರಣಿ ಹಾಗೂ ಬಾಂಗ್ಲಾ ಪ್ರವಾಸದ ನಡುವೆ ಗೊಂದಲ
ಪೂರ್ವನಿಗದಿತ ವೇಳಾಪಟ್ಟಿಯ ಪ್ರಕಾರ, ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವು ಸೆಪ್ಟೆಂಬರ್ 1ರಿಂದ 13ರವರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಅದೇ ಸೆಪ್ಟೆಂಬರ್ ತಿಂಗಳಿನಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವು ಭಾರತಕ್ಕೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ (ಎಸಿಬಿ) ಅನುಮತಿ ದೊರೆತಿದೆ. ಒಂದೇ ಸಮಯದಲ್ಲಿ ಎರಡು ಸರಣಿಗಳು ಎದುರಾಗಿರುವುದರಿಂದ ಹಾಗೂ ಇತ್ತೀಚಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಉಂಟಾಗಿರುವ ಬಿರುಕಿನಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ಸರಣಿ ರದ್ದಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿತ್ತು.
ಭಾರತ ಸರ್ಕಾರದ ಒಪ್ಪಿಗೆ ಕಡ್ಡಾಯ
ಎಎನ್ಐ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಬಿಸಿಸಿಐ ಪ್ರಸ್ತುತ ಬಾಂಗ್ಲಾದೇಶ ಸರಣಿಯ ಕುರಿತು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತಾವಿತ ಪ್ರವಾಸಕ್ಕೆ ಭಾರತ ಸರ್ಕಾರದ ಔಪಚಾರಿಕ ಒಪ್ಪಿಗೆಗಾಗಿ ಕಾಯುತ್ತಿದೆ. ಬಿಸಿಸಿಐನ ಉನ್ನತ ಮೂಲಗಳು ತಿಳಿಸಿರುವಂತೆ, ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರಷ್ಟೇ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ. “ಭಾರತ ಸರ್ಕಾರದ ಅನುಮೋದನೆ ದೊರೆತ ನಂತರವೇ ಬಾಂಗ್ಲಾದೇಶ ಪ್ರವಾಸ ನಡೆಯಲಿದೆ. ನಾವು ಹೈಕಮಿಷನರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮಾತುಕತೆಗಳು ನಡೆಯುತ್ತಿವೆ, ಆದರೆ ಅಂತಿಮ ನಿರ್ಧಾರವು ಸರ್ಕಾರದ ಅನುಮೋದನೆಯ ಮೇಲೆಯೇ ನಿಂತಿದೆ” ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ವೇಳಾಪಟ್ಟಿ ಹಾಗೂ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ
ಬಿಸಿಸಿಐ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಡುವೆ ಈ ಹಿಂದೆ ಇದ್ದ ಅಸಮಾಧಾನಗಳು ಇದೀಗ ಶಮನಗೊಂಡಿದ್ದು, ಸಂಬಂಧಗಳು ಸುಧಾರಿಸಿವೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸರಣಿ ಆಯೋಜನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ದಿನಾಂಕ ಅಥವಾ ವಿಂಡೋ (ವೇಳಾಪಟ್ಟಿ) ಅಂತಿಮಗೊಂಡಿಲ್ಲ. “ಬಿಸಿಬಿಯೊಂದಿಗಿನ ನಮ್ಮ ಸಂಬಂಧಗಳು ಈಗ ಸುಧಾರಿಸಿವೆ. ನಾವು ನಮ್ಮ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಸರಣಿಗಾಗಿ ನಾವು ಇನ್ನೂ ಯಾವುದೇ ನಿರ್ದಿಷ್ಟ ವಿಂಡೋವನ್ನು ನಿರ್ಧರಿಸಿಲ್ಲ, ಆದರೆ ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಅದಕ್ಕೊಂದು ಸಮಯವನ್ನು ನಿಗದಿಪಡಿಸಲಾಗುವುದು” ಎಂದು ಮೂಲಗಳು ವಿವರಿಸಿವೆ.
ಭಾರತ ಮತ್ತು ಬಾಂಗ್ಲಾ ನಡುವೆ ಉಂಟಾಗಿದ್ದ ಬಿರುಕು
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರವಾಸವು ಕಳೆದ ವರ್ಷವೇ ನಡೆಯಬೇಕಿತ್ತು. ಆದರೆ ರಾಜಕೀಯ ಉದ್ವಿಗ್ನತೆಗಳು ಮತ್ತು ಇತರ ಕಾರಣಗಳಿಂದಾಗಿ ಅದನ್ನು ರದ್ದುಗೊಳಿಸಲಾಗಿತ್ತು. ಇತ್ತೀಚೆಗೆ ನಡೆದ 2026ರ ಟಾಟಾ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಬಾಂಗ್ಲಾದೇಶದ ಏಕೈಕ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದರೆ ಬಿಸಿಸಿಐ ಅವರಿಗೆ ಐಪಿಎಲ್ನಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿದ ಬಳಿಕ ಉಭಯ ಮಂಡಳಿಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.
ಇದರ ಬೆನ್ನಲ್ಲೇ, ಭದ್ರತಾ ಕಾರಣಗಳು ಹಾಗೂ ಬಾಂಗ್ಲಾದೇಶ ಸರ್ಕಾರದ ಸಲಹೆಯನ್ನು ಉಲ್ಲೇಖಿಸಿ ಬಿಸಿಬಿಯು ಭಾರತದಲ್ಲಿ ನಡೆಯಲಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಪಂದ್ಯಗಳನ್ನು ಭಾರತದ ಹೊರಗೆ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಒತ್ತಾಯಿಸಿತ್ತು. ಆದರೆ ಐಸಿಸಿ ಈ ಬೇಡಿಕೆಯನ್ನು ತಳ್ಳಿಹಾಕಿ, ಬಾಂಗ್ಲಾದೇಶ ತಂಡವನ್ನೇ ಟೂರ್ನಿಯಿಂದ ಕೈಬಿಟ್ಟು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತ್ತು. ಬಳಿಕ ಬಿಸಿಬಿ ಅಂದಿನ ಅಧ್ಯಕ್ಷರಾಗಿದ್ದ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರ ನೇತೃತ್ವದಲ್ಲಿ ಢಾಕಾದಲ್ಲಿ ಸಭೆ ನಡೆಸಿ, ಬಿಸಿಸಿಐನೊಂದಿಗಿನ ಸಂಬಂಧವನ್ನು ಪರಿಶೀಲನೆ ನಡೆಸಿತ್ತು. ಇದೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ, ಮುಂಬರುವ ದ್ವಿಪಕ್ಷೀಯ ಸರಣಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್ನಿಂದ ರೋಹಿತ್ ಔಟ್? BCCI ಹಾಗೂ ಆಯ್ಕೆ ಸಮಿತಿ ನಡುವೆ ಭುಗಿಲೆದ್ದ ಭಿನ್ನಮತ!


















