ಬೆಂಗಳೂರು : ಟೀಮ್ ಇಂಡಿಯಾದ ಹೊಸ ವೇಗದ ಬೌಲಿಂಗ್ ಆಸ್ತ್ರವಾಗಿ ಉದಯಿಸುತ್ತಿರುವ ಯುವ ಆಟಗಾರ ಅಶೋಕ್ ಶರ್ಮಾ, ಇತ್ತೀಚೆಗೆ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಪರ ಅದ್ಭುತ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಇದೀಗ ಜಿಂಬಾಬ್ವೆ ವಿರುದ್ಧದ ಮುಂಬರುವ 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ತಮ್ಮ ಈ ಕ್ಷಿಪ್ರ ಬೆಳವಣಿಗೆಯ ಹಿಂದೆ ಗುಜರಾತ್ ಟೈಟನ್ಸ್ ತಂಡದ ಮುಖ್ಯ ತರಬೇತುದಾರ ಆಶಿಶ್ ನೆಹ್ರಾ ಅವರ ಬಹುದೊಡ್ಡ ಪಾತ್ರವಿದೆ ಎಂಬುದನ್ನು ಅಶೋಕ್ ಶರ್ಮಾ ಸ್ಮರಿಸಿಕೊಂಡಿದ್ದಾರೆ. “ನನಗೆ ಯಾವುದೇ ಸಮಸ್ಯೆ ಎದುರಾದರೂ ಅಥವಾ ಅನುಮಾನಗಳಿದ್ದರೂ, ನಾನು ಮೊದಲು ಸಂಪರ್ಕಿಸುವುದು ಆಶಿಶ್ ನೆಹ್ರಾ ಸರ್ ಅವರನ್ನೇ” ಎಂದು ಜಿಯೋ ಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮಧ್ಯರಾತ್ರಿಯಾದರೂ ಸಹಾಯಕ್ಕೆ ಸಿದ್ಧರಿದ್ದ ಆಶಿಶ್ ನೆಹ್ರಾ
ಆಶಿಶ್ ನೆಹ್ರಾ ಅವರು ಕೇವಲ ಕೋಚ್ ಆಗಿ ಮಾತ್ರವಲ್ಲದೆ, ಓರ್ವ ಉತ್ತಮ ಮೆಂಟರ್ ಆಗಿ ತಮ್ಮನ್ನು ಹೇಗೆ ತಿದ್ದಿ ತೀಡಿದರು ಎಂಬುದನ್ನು ಅಶೋಕ್ ಬಿಚ್ಚಿಟ್ಟಿದ್ದಾರೆ. “ನನಗೆ ನನ್ನ ಮೇಲೆಯೇ ಅನುಮಾನಗಳು ಮೂಡಿದಾಗ ಅಥವಾ ಏನಾದರೂ ಪ್ರಶ್ನೆಗಳಿದ್ದಾಗ ನೇರವಾಗಿ ನೆಹ್ರಾ ಅವರ ಬಳಿ ಹೋಗುತ್ತಿದ್ದೆ. ‘ನಿನಗೆ ಏನೇ ಪ್ರಶ್ನೆಗಳಿದ್ದರೂ ಮಧ್ಯರಾತ್ರಿ ಬಂದರೂ ನಾನು ಸಹಾಯ ಮಾಡಲು ಸಿದ್ಧ’ ಎಂದು ಅವರು ಭರವಸೆ ನೀಡಿದ್ದರು. ಪಂದ್ಯಗಳ ನಂತರ ನನ್ನ ಬೌಲಿಂಗ್ ವಿಡಿಯೋಗಳನ್ನು ಅವರ ಜೊತೆ ಕುಳಿತು ವಿಶ್ಲೇಷಿಸುತ್ತಿದ್ದೆ. ಅವರು ನೀಡಿದ ಸಲಹೆಗಳು ಮತ್ತು ನಾನು ಕಲಿಯಬೇಕಾದ ತಂತ್ರಗಳ ಬಗ್ಗೆ ಅವರು ತೋರಿದ ಕಾಳಜಿಯಿಂದಲೇ ಈ ಐಪಿಎಲ್ ಋತುವಿನಲ್ಲಿ ನಾನು ಬಹಳಷ್ಟು ಕಲಿತುಕೊಂಡೆ” ಎಂದು ಅಶೋಕ್ ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.
150 ಕಿ.ಮೀ ವೇಗದ ಬೆರಗು, ಟೆಸ್ಟ್ ಕ್ರಿಕೆಟ್ ಆಡುವ ಕನಸು
ಇತ್ತೀಚಿನ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 154.2 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರಬ್ಬೇರುವಂತೆ ಮಾಡಿದ್ದ ಅಶೋಕ್ ಶರ್ಮಾ, ಸದ್ಯ ಭಾರತದ ಅತ್ಯಂತ ವೇಗದ ಬೌಲರ್ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತದ ಜರ್ಸಿ ತೊಡುವುದು ತಮ್ಮ ಅತಿದೊಡ್ಡ ಕನಸು ಎನ್ನುವ ಅವರು, ಜಿಂಬಾಬ್ವೆ ಸರಣಿಯಲ್ಲಿ ಗರಿಷ್ಠ ವಿಕೆಟ್ಗಳನ್ನು ಕಬಳಿಸಿ ತಮ್ಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತದನಂತರ ಭಾರತದ ಪರ ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್ನಲ್ಲಿ ಕಣಕ್ಕಿಳಿಯುವುದು ತಮ್ಮ ಅಂತಿಮ ಗುರಿ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸ್ಟೇನ್ ಆರಾಧ್ಯ ದೈವ, ಇಶಾಂತ್ ಮತ್ತು ಸಿರಾಜ್ ಮಾರ್ಗದರ್ಶನ
ದಕ್ಷಿಣ ಆಫ್ರಿಕಾದ ದಿಗ್ಗಜ ವೇಗಿ ಡೇಲ್ ಸ್ಟೇನ್ ಅವರನ್ನು ತಮ್ಮ ಆರಾಧ್ಯ ದೈವ ಎಂದು ಹೇಳಿಕೊಂಡಿರುವ ಅಶೋಕ್, ಸ್ಟೇನ್ ಅವರ ಆಕ್ರಮಣಕಾರಿ ಶೈಲಿ ಮತ್ತು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಆರಾಧಿಸುವುದಾಗಿ ತಿಳಿಸಿದ್ದಾರೆ. ಇದಲ್ಲದೆ, ಐಪಿಎಲ್ ಟ್ರೈನಿಂಗ್ ಕ್ಯಾಂಪ್ಗಳಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ ಅವರು ‘ಗುಡ್ ಲೆಂತ್’ (Good Length) ಪ್ರದೇಶದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಮಹತ್ವವನ್ನು ಹೇಗೆ ವಿವರಿಸಿದರು ಎಂಬುದಾಗಿ ಅಶೋಕ್ ಹಂಚಿಕೊಂಡಿದ್ದಾರೆ. ಹಾಗೆಯೇ ಮೊಹಮ್ಮದ್ ಸಿರಾಜ್ ಅವರು ನೆಟ್ಸ್ನಲ್ಲಿ ತನ್ನ ಬೌಲಿಂಗ್ ವೀಕ್ಷಿಸಿ, ಸಣ್ಣಪುಟ್ಟ ತಾಂತ್ರಿಕ ಬದಲಾವಣೆಗಳ ಬಗ್ಗೆ ನೀಡಿದ ಸಲಹೆಗಳು ಕೂಡ ಪಂದ್ಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಸಹಾಯವಾಗಿವೆ ಎಂದು ಅವರು ಹೇಳಿದ್ದಾರೆ.
16 ವಿಕೆಟ್ಗಳನ್ನು ಪಡೆಯುವ ಬದಲು ಲೈನ್ ಮತ್ತು ಲೆಂತ್ ಸರಿಯಾಗಿದ್ದರೆ 24 ವಿಕೆಟ್ಗಳನ್ನು ಪಡೆಯಬಹುದು ಎಂಬ ಇಶಾಂತ್ ಕಿವಿಮಾತನ್ನು ಅವರು ನೆನಪಿಸಿಕೊಂಡಿದ್ದಾರೆ. ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಗಳಲ್ಲಿನ ನಿರಾಸೆಯ ಬಳಿಕ ಇದೀಗ ಭಾರತ ತಂಡ ಪುಟಿದೇಳುವ ಉತ್ಸಾಹದಲ್ಲಿದ್ದು, ಆಶಿಶ್ ನೆಹ್ರಾ ಅವರಂತಹ ದಿಗ್ಗಜರ ಮಾರ್ಗದರ್ಶನದಲ್ಲಿ ಪಳಗಿರುವ ಅಶೋಕ್ ಶರ್ಮಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭರವಸೆಯ ಹೆಜ್ಜೆಗಳನ್ನಿಡಲು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ಟಿ20 ಸ್ಟ್ರೈಕ್ ರೇಟ್ ಕುಸಿತದ ಬಗ್ಗೆ ಮೌನ ಮುರಿದ ತಿಲಕ್ ವರ್ಮಾ.. ಹೇಳಿದ್ದೇನು?



















